ADVERTISEMENT

ಕಾಂಗ್ರೆಸ್‌ಗೆ ತಲೆ ತಿರುಗಿದೆ: ಹೊರಟ್ಟಿ

ಬಸವರಾಜ ಹವಾಲ್ದಾರ
Published 12 ಡಿಸೆಂಬರ್ 2018, 20:15 IST
Last Updated 12 ಡಿಸೆಂಬರ್ 2018, 20:15 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಳಗಾವಿ: ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲು ಇತರ ಪಕ್ಷಗಳೊಂದಿಗೆ ಮೈತ್ರಿ, ಸಹಕಾರ ಬಯಸುವ ಕಾಂಗ್ರೆಸ್‌, ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲೂ ಮೈತ್ರಿ ಧರ್ಮ ಪಾಲಿಸಬೇಕು. ಪಾಲಿಸದಿದ್ದರೆ ಪಕ್ಷದ ವರಿಷ್ಠರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ರಾಜ್ಯದಲ್ಲಿ ಸರ್ಕಾರ ರಚನೆ ಮಾಡಬೇಕಾದಾಗ ಯಾವುದೇ ಷರತ್ತಿಲ್ಲದೇ ಬೆಂಬಲ ನೀಡಿದ್ದವರು, ಈಗ ದಿನಕ್ಕೊಂದು ಷರತ್ತು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಅವರ ಗಮನಕ್ಕೆ ತರದೇ ಅನೇಕ ನಿರ್ಧಾರಗಳನ್ನು ಕಾಂಗ್ರೆಸ್‌ ಸಚಿವರು ತೆಗೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ಗೆ ಬಹುಮತವಿಲ್ಲದ ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಆಯ್ಕೆಗೆ ಜೆಡಿಎಸ್‌ ಬೆಂಬಲ ನೀಡಿತ್ತು. ಅದೇ ರೀತಿ ವಿಧಾನ ಪರಿಷತ್‌ನಲ್ಲಿ ಸಭಾಪತಿ ಹುದ್ದೆಗೆ ಕಾಂಗ್ರೆಸ್‌ ಬೆಂಬಲಿಸಬೇಕಿತ್ತು. ಡಿ.10ರ ರಾತ್ರಿಯವರೆಗೂ ಅದೇ ನಿರ್ಧಾರ ಆಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಪರಿಷತ್‌ನಲ್ಲಿ ತಮಗೆ ಬಹುಮತವಿದೆ ಎಂಬ ಕಾರಣಕ್ಕೆ ಏಕಪಕ್ಷೀಯವಾಗಿ ಸಭಾಪತಿ ಹುದ್ದೆ ಪಡೆದುಕೊಂಡಿತು ಎಂದು ಟೀಕಿಸಿದರು.

ADVERTISEMENT

ನರೇಂದ್ರ ಮೋದಿಯವರು ಲೋಕಸಭೆ ಚುನಾವಣೆಗೆ ಮುನ್ನ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಪಕ್ಷಕ್ಕೆ ಬಹುಮತ ಬಂದ ನಂತರವೂ ಮೈತ್ರಿ ಧರ್ಮ ಪಾಲಿಸಿದರು. ಕಾಂಗ್ರೆಸ್‌ ಮೈತ್ರಿ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಅದರ ತಲೆ ತಿರುಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.