ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಕಚೇರಿಯ ಟೈಪಿಸ್ಟ್ ಮೋಹನ್ಕುಮಾರ್ ಬಳಿ ₹25.76 ಲಕ್ಷ ಪತ್ತೆಯಾದ ಪ್ರಕರಣ ಮಾಸುವ ಮುನ್ನವೇ ವಿಧಾನಸೌಧದಲ್ಲಿ ನಡೆದ ₹1.12 ಕೋಟಿಯ ಮತ್ತೊಂದು ‘ವಂಚನೆ ಡೀಲ್’ ಪ್ರಸಂಗ ಬಯಲಾಗಿದೆ.
ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಕೊಠಡಿಯನ್ನೇ ಅಡ್ಡೆ ಮಾಡಿಕೊಂಡು ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಶುಲ್ಕದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ಕೇಂದ್ರ ವಿಭಾಗದ ಪೊಲೀಸರು, ಮಾಜಿ ಶಾಸಕರೊಬ್ಬರ ಮಗ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಶೇಷಾದ್ರಿಪುರ ನಿವಾಸಿ ಪಿ.ಕಾರ್ತಿಕೇಯನ್ (60), ಆತನ ಮಗ ಸ್ವರೂಪ್, ತಮ್ಮನ ಮಗ ಎಂ.ಪ್ರಭು, ಸಹಚರರಾದ ಮಣಿಕಂಠ ವಾಸನ್, ಕೆ.ವಿ.ಸುಮನ್, ಆರ್.ಅಭಿಲಾಷ್, ಆರ್.ಕಾರ್ತಿಕ್, ಜಾನ್ ಮೂನ್ ಬಂಧಿತರು.
‘ನನ್ನ ತಂದೆ ಪಣಿಯಪ್ಪನ್, ರಾಜಕಾರಣಿ. ಹಲವು ವರ್ಷಗಳ ಹಿಂದೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು’ ಎಂದು ಕಾರ್ತಿಕೇಯನ್ ಹೇಳಿಕೊಳ್ಳುತ್ತಿದ್ದಾನೆ. ಆ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
‘ಗ್ಯಾಂಗ್ ಕಟ್ಟಿಕೊಂಡಿದ್ದ ಕಾರ್ತಿಕೇಯನ್, ಸ್ವರೂಪ್ ಮತ್ತು ಪ್ರಭುನನ್ನು ಮಧ್ಯವರ್ತಿಗಳನ್ನಾಗಿ ಮಾಡಿಕೊಂಡಿದ್ದ. ನಾಲ್ವರು ಸಹಚರರು ಗನ್ಮ್ಯಾನ್ಗಳಾಗಿದ್ದರು. ಒಬ್ಬನನ್ನು ದಾಖಲೆ ಪರಿಶೀಲನಾ ಅಧಿಕಾರಿಯನ್ನಾಗಿ ನೇಮಿಸಿದ್ದ. ಆತನೇ ಸಾಲಗಾರರ ಮನೆ– ಕಚೇರಿಗೆ ಹೋಗಿ ಪರಿಶೀಲನೆ ನಡೆಸುವಂತೆ ನಟಿಸಿ ಉದ್ಯಮಿಗಳಲ್ಲಿ ನಂಬಿಕೆ ಹುಟ್ಟಿಸುತ್ತಿದ್ದ’.
