ADVERTISEMENT

ಕಸದ ಬುಟ್ಟಿಯಲ್ಲಿ ಬಿದ್ದಿದ್ದ ಜಾತಿ ಗಣತಿ ವರದಿಯನ್ನು CMಗೆ ಕೊಡಲಾಗಿದೆ: ಶಾಮನೂರು

ಲಿಂಗಾಯತರು 2 ಕೋಟಿಯಷ್ಟು ಇದ್ದೇವೆ. ಆದರೆ ವರದಿಯಲ್ಲಿ ಕಡಿಮೆ ತೋರಿಸಲಾಗಿದೆ. ಒಕ್ಕಲಿಗರು, ಬ್ರಾಹ್ಮಣರು ಲಿಂಗಾಯತರು ಎಲ್ಲಾ ಸೇರಿಕೊಂಡು ಹೋರಾಟ ಮಾಡುತ್ತೇವೆ- ಶಾಮನೂರು ಶಿವಶಂಕರಪ್ಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 12:50 IST
Last Updated 2 ಮಾರ್ಚ್ 2024, 12:50 IST
<div class="paragraphs"><p>ಶಾಮನೂರು ಶಿವಶಂಕರಪ್ಪ</p></div>

ಶಾಮನೂರು ಶಿವಶಂಕರಪ್ಪ

   

ದಾವಣಗೆರೆ: ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದಲೇ ಜಾತಿ ಗಣತಿ ಮಾಡಲು ಯೋಚಿಸುತ್ತಿದ್ದೇವೆ’ ಎಂದು ಮಹಾಸಭಾದ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

‘ನಮ್ಮ ಬಳಿ ಹಣ, ಸಿಬ್ಬಂದಿ ಎಲ್ಲವೂ ಇದೆ. ಯಾವಾಗ ಮಾಡಿಸುತ್ತೇವೆ ಎಂದು ಬರೆದುಕೊಡಲು ಆಗುವುದಿಲ್ಲ. ಜಾತಿಗಣತಿ ಮಾಡುವ ಬಗ್ಗೆ ಪ್ರಯತ್ನಿಸುತ್ತಿದ್ದೇವೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಹತ್ತು ವರ್ಷಗಳ ಹಿಂದಿನ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ವರದಿಯನ್ನು ಮುಖ್ಯಮಂತ್ರಿಗೆ ನೀಡಲಾಗಿದೆ. ಕಾಂತರಾಜ ಅವರು ವರದಿ ಬರೆದಿದ್ದಾರೋ ಇಲ್ಲ ಕೆ.ಜಯಪ್ರಕಾಶ್‌ ಹೆಗ್ಡೆ ಅವರು ತಯಾರಿಸಿದ್ದಾರೋ ಗೊತ್ತಿಲ್ಲ. ಲಿಂಗಾಯತರು 2 ಕೋಟಿಯಷ್ಟು ಇದ್ದೇವೆ. ಆದರೆ, ವರದಿಯಲ್ಲಿ ಕಡಿಮೆ ತೋರಿಸಲಾಗಿದೆ. ಒಕ್ಕಲಿಗರು, ಬ್ರಾಹ್ಮಣರು ಲಿಂಗಾಯತರು ಎಲ್ಲಾ ಸೇರಿಕೊಂಡು ಹೋರಾಟ ಮಾಡುತ್ತೇವೆ’ ಎಂದರು.

‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿವಾರು ಜನಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ– 2015’) ವರದಿಯನ್ನು ಸ್ವೀಕಾರ ಮಾಡಿದ್ದಾರೆ ಅಷ್ಟೇ. ಅದನ್ನು ಸದನದಲ್ಲಿ ಪಾಸ್ ಮಾಡಿಲ್ಲ. ಸ್ವೀಕಾರ ಮಾಡಲಿ ಬಿಡಿ ತಪ್ಪೇನಿದೆ. ವರದಿಗೆ ನಮ್ಮ ವಿರೋಧವಂತೂ ಇದ್ದೇ ಇದೆ. ಬಿಡುಗಡೆ ಮಾಡಿದರೆ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಪ್ರತಿಯಿಕ್ರಿಸಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನಿರ್ಧರಿಸುತ್ತಾರೆ. ಯಾರಿಗೆ ಟಿಕೆಟ್ ಕೊಡುತ್ತಾರೋ ಗೊತ್ತಿಲ್ಲ’ ಎಂದರು.

ಅಭಿವೃದ್ಧಿ ಕೆಲಸಗಳಿಗೆ ಪ್ರತಿ ಕೇತ್ರಕ್ಕೆ ಕಾಂಗ್ರೆಸ್ ಪ್ರತಿ ಶಾಸಕರಿಗೆ ₹ 25 ಕೋಟಿ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಲೋಕಸಭಾ ಚುನಾವಣೆ ಅಧಿಸೂಚನೆ ಹೊರಡುವುದಕ್ಕಿಂತ ಮುಂಚೆ ಅವುಗಳಿಗೆ ಟೆಂಡರ್ ಕರೆದು ಭೂಮಿಪೂಜೆ ನೆರವೇರಿಸಬೇಕಿದೆ. ಇಲ್ಲದಿದ್ದರೆ ಎರಡ್ಮೂರು ತಿಂಗಳು ಮುಂದೆ ಹೋಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.