ADVERTISEMENT

ಸಂತ್ರಸ್ತರಿಗೆ ಬಂದ ಬಟ್ಟೆ ಹೆಗ್ಗಣ ಪಾಲು!

ಬಜತ್ತೂರು ಗ್ರಾಮ ಪಂಚಾಯಿತಿ ಗೋದಾಮಿನಲ್ಲಿ ಬಟ್ಟೆಗಳ ಬಂಡಲು ದಾಸ್ತಾನು

ಸಿದ್ದಿಕ್ ನೀರಾಜೆ
Published 19 ಡಿಸೆಂಬರ್ 2019, 19:47 IST
Last Updated 19 ಡಿಸೆಂಬರ್ 2019, 19:47 IST
ನೆರೆ ಸಂತ್ರಸ್ತರಿಗೆ ವಿತರಣೆ ಮಾಡಲು ಬಂದಿದ್ದ ಬಟ್ಟೆ ಬರೆ ಬಜತ್ತೂರು ಗ್ರಾಮ ಪಂಚಾಯಿತಿ ಗೋದಾಮಿನಲ್ಲಿ ರಾಶಿ ಬಿದ್ದಿರುವುದು
ನೆರೆ ಸಂತ್ರಸ್ತರಿಗೆ ವಿತರಣೆ ಮಾಡಲು ಬಂದಿದ್ದ ಬಟ್ಟೆ ಬರೆ ಬಜತ್ತೂರು ಗ್ರಾಮ ಪಂಚಾಯಿತಿ ಗೋದಾಮಿನಲ್ಲಿ ರಾಶಿ ಬಿದ್ದಿರುವುದು   

ಉಪ್ಪಿನಂಗಡಿ: ನೆರೆ ಸಂತ್ರಸ್ತರಿಗೆ ನೀಡಲು ದಾನಿಗಳು ನೀಡಿದ್ದ ಬಟ್ಟೆ ಬರೆಗಳು ಪುತ್ತೂರು ತಾಲ್ಲೂಕು ಬಜತ್ತೂರು ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ದಾಸ್ತಾನಿದ್ದು, ಇಲಿ–ಹೆಗ್ಗಣಗಳ ಪಾಲಾಗುತ್ತಿವೆ.

ಮೂರು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಬಜತ್ತೂರು, ಉಪ್ಪಿನಂಗಡಿ, 34-ನೆಕ್ಕಿಲಾಡಿ ಗ್ರಾಮದಲ್ಲಿ ಹಲವರು ಮನೆ ಕಳೆದುಕೊಂಡಿದ್ದರು. ಅದೆಷ್ಟೋ ಜನರು ಉಟ್ಟ ಬಟ್ಟೆ ಹೊರತು ಪಡಿಸಿ, ಮಿಕ್ಕ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿ ನೆರವು ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು.

ಬೆಂಗಳೂರು ಮೂಲದ ಸಂಸ್ಥೆಯೊಂದು ದಾನಿಗಳಿಂದ ಸಂಗ್ರಹಿಸಿದ್ದ ಸುಮಾರು ₹10 ಲಕ್ಷ ಮೌಲ್ಯದ ಒಂದು ಲಾರಿ ಬಟ್ಟೆಗಳನ್ನು ಬಜತ್ತೂರು ಕಡೆಯ ಸಂತ್ರಸ್ತರಿಗಾಗಿ ಹಂಚಲು ಕಳುಹಿಸಿಕೊಟ್ಟಿತ್ತು. ಅದನ್ನು ಬಜತ್ತೂರು ಗ್ರಾಮ ಪಂಚಾಯಿತಿಯ ಗ್ರಂಥಾಲಯ ಹೊಂದಿದ ಕಟ್ಟಡದಲ್ಲಿ ದಾಸ್ತಾನು ಇರಿಸಲಾಗಿತ್ತು. ಅಲ್ಲದೇ, ಸರಿಯಾಗಿ ಹಂಚಿಕೆ ಮಾಡದೇ, ಬಟ್ಟೆಗಳು ಉಳಿದುಕೊಂಡಿದ್ದವು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಗ್ರಾಮಸ್ಥರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ADVERTISEMENT

ಬಟ್ಟೆಗಳನ್ನು ಆರಂಭದಲ್ಲಿ ಶಾಸಕರ ಮೂಲಕ ಸಾಂಕೇತಿಕವಾಗಿ ಕೆಲವರಿಗೆ ಹಂಚಿಕೆ ಮಾಡಲಾಗಿತ್ತು. ತದ ನಂತರ ವಿಲೇವಾರಿ ಸರಿಯಾಗಿ ನಡೆಯದೆ ಇದ್ದು, ಅರ್ಹ ಫಲಾನುಭವಿಗಳಿಗೆ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆಯೂ ಸಾಕಷ್ಟು ದೂರುಗಳೂ ಕೇಳಿಬಂದಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರಾದ ವಿಲ್ಫ್ರೆಡ್ ಡಿ'ಸೋಜ, ‘ಬಜತ್ತೂರು ಗ್ರಾಮದಲ್ಲಿ 2 ಮನೆ ಮಾತ್ರ ಕುಸಿದು ಬಿದ್ದಿದ್ದು, ಉಳಿದಂತೆ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಪರಿಹಾರ ಧನ ನೀಡುವಾಗಲೂ ಅವ್ಯವಹಾರ ನಡೆದ ದೂರುಗಳಿತ್ತು. ಅಲ್ಲದೇ, ಸಂತ್ರಸ್ತರಿಗೆ ನೀಡಿದ ಬಳಿಕ ಉಳಿದ ಬಟ್ಟೆಗಳನ್ನು ಇಲ್ಲಿ ಇರಿಸಿಕೊಳ್ಳಬಾರದಾಗಿತ್ತು. ಬೇರೆ ಸಂತ್ರಸ್ತರಿಗೆ ಕಳುಹಿಸಿ ಕೊಡಬಹುದಿತ್ತು’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.