ADVERTISEMENT

ಖಾದರ್‌ ವಿರುದ್ಧ ಭ್ರಷ್ಟಾಚಾರ ಆರೋಪ: ನ್ಯಾಯಾಂಗ ತನಿಖೆಗೆ ಕಾಗೇರಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 14:28 IST
Last Updated 28 ಅಕ್ಟೋಬರ್ 2025, 14:28 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಂಗಳೂರು:ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರ ಅವಧಿಯಲ್ಲಿನ ವಿವಾದ, ಗೊಂದಲ, ಭ್ರಷ್ಟಾಚಾರದ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ನಿಕಟಪೂರ್ವ ವಿಧಾನಸಭಾಧ್ಯಕ್ಷರೂ ಆದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ವಿಧಾನಸಭಾಧ್ಯಕ್ಷರ ಕಾರ್ಯಾಲಯದ ಎಲ್ಲ ಟೆಂಡರ್‌ಗಳು ಮಂಗಳೂರು ಮೂಲದ ಕೆಲವರಿಗೇ ಏಕೆ ಸಿಗುತ್ತಿವೆ? ಈ ಕುರಿತು ವಿಧಾನಸಭಾಧ್ಯಕ್ಷರ ಕಚೇರಿಯ ಅಧಿಕಾರಿಗಳ ಅಭಿಪ್ರಾಯ ಏನು? ತುರ್ತಾಗಿ ಸಾಮಗ್ರಿಗಳನ್ನು ಖರೀದಿಸುವ ಅಗತ್ಯ ಇಲ್ಲದಿದ್ದರೂ ತರಾತುರಿ ಮಾಡಿರುವುದು ಏಕೆ? ನನಗೆ ಬಂದಿರುವ ಮಾಹಿತಿ ಪ್ರಕಾರ, ಹಲವು ಖರೀದಿ ಟೆಂಡರ್‌ಗಳನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ. ನಂತರ ಆರ್ಥಿಕ ಇಲಾಖೆ ಜವಾಬ್ದಾರಿ ಹೊತ್ತ ಮುಖ್ಯಮಂತ್ರಿಯೇ ಒಪ್ಪಿಗೆ ಕೊಡಿಸಿದ ಆರೋ‍ಪವಿದೆ’ ಎಂದು ದೂರಿದರು. 

‘ವಿಧಾನಸಭೆಯ ಪ್ರಧಾನ ಬಾಗಿಲಿಗೆ ಬೀಟೆ ಮರದ ಕೆತ್ತನೆಯ ಚೌಕಟ್ಟು ಅಳವಡಿಕೆ, ಸಭಾಂಗಣಕ್ಕೆ ಹೊಸ ಟಿ.ವಿ. ಸೆಟ್‌ ಅಳವಡಿಸಿದ್ದರೂ ಎಐ ಮಾನಿಟರ್‌ ಘಟಕ ಹಾಕಲು ದುಬಾರಿ ಮೊತ್ತ ಖರ್ಚು ಮಾಡಲಾಗಿದೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಚಿತ್ರದ ಗಡಿಯಾರಗಳನ್ನು ಕೊಟ್ಟಿದ್ದಾರೆ. ಮೊಗಸಾಲೆಯಲ್ಲಿ ಯಂತ್ರ ಅಳವಡಿಸಿ ಮಸಾಜ್‌ ಪಾರ್ಲರ್‌ ಮಾದರಿಯಲ್ಲಿ ಬದಲಾಯಿಸಿದ್ದಾರೆ. ಅಧಿವೇಶನ ನಡೆಯುವಾಗ ಸರ್ಕಾರದಿಂದ ಶಾಸಕರಿಗೆ ಊಟ, ಉಪಚಾರದ ವ್ಯವಸ್ಥೆ ಮಾಡುವ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದರು.

