ADVERTISEMENT

ಮೇಲುಕೋಟೆಗೆ ಉಪರಾಷ್ಟ್ರಪತಿ ನ.9ರಂದು ಭೇಟಿ: ಭದ್ರತೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 13:02 IST
Last Updated 7 ನವೆಂಬರ್ 2025, 13:02 IST
   

ಮಂಡ್ಯ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಪಾಂಡವಪುರ ತಾಲ್ಲೂಕಿನ ಮೇಲುಕೋಟೆಗೆ ನ.9ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೇಲುಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮೈದಾನದಲ್ಲಿ ಶುಕ್ರವಾರ ಹೆಲಿಕಾಪ್ಟರ್‌ ಲ್ಯಾಂಡಿಂಗ್ ಹಾಗೂ ಟೇಕಾಫ್ ಮಾಡಿಸುವ ಮೂಲಕ ಜಿಲ್ಲಾಧಿಕಾರಿ ಕುಮಾರ ಅವರು ಭದ್ರತಾ ಪರಿಶೀಲನೆ ನಡೆಸಿದರು.

ಮೇಲುಕೋಟೆಯ ಹೆಲಿಕಾಪ್ಟರ್ ಲ್ಯಾಂಡಿಂಗ್ ಸ್ಥಳಕ್ಕೆ ಭೇಟಿ ನೀಡಿ ಭಾರತೀಯ ವಾಯುಸೇನೆಯ ಅಧಿಕಾರಿಗಳ ಜೊತೆಗೂಡಿ ಸುರಕ್ಷತೆಯ ಕುರಿತಾಗಿ ಪರಿಶೀಲನೆ ಮಾಡಿದರು.

ಜಿಲ್ಲಾಧಿಕಾರಿ ಸಲಹೆಯಂತೆ ವಾಯುಪಡೆಯ ಅಧಿಕಾರಿಗಳು ಹಲವಾರು ಸಲ ಮೈದಾನದಲ್ಲಿ ಹೆಲಿಕಾಪ್ಟರ್‌ ಇಳಿಸಿ ನಂತರ ಟೇಕಾಫ್ ಮಾಡಿ ಪರೀಕ್ಷಿಸುವ ಮೂಲಕ ಸುರಕ್ಷತೆ ಖಚಿತಪಡಿಸಿಕೊಂಡರು. ಉಪರಾಷ್ಟ್ರಪತಿಯವರು ಭಾರತೀಯ ವಾಯು ಸೇವೆಯ ವಿಶೇಷ ಹೆಲಿಕಾಪ್ಟರ್‌ ಮೂಲಕ ಮೇಲುಕೋಟೆಗೆ ಆಗಮಿಸಿ ಇದೇ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಲ್ಯಾಂಡಿಂಗ್‌ಗೆ ಜಾಗ ಗುರುತು:

ಮೇಲುಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮೈದಾನದಲ್ಲಿ ಉಪರಾಷ್ಟ್ರಪತಿಯವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲು ಮಾತ್ರ ಸ್ಥಳಾವಕಾಶವಿದ್ದು, ಉಪರಾಷ್ಟ್ರಪತಿಯವರೊಂದಿಗೆ ಆಗಮಿಸುವ ಬೆಂಗಾವಲು ಪಡೆಯ ಸೇನಾ ಹೆಲಿಕಾಪ್ಟರ್‌ಗಳನ್ನು ಲ್ಯಾಂಡಿಂಗ್ ಮಾಡಲು ಎಸ್.ಇ.ಟಿ ಪಾಲಿಟೆಕ್ನಿಕ್ ಮೈದಾನದಲ್ಲಿ ಅವಕಾಶ ಮಾಡಲಾಗಿದೆ.

ಯೋಗನರಸಿಂಹಸ್ವಾಮಿ ಬೆಟ್ಟದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟ ಮಾಡುತ್ತಿರುವ ಮತ್ತು ಟೇಕಾಫ್‌ ಆಗುವುದನ್ನು ನೂರಾರು ಸಂಖ್ಯೆಯಲ್ಲಿ ಸೇರಿದ ನಾಗರಿಕರು ಮತ್ತು ವಿದ್ಯಾರ್ಥಿಗಳು ವೀಕ್ಷಿಸಿ ಆನಂದ ಅನುಭವಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್‌. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ವಾಯುಪಡೆಯ ಅಧಿಕಾರಿಗಳು ಹೆಲಿಕಾಪ್ಟರ್‌ ಚಲನವಲನದ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.

‘ಡ್ರೋಣ್‌ ಕ್ಯಾಮೆರಾ ಹಾರಾಟಕ್ಕೆ ನಿರ್ಬಂಧ’

ನ.9 ರಂದು ಉಪರಾಷ್ಟ್ರಪತಿ ಸಂಚರಿಸುವ 15 ಕಿ.ಮೀ ವ್ಯಾಪ್ತಿಯಲ್ಲಿ ಮಾನವ ರಹಿತ ಏರ್-ಕ್ರಾಫ್ಟ್ (ಯುಎವಿ) ಹಾಗೂ ಡ್ರೋಣ್‌ ಕ್ಯಾಮರಾ ಬಳೆಕಯನ್ನು ಕಡ್ಡಾಯವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕುಮಾರ ಅವರು ಆದೇಶ ಹೊರಡಿಸಿದ್ದಾರೆ. 

ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡವುದು. ತಪ್ಪಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಅಗತ್ಯ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಿ, ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಸೇನಾಪಡೆಯಿಂದ ಬಿಗಿ ಭದ್ರತೆ 

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನ.9ರಂದು ಹೆಲಿಪ್ಯಾಡ್‌ನಲ್ಲಿ ಹಾಜರಿದ್ದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಅವರನ್ನು ಸ್ವಾಗತಿಸಿ ಚಲುವನಾರಾಯಣಸ್ವಾಮಿ ದೇವಾಲಯದ ದರ್ಶನ ಪಡೆಯುವವರೆಗೂ ಇರಲಿದ್ದಾರೆ.

ಮೇಲುಕೋಟೆಯಲ್ಲಿ ಭಾರಿ ಭದ್ರತೆ ನಿಯೋಜಿಸಲಾಗುತ್ತಿದೆ. ಇದರೊಟ್ಟಿಗೆ ಭಾರತೀಯ ಸೇನಾಪಡೆ, ಉಪರಾಷ್ಟ್ರಪತಿಗಳ ಬೆಂಗಾವಲು ಪಡೆಗಳು ರಕ್ಷಣಾ ಕಾರ್ಯ ನಿರ್ವಹಿಸಲಿವೆ. ಇದರೊಟ್ಟಿಗೆ ಬಾಂಬ್ ನಿಷ್ಕ್ರಿಯದಳ, ಕ್ಷಿಪ್ರ ಕಾರ್ಯಚರಣೆ ಪಡೆ, ರ‍್ಯಾಪಿಡ್‌ ಫೋರ್ಸ್, ಅಕ್ಷಿಶಾಮಕ ದಳ, ಗೃಹರಕ್ಷಕ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ‌ ಎಂದು ಜಿಲ್ಲಾಧಿಕಾರಿ ಕುಮಾರ ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಬಸವರೆಡ್ಡಪ್ಪ, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ, ಉಪತಹಶೀಲ್ದಾರ್ ರಾಜೇಶ್, ಗ್ರಾಮಾಧಿಕಾರಿ ರಮೇಶ್, ದೇವಾಲಯದ ಇಒ ಶೀಲಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಹರಿಧರ್, ಉಪಾಧ್ಯಕ್ಷ ಜಿ.ಕೆ. ಕುಮಾರ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.