‘ಶಾಸಕರ ಭವನ (ಎಲ್ಎಚ್) ಹಾಗೂ ವಿಧಾನಸೌಧದ ಸಿಬ್ಬಂದಿಗೆ ಹಣ ಕೊಡುತ್ತಿದ್ದ ಕಾರ್ತಿಕೇಯನ್, ಅವರ ಮೂಲಕ ಶಾಸಕರ ಬಳಕೆಗೆ ಮೀಸಲಿದ್ದ ಹೆಚ್ಚುವರಿ ಕಾರನ್ನು ಪಡೆದುಕೊಂಡು, ಆ ಕಾರು ತನ್ನದೆಂಬಂತೆ ಪೋಸು ಕೊಡುತ್ತಿದ್ದ. ಯಾರಾದರೂ ಸಚಿವರು ಕೊಠಡಿಯಲ್ಲಿ ಇರದಿದ್ದರೆ, ಅಂಥ ಕೊಠಡಿಯ ಸಿಬ್ಬಂದಿಗೆ ಹಣ ಕೊಟ್ಟು ಅರ್ಧಗಂಟೆ ವಿಶ್ರಾಂತಿ ಪಡೆಯುವುದಾಗಿ ಹೇಳಿ ಒಳಹೋಗುತ್ತಿದ್ದ. ಉದ್ಯಮಿಗಳನ್ನು ಕೊಠಡಿಗೆ ಕರೆಸಿ, ಸಚಿವರ ಗತ್ತಿನಲ್ಲೇ ಮಾತನಾಡಿಸುತ್ತಿದ್ದ.’
‘ಇಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಹೆಚ್ಚು ಮಾತನಾಡುವುದು ಬೇಡ. ಹೋಟೆಲ್ಗೆ ಬನ್ನಿ’ ಎಂದು ಹೇಳಿ ಹೋಗುತ್ತಿದ್ದ. ಆತನ ಸಹಚರರು ಗನ್ಮ್ಯಾನ್ಗಳ ಗತ್ತಿನಲ್ಲಿ ಹಿಂಬಾಲಿಸುತ್ತಿದ್ದರು. ಆತ ಸೂಚಿಸಿದ್ದ ಹೋಟೆಲ್ಗೆ ಉದ್ಯಮಿಗಳು ಹೋಗುತ್ತಿದ್ದರು. ಕೆಲವೇ ದಿನಗಳಲ್ಲಿ ಸಾಲ ಮಂಜೂರು ಮಾಡುವುದಾಗಿ ಹೇಳುತ್ತಿದ್ದ ಕಾರ್ತಿಕೇಯನ್, ಶುಲ್ಕವೆಂದು ಕೋಟ್ಯಂತರ ರೂಪಾಯಿ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ವಿಧಾನಸೌಧದ ಸಿಬ್ಬಂದಿ ಮಹದೇವಸ್ವಾಮಿ ಎಂಬಾತ ಆರೋಪಿಗಳಿಗೆ ಸಹಕಾರ ನೀಡಿದ್ದ. ಆತ ಹಾಗೂ ಇನ್ನೂ ಹಲವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಅಲ್ಲಿಯವರೆಗೂ ಕೊಠಡಿ ಯಾವುದು ಎಂಬುದನ್ನು ಬಹಿರಂಗಪಡಿಸಲಾಗದು’ ಎಂದು ತಿಳಿಸಿದರು.
ತಮಿಳುನಾಡಿನ ಉದ್ಯಮಿಗೆ ವಂಚನೆ:‘ನನ್ನ ಹೆಸರು ಕೆ.ಕೆ.ಶೆಟ್ಟಿ, ಕರ್ನಾಟಕ ಸರ್ಕಾರದ ಸಚಿವ’ ಎಂದು ಹೇಳಿದ್ದ ಕಾರ್ತಿಕೇಯನ್, ತಮಿಳುನಾಡಿನ ಗೋಡಂಬಿ ವ್ಯಾಪಾರಿ ರಮೇಶ್ ಎಂಬುವರಿಂದ ಸಾಲದ ಶುಲ್ಕವೆಂದು ₹1.12 ಕೋಟಿ ಪಡೆದು ವಂಚಿಸಿದ್ದ. ಆ ಸಂಬಂಧ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗಾಗಿ ಡಿಸಿಪಿ ಡಿ. ದೇವರಾಜ್ ಅವರು ರಚಿಸಿದ್ದ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ.
