ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ಕುಟುಂಬ ರಾಜಕಾರಣ ತೊಲಗಿಸಬೇಕು, ಓಲೈಕೆ ರಾಜಕಾರಣ, ಭ್ರಷ್ಟಾಚಾರ ನಾವು ಒಪ್ಪಲ್ಲ ಎಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದರು. ಆದರೆ, ಈಗ ವಿಜಯೇಂದ್ರ ನೇಮಕಕ್ಕೆ ಏನು ಹೇಳಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಪ್ರಶ್ನಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಏನೇ ಮಾಡಿದರೂ ಖರ್ಗೆ ಮಗ ಎನ್ನುತ್ತಾರೆ. ನಾನು ಯುವ ಕಾಂಗ್ರೆಸ್ನಲ್ಲಿ ಕೆಲಸ ಮಾಡಿ ಶಾಸಕನಾದೆ. ಆದರೂ ನಮ್ಮದು ಕುಟುಂಬ ರಾಜಕಾರಣ ಅಂದರು. ಈಗ ಯಡಿಯೂರಪ್ಪ ಮಗನಿಗೆ ಸ್ಥಾನ ನೀಡಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು’ ಎಂದರು.
‘ವಿಜಯೇಂದ್ರ ನೇಮಕದ ಮೂಲಕ ಬಿ.ಎಲ್. ಸಂತೋಷ್ ಅವರಿಗೆ, ‘ನೀವು ಕೇಶವಕೃಪಾದಲ್ಲೇ ಇರಿ’ ಎಂದು ಬಿಜೆಪಿ ಹೈಕಮಾಂಡ್ ಸಂದೇಶ ಕೊಟ್ಟಂತಿದೆ’ ಎಂದರು. ‘ಬೂತ್ ಮಟ್ಟ, ಸಂಘದಲ್ಲಿ ಕೆಲಸ ಮಾಡಿದ್ದೇನೆ. ವಿಜಯೇಂದ್ರ ನನಗೆ ಬಚ್ಚಾ ಎನ್ನುತ್ತಿದ್ದ ಈಶ್ವರಪ್ಪ ಈಗ ಎಲ್ಲಿಗೆ ಹೋದರು? ಈಗವರು ಪಕ್ಷ ಬಿಡುತ್ತಾರಾ?’ ಎಂದು ವ್ಯಂಗ್ಯವಾಡಿದರು.
‘ರಾಜ್ಯದಲ್ಲಿ ಬಿಜೆಪಿ ಮುಗಿಸಲು ವಿಜಯೇಂದ್ರ ಅವರನ್ನು ನೇಮಿಸಿದಂತಿದೆ. ದೈಹಿಕವಾಗಿ ಸಮರ್ಥರಿದ್ದರೂ ಸದಾನಂದಗೌಡರಿಗೆ ಸ್ವಯಂನಿವೃತ್ತಿ ಕೊಡಿಸಿದ್ದಾರೆ. ಈಗ ಬಿಜೆಪಿ ವರ್ಸಸ್ ಬಿಜೆಪಿ ಆಗಿದೆ’ ಎಂದು ವ್ಯಾಖ್ಯಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.