ADVERTISEMENT

ಮಂತ್ರಾಲಯ, ಉತ್ತರಾದಿ ಮಠಗಳಿಗೆ ಹೈಕೋರ್ಟ್‌ ಚಾಟಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 19:31 IST
Last Updated 30 ನವೆಂಬರ್ 2021, 19:31 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಪ್ರತಿಬಾರಿಯೂ ಕೋರ್ಟ್ ಆದೇಶ ಪಡೆದೇ ಪೂಜೆ, ಆರಾಧನೆ ನಡೆಸಲು ಮುಂದಾಗುವ ನೀವು ಕೋರ್ಟ್ ಎಂದರೆ ಏನೆಂದುಕೊಂಡಿದ್ದೀರಿ’ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿ ಮಠವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಡಿಸೆಂಬರ್ 2, 3 ಮತ್ತು 4ರಂದು ನಡೆಯಲಿರುವ ಮಠದ ಪೂರ್ವ ಯತಿವರೇಣ್ಯ ಪದ್ಮನಾಭ ತೀರ್ಥರ ಆರಾಧನೆಯನ್ನು, ‘ಯಾರು ಮೊದಲು ನಡೆಸಬೇಕು’ ಎಂಬ ತಕರಾರಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ.

ವಿಚಾರಣೆ ವೇಳೆ ಉಭಯ ಮಠಗಳ ವ್ಯಾಜ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ‘ಸಂವಿಧಾನದ 226ನೇ ವಿಧಿಯ ಉಪಯೋಗ ಆಗಬೇಕಿರುವುದು ಈ ನೆಲದ ಕೃಷಿಕ, ಕಮ್ಮಾರ, ಚಮ್ಮಾರ, ಗಾಣಿಗ, ಸಿಂಪಿಗರಂತಹ ಶೋಷಿತ ಸಮುದಾಯಗಳಿಗೇ ಹೊರತು ನಿಮ್ಮಂತಹವರ ಈ ರೀತಿಯ ವ್ಯಾಜ್ಯಗಳಿಗಲ್ಲ’ ಎಂದು ಚಾಟಿ ಬೀಸಿದೆ.

ADVERTISEMENT

‘ಎರಡೂ ಮಠಗಳಿಗೆ ಮಹಾನ್ ಪರಂಪರೆ ಇದೆ. ಆದರೆ ಇಬ್ಬರೂ ಪ್ರತಿಬಾರಿ ಕೋರ್ಟ್ ಆದೇಶ ಪಡೆದೇ ಆರಾಧನೆ ಮಾಡುವುದನ್ನು ನೋಡಿದರೆ ನೀವು ಮಠ ನಡೆಸುತ್ತಿದ್ದೀರೊ ಅಥವಾ ಯಾವುದಾದರೂ ಕಾಲೇಜು ನಡೆಸುತ್ತಿದ್ದೀರೊ ಎಂಬ ಜಿಜ್ಞಾಸೆ ಉಂಟಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದೆ.

‘ನಿಮ್ಮ ಈ ವ್ಯಾಜ್ಯದ ನಡವಳಿಕೆ ಸಹನೀಯವಲ್ಲ. ಅಂತೆಯೇ ಈ ರೀತಿಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದೂ ತರವಲ್ಲ. ಆದಷ್ಟು ಬೇಗ ಎರಡೂ ಮಠಗಳ ವ್ಯವಸ್ಥಾಪನಾ ಮಂಡಳಿಯವರು ಕೋರ್ಟ್ ಬಳಿಯ ಯಾವುದಾದರೂ ಮರದ ನೆರಳಲ್ಲಿ ಕುಳಿತು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಿ..!" ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಏನಿದು ವ್ಯಾಜ್ಯ?: ‘ನವ ವೃಂದಾವನದ 14 ಎಕರೆ 7 ಗುಂಟೆ ಜಮೀನಿನ ಡಿಕ್ರಿ ನಮ್ಮ ಪರವಾಗಿದೆ. ಆದ್ದರಿಂದ, ಮಂತ್ರಾಲಯದ ಪೀಠಾಧಿಪತಿಗಳು ಈ ಪ್ರದೇಶದ ಮೇಲೆ ಯಾವುದೇ ಹಕ್ಕು ಸಾಧಿಸಲು ಸಾಧ್ಯವಿಲ್ಲ’ ಎಂಬುದು ಉತ್ತರಾದಿ ಮಠದ ವಾದ.

ಇದಕ್ಕೆ ಪ್ರತಿಯಾಗಿ, ‘ವಿವಾದಿತ ಸ್ಥಿರಾಸ್ತಿಯ ಭೂ ದಾಖಲೆಗಳು ಸುಳ್ಳು ಮಾಹಿತಿಯಿಂದ ಕೂಡಿವೆ’ ಎಂಬುದುಮಂತ್ರಾಲಯ ಪೀಠಾಧಿಪತಿಗಳ ಪ್ರತಿವಾದ.

ಉತ್ತರಾದಿ ಮಠದ ಪಾಲಿಗೆ ಅಗ್ರಪೂಜೆ

ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ 2021ರ ಡಿ.2ರಿಂದ ಆರಂಭವಾಗಲಿರುವ ಪದ್ಮನಾಭ ತೀರ್ಥರ 697ನೇ ಆರಾಧನಾ ಮಹೋತ್ಸವದ, ‘ಅಗ್ರಪೂಜೆಯನ್ನು ಉತ್ತರಾದಿ ಮಠದವರು ನಡೆಸಬೇಕು ಮತ್ತು ಉತ್ತರಾರ್ಧದ ಒಂದೂವರೆ ದಿವಸವನ್ನು ರಾಘವೇಂದ್ರ ಸ್ವಾಮಿ ಮಠದವರು ನಡೆಸಬೇಕು’ ಎಂದು ನ್ಯಾಯಪೀಠ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಪದ್ಮನಾಭ ತೀರ್ಥರು ಮಧ್ವಾಚಾರ್ಯರ ಮೊದಲನೇ ಶಿಷ್ಯರಾಗಿದ್ದವರು.

* ಹೈಕೋರ್ಟ್‌ಗೆ ಪ್ರದತ್ತವಾದ ಸಂವಿಧಾನದ 226ನೇ ವಿಧಿಯ ಅವಕಾಶವನ್ನು ಮಠಗಳು ಈ ರೀತಿ ಬಳಸಿಕೊಂಡರೆ ಶೋಷಿತರ ಪಾಡೇನು?

-ಕೃಷ್ಣ ಎಸ್‌.ದೀಕ್ಷಿತ್‌, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.