‘ಬ್ಯಾಂಕ್ ಉದ್ಯೋಗಿ ಇಂದಿರಾ ಎಂಬುವರನ್ನು ಸಂಪರ್ಕಿಸಿದ್ದ ಉದ್ಯಮಿ ರಮೇಶ್, ₹100 ಕೋಟಿ ಸಾಲ ಬೇಕಿರುವುದಾಗಿ ಹೇಳಿದ್ದರು. ಆಗ ಇಂದಿರಾ, ತಮಿಳುನಾಡಿನ ದೇವಸ್ಥಾನವೊಂದರ ಟ್ರಸ್ಟಿ ಎಂ. ಪ್ರಭು ಅಲಿಯಾಸ್ ಇಳಮದಿರನನ್ನು ಪರಿಚಯಿಸಿದ್ದರು. ‘ಕರ್ನಾಟಕದ ಸಚಿವ ನನಗೆ ಪರಿಚಯ. ಕಡಿಮೆ ಬಡ್ಡಿಗೆ ಸಾಲ ಕೊಡುತ್ತಾರೆ. ಸ್ಟ್ಯಾಂಪ್ ಶುಲ್ಕವಾಗಿ ಸಾಲದ ಮೊತ್ತದ ಶೇ 1.12ರಷ್ಟು ಶುಲ್ಕ ಪಾವತಿಸಬೇಕು’ ಎಂದು ಆತ ಹೇಳಿದ್ದ’ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದರು.
‘ಷರತ್ತು ಒಪ್ಪಿದ ರಮೇಶ್, ಸಚಿವರನ್ನು ಭೇಟಿಯಾಗಲು ಜ. 2ರಂದು ಬೆಂಗಳೂರಿಗೆ ಬಂದಿದ್ದರು. ಅವರನ್ನು ವಿಧಾನಸೌಧದ ಕೊಠಡಿಗೆ ಕರೆಸಿದ್ದ ಕಾರ್ತಿಕೇಯನ್, ಸಾಲದ ಡೀಲ್ ಮಾಡಿದ್ದ. ನಂತರ, ಎಂ.ಜಿ ರಸ್ತೆಯಲ್ಲಿರುವ ಪಂಚತಾರಾ ಹೊಟೇಲ್ವೊಂದಕ್ಕೆ ಕರೆಸಿ ₹1.12 ಕೋಟಿ ಪಡೆದಿದ್ದ’ ಎಂದು ವಿವರಿಸಿದರು.
ವೀಕ್ಷಕರ ಪಾಸ್ ಪಡೆದು ಪ್ರವೇಶ: ಜ. 2ರಂದು ಬೆಳಿಗ್ಗೆ ಬೇಗನೇ ವಿಧಾನಸೌಧಕ್ಕೆ ಬಂದಿದ್ದ ಆರೋಪಿಗಳು, ವೀಕ್ಷಕರ ಪಾಸ್ ಪಡೆದುಕೊಂಡಿದ್ದರು. ಮಧ್ಯಾಹ್ನ ಉದ್ಯಮಿ ರಮೇಶ್ ವಿಧಾನಸೌಧಕ್ಕೆ ಬಂದಿದ್ದರು. ನಿಗದಿಯಂತೆ ಶಾಸಕರ ಹೆಚ್ಚುವರಿ ಕಾರಿನಲ್ಲಿ ಬಂದಿದ್ದ ಕಾರ್ತಿಕೇಯನ್, ಉದ್ಯಮಿಗೆ ಕೈ ಮಾಡಿ ಭದ್ರತಾ ಸಿಬ್ಬಂದಿಗೆ ಪಾಸ್ ತೋರಿಸಿ ಒಳಗೆ ಹೋಗಿದ್ದರು. ನಂತರವೇ ಆರೋಪಿಗಳು ಕೊಠಡಿಗೆ ಉದ್ಯಮಿಯನ್ನು ಕರೆಸಿದ್ದರು’ ಎಂದು ಪೊಲೀಸರು ಹೇಳಿದರು.
