ಬೆಂಗಳೂರು: ಮೃದಂಗ ವಿದ್ವಾನ್ ಟಿ.ಎ.ಎಸ್. ಮಣಿ (84) ಶನಿವಾರ ನಿಧನರಾದರು.
ಮಲ್ಲೇಶ್ವರದಲ್ಲಿ ನೆಲೆಸಿರುವ ಅವರು ಜಯನಗರದ ಶ್ರೀರಾಮ ಲಲಿತಕಲಾ ಮಂದಿರದಲ್ಲಿ ನಡೆಯುತ್ತಿರುವ ಸಂಗೀತ ಸ್ಪರ್ಧೆಯನ್ನು ವೀಕ್ಷಿಸುತ್ತಿರುವ ವೇಳೆ ಮೃತಪಟ್ಟಿದ್ದಾರೆ. ಅವರು ಪತ್ನಿ ವಿದೂಷಿ ಆರ್.ಎ. ರಮಾಮಣಿ ಮತ್ತು ಪುತ್ರ ವಿದ್ವಾನ್ ಕಾರ್ತಿಕ್ ಮಣಿ ಅವರನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಮಲ್ಲೇಶ್ವರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಭಾನುವಾರ ಹರಿಶ್ಚಂದ್ರಘಾಟ್ನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.
‘ತಾಳ ತರಂಗಿಣಿ’ ಎಂಬ ಅಂತರರಾಷ್ಟ್ರೀಯ ಖ್ಯಾತಿಯ ಲಯವಾದ್ಯ ಗೋಷ್ಠಿಯನ್ನು ಪ್ರಾರಂಭಿಸಿ, ದೇಶದ ಅನೇಕ ಕಡೆ ಪ್ರದರ್ಶಿಸಿದರು.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಗಾನ ಕಲಾ ಪರಿಷತ್ತಿನಿಂದ ‘ಗಾನ ಕಲಾ ಭೂಷಣ’ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಸಂಗೀತ ಮನೆತನದಲ್ಲಿ ಬೆಳೆದ ಅವರು, ವಿದ್ವಾನ್ ಪಾಲ್ಗಾಟ್ ಸಿ.ಕೆ. ಅಯ್ಯಾಮಣಿ ಅಯ್ಯರ್ ಅವರ ಶಿಷ್ಯರಾಗಿ 10ನೇ ವಯಸ್ಸಿನಿಂದಲೇ ಕಲಾಸೇವೆ ಪ್ರಾರಂಭಿಸಿದರು. ಆಕಾಶವಾಣಿ ಮತ್ತು ದೂರದರರ್ಶನದ ಎ ದರ್ಜೆಯ ಕಲಾವಿದರಾಗಿದ್ದರು. ಕರ್ನಾಟಕ ಕಾಲೇಜ್ ಆಫ್ ಪರ್ಕ್ಯೂಷನ್ ಸಂಸ್ಥೆಯನ್ನು ಸ್ಥಾಪಿಸಿ, ಐದು ದಶಕಗಳಿಂದ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಇವರು ವಿಶ್ವದಾದ್ಯಂತ ಸಂಗೀತ ಕಚೇರಿಗಳನ್ನು ನೀಡಿದ್ದರು. ಚೆಂಬೈ ವೈದ್ಯನಾಥ ಭಾಗವತರು, ಡಾ.ಶೆಮ್ಮಗುಂಡಿ ಶ್ರೀನಿವಸ್ ಅಯ್ಯರ್, ಡಾ.ಎಂ.ಎಸ್.ಸುಬ್ಬಲಕ್ಷ್ಮಿ, ಡಿ.ಕೆ. ಪಟ್ಟಮ್ಮಾಳ್, ಡಾ. ವಸಂತಕುಮಾರಿ, ಡಾ. ಬಾಲಮುರುಳಿಕೃಷ್ಣ ಸೇರಿದಂತೆ ಹಲವು ಸಂಗೀತ ದಿಗ್ಗಜರಿಗೆ ಮೃದಂಗದಲ್ಲಿ ಪಕ್ಕ ವಾದ್ಯ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.