ಬಾಗಲಕೋಟೆ:ಪೌರತ್ವ ಕಾಯ್ದೆ ಜಾರಿ ವಿಚಾರವನ್ನು ಭಾವನಾತ್ಮಕವಾಗಿ ಕೆಣಕುವ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಕೆಲ ಸಂಘಟನೆಗಳಿಂದ ದೇಶದ್ರೋಹದ ಕೆಲಸ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,ದೇಶದ ಆಂತರಿಕ ಭದ್ರತೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಪೌರತ್ವ ಕಾಯ್ದೆಗೆ ಇಡೀ ಸಂಸತ್ ಒಪ್ಪಿಗೆ ಕೊಟ್ಟಿದೆ. ಆದರೆ ಮುಸ್ಲಿಮರನ್ನು ವೋಟ್ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿದೆ. ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂದು ದೇಶದಾದ್ಯಂತ ಬೊಬ್ಬೆ ಹೊಡೆದು ಅನಗತ್ಯವಾಗಿ ಶಾಂತಿ ಕದಡುತ್ತಿದೆ ಎಂದು ಹೇಳಿದರು.
ವೈರಿ ದೇಶಗಳಿಂದ, ಹೊರ ದೇಶಗಳಿಂದ ಅಕ್ರಮವಾಗಿ ಬಂದು ನೆಲೆಸಿದವರನ್ನು ಪತ್ತೆ ಹೆಚ್ಚಿ ದೇಶದಲ್ಲಿ ಆಶ್ರಯ ಕೊಡಬೇಕೊ, ಇಲ್ಲವೇ ಕೊಡಬಾರದೊ ಎಂಬುದನ್ನು ತೀರ್ಮಾನಿಸಲಾಗುತ್ತದೆ. ಹಾಗಿದ್ದರೂ ಕಾಂಗ್ರೆಸ್ ವೃಥಾ ವಿರೋಧಿಸುತ್ತಿದೆ. ಬಿಜೆಪಿಗೆ ಇರುವುದು ದೇಶದ ಭದ್ರತೆ, ಐಕ್ಯತೆ ಹಾಗೂ ಅಭಿವೃದ್ಧಿಯ ಚಿಂತೆಯಾದರೆ, ಕಾಂಗ್ರೆಸ್ಗೆ ಬರೀ ವೋಟ್ಬ್ಯಾಂಕ್ನ ಚಿಂತೆ ಎಂದರು.
’ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಕಿಚಡಿ ಸರ್ಕಾರದ ಮುಖ್ಯಸ್ಥ ಉದ್ಧವ್ಠಾಕ್ರೆ, ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಭೂಮಿಯ ಮೇಲೆ ಜನರು ಬದುಕಿರುವವರೆಗೂ ಬೆಳಗಾವಿ ಕರ್ನಾಟಕದಲ್ಲಿಯೇ ಇರಲಿದೆ‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.