ಉದ್ಯಮಿ ಊರಿನಲ್ಲೇ ಬಚ್ಚಿಟ್ಟುಕೊಂಡಿದ್ದರು !
ಪೊಲೀಸರು, ಜಯನಗರದಲ್ಲಿದ್ದ ಗ್ಯಾಂಗ್ನ ಸದಸ್ಯನೊಬ್ಬನನ್ನು ವಶಕ್ಕೆ ಪಡೆದಿದ್ದರು. ಆ ಮಾಹಿತಿ ತಿಳಿಯುತ್ತಿದ್ದಂತೆ ಉಳಿದೆಲ್ಲ ಆರೋಪಿಗಳು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು.
ಉದ್ಯಮಿ ರಮೇಶ್ ಅವರ ಊರಾದ ತಮಿಳುನಾಡಿನ ಕಡಲೂರಿನ ಮನೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ಹೋದ ವಿಶೇಷ ತಂಡ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದೆ.
‘ವಂಚನೆಯಿಂದ ಬಂದ ಹಣವನ್ನು ಸ್ವರೂಪ್ ಹಾಗೂ ಪ್ರಭು, ವ್ಯಾಪಾರಕ್ಕೆ ಹೂಡಿಕೆ ಮಾಡುತ್ತಿದ್ದರು. ಸದ್ಯಕಾರ್ತಿಕೇಯನ್ ಬಳಿಯಿಂದ ₹40 ಲಕ್ಷವನ್ನು ಜಪ್ತಿ ಮಾಡಿ ಉದ್ಯಮಿಗೆ ಕೊಡಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರು ಸಿಕ್ಕ ಬಳಿಕ ಉಳಿದ ಹಣ ಎಲ್ಲಿದೆ ಎಂಬುದು ತಿಳಿಯಲಿದೆ. ಮತ್ತಷ್ಟು ಉದ್ಯಮಿಗಳಿಗೆ ವಂಚನೆಯಾಗಿದ್ದು, ಅವರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸರು ಹೇಳಿದರು.
₹1,000ಕ್ಕೆ ವಿಧಾನಸೌಧದ ಕಚೇರಿ ಉಚಿತ!
‘ವಿಧಾನಸೌಧಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಕಾರ್ತಿಕೇಯನ್, ಕೆಲವು ಸಿಬ್ಬಂದಿಗೆ ಹಣ ಕೊಟ್ಟು ಪರಿಚಯ ಮಾಡಿಕೊಂಡಿದ್ದ. ಸಿಬ್ಬಂದಿ, ಆತನಿಗೆ ‘ನಮಸ್ಕಾರ್ ಸರ್’ ಎಂದು ಸಾರ್ವಜನಿಕರ ಎದುರು ಕೈ ಮುಗಿಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಕ್ರಮೇಣ ಜನಪ್ರತಿನಿಧಿಗಳು ಹಾಗೂ ಸಚಿವರ ಕೊಠಡಿಗೂ ಹೋಗಿ ಕುಳಿತುಕೊಳ್ಳಲು ಆರಂಭಿಸಿದ್ದ. ಉದ್ಯಮಿ ರಮೇಶ್ ಅವರನ್ನು ವಿಧಾನಸೌಧಕ್ಕೆ ಕರೆಸುವುದಕ್ಕೂ ಮುನ್ನ ಕೊಠಡಿಯ ಕೆಲಸಗಾರನಿಗೆ ₹1,000 ಸಾವಿರ ಕೊಟ್ಟು ಬುಟ್ಟಿಗೆ ಹಾಕಿಕೊಂಡಿದ್ದ. ಆತ, ಕೊಠಡಿಯನ್ನು ಬಳಕೆಗೆ ನೀಡಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.