ADVERTISEMENT

‘ಶಾಸಕರ ಭವನಕ್ಕೆ ಮಂಚ, ಟೇಬಲ್ ಹಾಕಿಸಿದ್ದಾರೆ. 123 ಸ್ಮಾರ್ಟ್‌ ಎನರ್ಜಿ ಸೊಲ್ಯೂಷನ್‌, 224 ಸೇಫ್‌ ಲಾಕರ್‌, ಅಷ್ಟೇ ಸಂಖ್ಯೆಯ ಡೋರ್‌ ಲಾಕರ್‌ ಖರೀದಿ ಮಾಡಿದ್ದಾರೆ. ಹಾಸು ಹೊದಿಕೆ, ಕಾರ್ಪೆಟ್‌ ಬದಲಿಸಿ, ಸುಣ್ಣ–ಬಣ್ಣ ಹೊಡೆಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕ ಮೇಳಕ್ಕೆ ₹4.5 ಕೋಟಿ ಖರ್ಚು ಮಾಡಿದ್ದಾರೆ. ಸರ್ಕಾರವೇ ಪುಸ್ತಕ ಖರೀದಿಸಿ ಹಂಚಿದ್ದರೂ ಇಷ್ಟಾಗುತ್ತಿತ್ತಾ, ಗೊತ್ತಿಲ್ಲ. ಮಳಿಗೆ, ವಿದ್ಯುತ್‌ ಅಲಂಕಾರ ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರೊಳಗೆ ಇನ್ನೂ ಏನೋ ಇದೆ ಎಂಬ ಅನುಮಾನಗಳು ಮೂಡುತ್ತಿವೆ’ ಎಂದರು.

‘ಯು.ಟಿ. ಖಾದರ್‌ ಅವರು ಈಗ ವಿದೇಶದಲ್ಲೇ ಇದ್ದಾರೆ. ಅವರು ಎಷ್ಟು ದೇಶಗಳಿಗೆ ಹೋಗಿದ್ದಾರೆ. ಸರ್ಕಾರದ ಹಣ ಎಷ್ಟು ಖರ್ಚು ಮಾಡಿದ್ದಾರೆ. ಯಾರ‍್ಯಾರ ಜತೆ ಪ್ರವಾಸ ಮಾಡಿದ್ದಾರೆ ಎನ್ನುವ ಎಲ್ಲ ಅಂಶಗಳೂ ಬಹಿರಂಗವಾಗಬೇಕು. ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಪಕ್ಷಪಾತಿಯಾಗಿದ್ದಾರೆ. ಪೀಠದ ವಿರುದ್ಧವೇ ಆರೋಪಗಳು ಬರುತ್ತಿವೆ. ಹಾಗಾಗಿ, ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಆರೋಪಗಳ ಕುರಿತು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರಿಗೆ ಇದುವರೆಗೂ ಸರ್ಕಾರಿ ವಸತಿಗೃಹ ಹಂಚಿಕೆ ಮಾಡಿಲ್ಲ. ಇಂತಹ ನಡೆ ವ್ಯವಸ್ಥೆಗೆ ಗೌರವ ತರುವುದಿಲ್ಲ 
ವಿಶ್ವೇಶ್ವರ ಹೆಗಡೆ ಕಾಗೇರಿ ನಿಕಟಪೂರ್ವ ವಿಧಾನಸಭಾಧ್ಯಕ್ಷ

‘ಯಾವುದೇ ತನಿಖೆ ಎದುರಿಸಲು ಸಿದ್ಧ’

ಮಂಗಳೂರು: ‘ವಿಧಾನಸಭಾಧ್ಯಕ್ಷರ ಕಾರ್ಯಾಲಯದ ವಿರುದ್ಧ ಮಾಡಿರುವ ಆರೋಪ ದುರುದ್ದೇಶದಿಂದ ಕೂಡಿದೆ. ಎಲ್ಲ ಖರೀದಿಗಳನ್ನು ಕ್ರಮಬದ್ಧವಾಗಿಯೇ ಮಾಡಲಾಗಿದೆ. ಈ ಬಗ್ಗೆ ಯಾವುದೇ ತನಿಖೆ ಎದುರಿಸಲು ಸಿದ್ಧ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ವಿರುದ್ಧ ಮಾಡಿರುವ ಆರೋಪಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ರಾಜಕೀಯಪ್ರೇರಿತ ಆರೋಪಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ’ ಎಂದರು.

ಸಾಮಗ್ರಿ; ಮಾರುಕಟ್ಟೆ ಗರಿಷ್ಠ ದ ರ;ಖರೀದಿಸಿದ ದರ (₹ಗಳಲ್ಲಿ)

ಸ್ಮಾರ್ಟ್‌ ಡೋರ್ ಲಾಕರ್‌;16000;49000

ಸ್ಮಾರ್ಟ್‌ ಸೇಫ್‌ ಲಾಕರ್‌;9000;35000

ಸ್ಮಾರ್ಟ್‌ ಎನರ್ಜಿ ಸೊಲ್ಯೂಷನ್‌;30000;90500

ನೀರು ಶುದ್ಧೀಕರಣ ಘಟಕ;53000;65000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.