ADVERTISEMENT

ಆರೋಪಗಳು ಸತ್ಯಕ್ಕೆ ದೂರ: ಪ್ರೊ.ಕಲ್ಲಪ್ಪ ಹೊಸಮನಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 20:30 IST
Last Updated 11 ಫೆಬ್ರುವರಿ 2019, 20:30 IST

ಬೆಂಗಳೂರು: ‘ನನ್ನ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರೊ.ಕಲ್ಲಪ್ಪ ಹೊಸಮನಿ ಹೇಳಿದ್ದಾರೆ.

‘ಕುಲಸಚಿವ ಹುದ್ದೆಗಾಗಿ ನಾನು ಲಾಬಿ ಮಾಡುತ್ತಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಾನು ಕುಲಸಚಿವನಾಗಿ ಅಧಿಕಾರವಹಿಸಿಕೊಂಡ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ವಿಶ್ವವಿದ್ಯಾಲಯಕ್ಕೆ ಸೇರಿದ 100 ಎಕರೆ ಜಮೀನು ಒತ್ತುವರಿ ಆಗಿರುವ ಬಗ್ಗೆ ಗಮನಕ್ಕೆ ತಂದಾಗ ಕುಲಪತಿಗಳು ಅದಕ್ಕೆ ಸಹಕಾರ ನೀಡಿಲ್ಲ’ ಎಂದು ಕಲ್ಲಪ್ಪ ದೂರಿದ್ದಾರೆ.

ADVERTISEMENT

‘ನಾನು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಕ್ಕೆ (2008–2009) ಸಂಶೋಧನೆಗೆ ಹೋಗಿದ್ದೆ. ನಾನು ಮರಳಿದಾಗ ಈ ವಿದ್ಯಾರ್ಥಿನಿಯೂ ಸೇರಿ ಹಲವು ವಿದ್ಯಾರ್ಥಿಗಳು ತಪ್ಪುಗಳನ್ನು ಮಾಡಿದ್ದರು. ಆ ತಪ್ಪುಗಳನ್ನು ಸರಿಪಡಿಸಿದರೆ ಪಿಎಚ್‌ಡಿ ಸಿಗುತ್ತದೆ ಎಂದು ತಿಳಿಸಿದೆ. ಆದರೆ, ಅವಳು ನನಗೆ ಆಗದ ಅಧ್ಯಾಪಕರ ಜತೆ ಸೇರಿ ಕಿರುಕುಳದ ದೂರು ನೀಡಿದಳು’.

‘ವಿದ್ಯಾರ್ಥಿನಿ ಮಾಡಿದ ತಪ್ಪುಗಳನ್ನು ಡಾ.ರಂಗನಾಥ್‌ ಕೇರಿ ಅವರು ಸಂಶೋಧನೆಯಲ್ಲಿ ಸರಿಪಡಿಸಲಿಲ್ಲ. ಇದನ್ನು ಕುಲಪತಿಯವರ ಗಮನಕ್ಕೆ ತಂದಾಗ ಸರಿಯಾಗಿ ವಿಚಾರಿಸದೇ ನನ್ನ ವಿರುದ್ಧ ಕ್ರಮ ತೆಗೆದುಕೊಂಡರು’ ಎಂದು ಅವರು ಕಲ್ಲಪ್ಪ ತಿಳಿಸಿದ್ದಾರೆ.

‘ವಿದ್ಯಾರ್ಥಿನಿ ಮಾಡಿದ ಪಿಎಚ್‌ಡಿ ಪದವಿಯನ್ನು ಪ್ರೊ.ಎಂ.ವಿ.ಕುಲಕರ್ಣಿ ಅವರಿಗೆ ವಹಿಸಲಾಯಿತು. ಈ ಪಿಎಚ್‌ಡಿ ನಕಲು ಮಾಡಿದ್ದು ಎಂದು ಕುಲಕರ್ಣಿಯವರು ತಿರಸ್ಕರಿಸಬಹುದಿತ್ತು. ಇದು ನಾನು ಮಾಡಿಸಿದ ಕೃತಿ ಚೌರ್ಯವಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.