ಶನಿವಾರಸಂತೆ: ಕೊಡಗಿನಲ್ಲಿ ಮತ್ತೊಂದು ಮರಗಳ ಹನನ ಪ್ರಕರಣ ಬೆಳಕಿಗೆ ಬಂದಿದೆ. ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆದಾಳು ಗ್ರಾಮದ ತೋಟದಲ್ಲಿ 60ರಿಂದ 70 ಮರಗಳನ್ನು ಕಡಿಯಲಾಗಿದೆ.
ಅಂದಾಜು 22 ಎಕರೆ ಪ್ರದೇಶದಲ್ಲಿದ್ದ ಕಾಡು ಜಾತಿಯ ಮರಗಳನ್ನು ಕಡಿಯಲಾಗಿದೆ. ಕೇರಳ ಮೂಲದ ವ್ಯಕ್ತಿಯೊಬ್ಬರು ಹೋಮ್ ಸ್ಟೇ ನಿರ್ಮಿಸುವ ಉದ್ದೇಶದಿಂದ ಅನುಮತಿ ಪಡೆಯದೇ ಈ ಮರಗಳನ್ನು ಕಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪರಿಸರ ಪ್ರೇಮಿಗಳ ವಿರುದ್ಧವೇ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.
ನಂತರ, ಶನಿವಾರಸಂತೆ ಪೊಲೀಸರ ಭದ್ರತೆ ಪಡೆದು ಸ್ಥಳಕ್ಕೆ ತೆರಳಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್, ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಆನಂದ್ ಅವರು ಮರ ಕಡಿದವ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಮರಗಳ ಹನನದ ಹಿಂದೆ ಅರಣ್ಯ ಇಲಾಖೆಯೂ ಶಾಮೀಲಾಗಿದೆ ಎಂದು ಅವರೆದಾಳು ಗ್ರಾಮಸ್ಥರು ಆರೋಪಿಸಿದರು.
‘ಮರ ಕಡಿತಲೆ ಮಾಡಲು ಮಾಲೀಕರು ಅನುಮತಿ ಪಡೆದುಕೊಂಡಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಡಿದ ಮರಗಳಿಗೆ ನಂಬರ್ ಹಾಕಲಾಗಿದೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.