ಬೆಂಗಳೂರು: ‘ವಿಧಾನ ಮಂಡಲದ ಸಚಿವಾಲಯಗಳಿಗೆ ಆರ್ಥಿಕ ಸ್ವಾಯತ್ತತೆ ನೀಡಬೇಕೆಂಬ ಬಗ್ಗೆ ಮುಖ್ಯಮಂತ್ರಿ ಜತೆ ಶೀಘ್ರ ಚರ್ಚಿಸಲು ನಿರ್ಧರಿಸಿದ್ದೇನೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಭಾನುವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು, ‘ಎಲ್ಲ ರಾಜ್ಯಗಳ ವಿಧಾನ ಮಂಡಲ ಸಚಿವಾಲಯಗಳಿಗೆ ಆರ್ಥಿಕ ಸ್ವಾಯತ್ತತೆ ಕುರಿತಂತೆ ನ. 17ಮತ್ತು 18ರಂದು ಹಿಮಾಚಲ ಪ್ರದೇಶದಲ್ಲಿ ನಡೆದ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ನಿರ್ಣಯ ಸ್ವೀಕರಿಸಲಾಗಿದೆ’ ಎಂದರು.
‘ಶಾಸಕಾಂಗದ ಘನತೆ-ಗೌರವ ಕಾಪಾಡುವುದೂ ಮುಖ್ಯ. ಬಜೆಟ್ ಬಳಿಕ ಹೆಚ್ಚುವರಿ ಅನುದಾನಕ್ಕೆ ಇಲಾಖೆಗಳಂತೆ ಶಾಸಕಾಂಗವು ಆರ್ಥಿಕ ಇಲಾಖೆಗೆ ಅಂಗಲಾಚುವುದು ಸರಿಯಲ್ಲ. ಈ ಕಾರಣಕ್ಕೆ ಆರ್ಥಿಕ ಸ್ವಾಯತ್ತತೆ ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.
‘ಸಂಸತ್ನ ಮಾದರಿಯನ್ನು ಪಾಲಿಸಲು ಪೀಠಾಸೀನಾಧಿಕಾರಿಗಳ ಸಮಾವೇಶದಲ್ಲಿ ನಿರ್ಣಯ ತೆಗೆದುಕೊಂಡ ತಕ್ಷಣ, ಹಿಮಾಚಲಪ್ರದೇಶ ಸರ್ಕಾರ ಒಪ್ಪಿದೆ. ರಾಜ್ಯ ಸರ್ಕಾರ ಕೂಡ ಸಮ್ಮತಿಸುವ ವಿಶ್ವಾಸವಿದೆ’ ಎಂದರು.
ಶಾಸಕರಿಗೆ ತರಬೇತಿ: ಸಾಮರ್ಥ್ಯ ವೃದ್ಧಿ, ವ್ಯವಸ್ಥೆಯ ಕುರಿತು ಹೊಸ ಶಾಸಕರಿಗೆ ತರಬೇತಿ ಕಡ್ಡಾಯಗೊಳಿಸಲು ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.
ವರದಿ ಸಲ್ಲಿಕೆ: ‘ಪಕ್ಷಾಂತರ ನಿಷೇಧ ಕಾಯ್ದೆ (ಪರಿಚ್ಛೇದ 10) ಬಲವರ್ಧನೆ ಮತ್ತು ವಿಧಾನಸಭಾಧ್ಯಕ್ಷರ ಕಾರ್ಯವ್ಯಾಪ್ತಿಯ ಸ್ಪಷ್ಟತೆ ಕುರಿತು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ವರದಿ ಸಲ್ಲಿಸಲಾಗಿದೆ’ ಎಂದು ಕಾಗೇರಿ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.