ADVERTISEMENT

ಮಂಡ್ಯದಲ್ಲಿ ಮೋದಿ ‘ರೋಡ್ ಶೋ’: 34 ಮರಕ್ಕೆ ಕೊಡಲಿ

ಮಧ್ಯರಾತ್ರಿಯಲ್ಲಿ ಮರಗಳ ಕೊಂಬೆ ಕತ್ತರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 18:04 IST
Last Updated 7 ಮಾರ್ಚ್ 2023, 18:04 IST
ಮಂಡ್ಯ ನಗರ ವ್ಯಾಪ್ತಿಯಲ್ಲಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಮರಗಳ ಕೊಂಬೆಗಳನ್ನು ಕತ್ತರಿಸಿರುವುದು
ಮಂಡ್ಯ ನಗರ ವ್ಯಾಪ್ತಿಯಲ್ಲಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಮರಗಳ ಕೊಂಬೆಗಳನ್ನು ಕತ್ತರಿಸಿರುವುದು   

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಮಾ. 12ರಂದು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ 34 ಮರಗಳ ಕೊಂಬೆಗಳನ್ನು ಬೇಕಾಬಿಟ್ಟಿಯಾಗಿ ಕತ್ತರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಅಂದು ಮಧ್ಯಾಹ್ನ 12ಕ್ಕೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ಮೋದಿ ದಶಪಥ ಹೆದ್ದಾರಿ ಉದ್ಘಾಟಿಸಲಿದ್ದಾರೆ. ನಂತರ ನಗರದ ಪ್ರವಾಸಿ ಮಂದಿರದಿಂದ ಕೆಂಪೇಗೌಡ ಉದ್ಯಾನದವರೆಗಿನ 1.5 ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ. ಅವರ ಭದ್ರತೆಯ ಕಾರಣ ನೀಡಿ ಸೋಮವಾರ ತಡರಾತ್ರಿ ರಸ್ತೆಯ ಎರಡೂ ಬದಿಯ ಮರಗಳ ಕೊಂಬೆಗಳನ್ನು ಕತ್ತರಿಸಿದ್ದಾರೆ.

‘ರಸ್ತೆಗೆ ಬಾಗಿರುವ ಕೊಂಬೆಗಳನ್ನು ಕತ್ತರಿಸಿದ್ದರೆ ಬೇಸರವಾಗುತ್ತಿರಲಿಲ್ಲ. ಆದರೆ, ಮರಗಳ ಅರ್ಧ ಭಾಗವನ್ನೇ ಕಡಿದಿರುವುದು ನೋವುಂಟು ಮಾಡಿದೆ. ಜೀವವಾಯು ನೀಡುತ್ತಿದ್ದ ಈ ಮರಗಳು ಪ್ರಧಾನಿಗೆ ತೊಂದರೆ ನೀಡುತ್ತಿದ್ದವೇ’ ಎಂದು ಪರಿಸರ ಪ್ರೇಮಿ ಮಂಜುನಾಥ್‌ ಪ್ರಶ್ನಿಸಿದರು.

ADVERTISEMENT

ಸಮನ್ವಯತೆ ಕೊರತೆ: ಮರಗಳ ಕೊಂಬೆ ಕತ್ತರಿಸುವ ವಿಚಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿದೆ. ಒಬ್ಬರತ್ತ ಮತ್ತೊಬ್ಬರು ಬೆರಳು ತೋರುತ್ತಿದ್ದಾರೆ.

‘ಪ್ರಧಾನಿ ರ್‍ಯಾಲಿಯಲ್ಲಿ 40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಣಗಿದ್ದ ಕೊಂಬೆ ತೆರವು ಮಾಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದೆ. ಅವರು ಹೇಗೆ ಕಡಿಸಿದ್ದಾರೆ ಎಂಬುದನ್ನು ಪರಿಶೀಲಿಸುವೆ’ ಎಂದು ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಪ್ರತಿಕ್ರಿಯಿಸಿದರು.

ಆದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್‌ ಅವರಿಗೆ ಮರ ಕಡಿದ ಮಾಹಿತಿಯೇ ಇಲ್ಲ. ‘ಜಿಲ್ಲಾಧಿಕಾರಿ ಸೂಚನೆಯಂತೆ ಆರ್‌ಎಫ್‌ಒ ಕ್ರಮ ಕೈಗೊಂಡಿದ್ದಾರೆ. ಆ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ರುದ್ರನ್‌ ತಿಳಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಕೆಳಹಂತದ ಸಿಬ್ಬಂದಿ ಹಾಗೂ ಇತರ ಕಾರ್ಮಿಕರು ಮರಗಳನ್ನು ಕತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮರಗಳಲ್ಲಿ ಒಣಗಿದ, ಬಾಗಿದ ಕೊಂಬೆಗಳಿದ್ದವು. ಅವುಗಳನ್ನು ತೆರವು ಮಾಡಲು ಕೆಳಮಟ್ಟದ ಕೊಂಬೆಗಳನ್ನೂ ತೆರವು ಮಾಡಬೇಕಾಯಿತು. ನಮಗೆ ಸ್ಪಷ್ಟ ಸೂಚನೆ ಇರಲಿಲ್ಲ’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

‘ತಿಂಗಳ ಹಿಂದಷ್ಟೇ ತಾವರೆಗೆರೆಯಲ್ಲಿ ಒಣಗಿದ ಮರ ಬಿದ್ದು ಪೌರಕಾರ್ಮಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬೀಳುತ್ತಿರುವ ಮರ ಕಡಿಯಲು ವರ್ಷದಿಂದ ಒತ್ತಾಯಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ. ಆದರೆ, ಚೆನ್ನಾಗಿರುವ ಮರಗಳನ್ನು ಕಡಿದಿರುವುದು ನಾಚಿಕೆಗೇಡಿನ ಸಂಗತಿ’ ಎಂದು ನಗರಸಭಾ ಸದಸ್ಯ ಶ್ರೀಧರ್‌ ಹೇಳಿದರು.

‘ಎಸ್‌ಪಿಜಿ ಸೂಚನೆ ಇರಲಿಲ್ಲ’
‘ರೋಡ್‌ ಶೋ ಮಾರ್ಗದಲ್ಲಿ ಮರ ಕಡಿಯಲು ಪ್ರಧಾನ ಮಂತ್ರಿಗಳ ವಿಶೇಷ ಭದ್ರತಾ ತಂಡದ (ಎಸ್‌ಪಿಜಿ) ಸೂಚನೆ ಇರಲಿಲ್ಲ. ಸ್ಥಳೀಯವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್‌ಪಿಜಿ ತಂಡದ ಸದಸ್ಯರು ಬುಧವಾರ (ಮಾರ್ಚ್‌ 8) ನಗರಕ್ಕೆ ಭೇಟಿ ನೀಡುತ್ತಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.