ಆರ್. ಅಶೋಕ, ಸಿದ್ದರಾಮಯ್ಯ
ಬೆಂಗಳೂರು: ರಸಗೊಬ್ಬರ ಕೊರತೆ ಕುರಿತು ಆಡಳಿತ– ವಿರೋಧ ಪಕ್ಷಗಳ ಸದಸ್ಯರ ನಡುವೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಚುನಾವಣಾ ರಾಜಕೀಯದ ಬಗ್ಗೆ ಪ್ರಸ್ತಾಪಿಸಿದ್ದು ಕೆಲಹೊತ್ತು ಸ್ವಾರಸ್ಯಕರ ಚರ್ಚೆಗೆ ವಸ್ತುವಾಯಿತು.
‘ನಾನು ಒಂಬತ್ತು ವಿಧಾನಸಭೆ ಚುನಾವಣೆ ಎದುರಿಸಿದ್ದೇನೆ. ಡಿ.ಕೆ. ಶಿವಕುಮಾರ್ ಎಂಟು ಚುನಾವಣೆ ಎದುರಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಾಗ, ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಇಲ್ಲ ಸರ್. ಡಿ.ಕೆ. ಶಿವಕುಮಾರ್ ಒಂಬತ್ತು ಚುನಾವಣೆ’ ಎಂದರು.
‘ಚುನಾವಣೆ ಎದುರಿಸಿದ ಲೆಕ್ಕ ಹಾಕಿದರೆ ನಾನು 13 ಬಾರಿ ಎದುರಿಸಿದ್ದೇನೆ. ಎರಡು ಬಾರಿ ಲೋಕಸಭೆ, ಎರಡು ಬಾರಿ ವಿಧಾನಸಭೆ ಚುನಾವಣೆ ಸೋತಿದ್ದೇನೆ’ ಎಂದು ಮುಖ್ಯಮಂತ್ರಿ ಸಮಜಾಯಿಶಿ ನೀಡಿದರು.
ಆಗ ಅಶೋಕ, ‘ನೀವು ಲೋಕಸಭೆಗೆ ಹೋಗಿ’ ಎಂದರು. ‘ಯಾಕಪ್ಪ... ನನ್ನನ್ನು ಕಳುಹಿಸುವ ಯೋಚನೆ ಇದೆಯಾ’ ಎಂದು ಸಿದ್ದರಾಮಯ್ಯ ಮರುಪ್ರಶ್ನೆ ಕೇಳಿದರು. ಆಗ ಇಡೀ ಸದನದಲ್ಲಿ ನಗೆ ಉಕ್ಕಿತು.
‘ನೀವೇ ಹಿಂದೊಮ್ಮೆ ಹೇಳಿದ್ರಿ. ಲೋಕಸಭೆಯಲ್ಲಿ ಮಾತನಾಡಬೇಕು ಅಂತ ಅಂದಿದ್ರಿ’ ಎಂದು ಅಶೋಕ ನೆನಪಿಸಿದರು.
‘ಈ ಹಿಂದೆ ಸಂಸತ್ಗೆ ಹೋಗಬೇಕು ಅನ್ನೋ ಆಸೆ ಇತ್ತು. ಈಗ ಅದು ಇಲ್ಲ. ಎರಡು ಸಲ ನನ್ನನ್ನು ಜನ ರಿಜೆಕ್ಟ್ ಮಾಡಿದ್ದಾರೆ. ಎಲ್ಲರಿಗೂ ಸಂಸತ್ ಪ್ರವೇಶ ಮಾಡುವ ಆಸೆ ಇರುತ್ತದೆ. ಆಸೆ ತಪ್ಪೇನಲ್ಲ. ಆಸೆ ಇರಬೇಕು. ದುರಾಸೆ ಇರಬಾರದು. ಆಸೆಯೇ ದುಃಖಕ್ಕೆ ಮೂಲ’ ಎಂದು ಸೂಚ್ಯವಾಗಿ ಹೇಳಿದರು.
ಪಕ್ಕದ ಆಸನದಲ್ಲಿದ್ದ ಡಿ.ಕೆ. ಶಿವಕುಮಾರ್ ನಸು ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.