ADVERTISEMENT

ಜ.1ರಿಂದ ‘ವಿದ್ಯಾಗಮ’ ಜಾರಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 19:31 IST
Last Updated 16 ಡಿಸೆಂಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ನಿರಂತರ ಕಲಿಕೆಗೆ ಪೂರಕವಾಗಿರುವ 'ವಿದ್ಯಾಗಮ’ ಯೋಜನೆ ಪರಿಷ್ಕೃತ ರೂಪದಲ್ಲಿ ಜ. 1ರಿಂದ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ‘ಕೊರೊನಾ ಕಾರಣದಿಂದ ಶಾಲೆಗಳು ಆರಂಭವಾಗದೇ ಇರುವುದರಿಂದ ‘ವಿದ್ಯಾಗಮ’ ಕಾರ್ಯಕ್ರಮವನ್ನು ಮತ್ತೆ ಅನುಷ್ಠಾನ ಮಾಡಲಾಗುತ್ತಿದೆ. ಈ ಸಂಬಂಧ ಸರ್ಕಾರ, ರೂಪರೇಷೆ ಹಾಗೂ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಹೊರಡಿದೆ. ಹೀಗಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಜ.1 ರಿಂದ ಕಾರ್ಯಕ್ರಮವನ್ನು ಆರಂಭಿಸಲು ಪೂರ್ವ ತಯಾರಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ನಿರ್ದೇಶನ ನೀಡಿದೆ.

ಆಗಸ್ಟ್‌ 8ರಂದು ಆರಂಭಿಸಿದ್ದ ಈ ಯೋಜನೆಯನ್ನು ಅನುಷ್ಠಾನದಲ್ಲಾದ ಲೋಪ ಮತ್ತು ಕೆಲವು ತಾಂತ್ರಿಕ ಕಾರಣದಿಂದ ಅ.10ರಂದು ಸರ್ಕಾರವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಈಗ ಶಾಲಾರಂಭ ವಿಳಂಬವಾಗುತ್ತಿರುವ ಕಾರಣ ಪರಿಷ್ಕೃತ ರೂಪದಲ್ಲಿ ಅನುಷ್ಠಾನಗೊಳಿಸಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ಅಲ್ಲದೆ, ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ADVERTISEMENT

ವಿದ್ಯಾಗಮ ಅನುಷ್ಠಾನ ಸಂಬಂಧ ಮಾರ್ಗದರ್ಶಿ ಶಿಕ್ಷಕರು, ಪ್ರತಿ ದಿನ ಅಥವಾ ವಾರಕ್ಕೆ ಒಮ್ಮೆಯಾದರೂ ಮಕ್ಕಳನ್ನು ಭೇಟಿ ಮಾಡಿ, ಮುಂದಿನ ವಾರದ ವೇಳಾಪಟ್ಟಿ ನೀಡಬೇಕು. ಸ್ವಯಂ ಸೇವಕರು, ಸರ್ಕಾರೇತರ ಸಂಸ್ಥೆಗಳು, ಆಯಾ ಪ್ರದೇಶದ ವಿದ್ಯಾವಂತ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪಾಠ ನಡೆಸಬೇಕು, ವಿದ್ಯಾರ್ಥಿಗಳಿಗೆ ಲಭ್ಯವಿರುವ ಸಲಕರಣೆಗಳ ಮೂಲಕ (ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್) ಮೂಲಕ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.