ADVERTISEMENT

ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ

ಉತ್ತರಾಯಣದಲ್ಲಿ ಪಟ್ಟಾಭಿಷೇಕ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 8:27 IST
Last Updated 6 ಡಿಸೆಂಬರ್ 2020, 8:27 IST
ವಿಶ್ವವಲ್ಲಭ ತೀರ್ಥ ಸ್ವಾಮೀಜಿ
ವಿಶ್ವವಲ್ಲಭ ತೀರ್ಥ ಸ್ವಾಮೀಜಿ   

ಉಡುಪಿ: ಶೀರೂರು ಮಠಕ್ಕೆ ಯೋಗ್ಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಉತ್ತರಾಯಣದಲ್ಲಿ ಪಟ್ಟಾಭಿಷೇಕ ನೆರವೇರಲಿದೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಶನಿವಾರ ಮಠದಲ್ಲಿ ಮಾತನಾಡಿದ ಸ್ವಾಮೀಜಿ, ‘ಶೀರೂರು ಮಠದ ಭಕ್ತರ ಹಾಗೂ ಅಷ್ಟಮಠದ ಸ್ವಾಮೀಜಿಗಳ ಸಹಕಾರದೊಂದಿಗೆ ಉತ್ತರಾಧಿಕಾರಿ ಆಯ್ಕೆ ನಡೆದಿದೆ. ತೌಳವರಾಗಿರುವ ಶಿವಳ್ಳಿ ಮಾಧ್ವ ಪರಂಪ‍ರೆಗೆ ಸೇರಿದ ವಟುವನ್ನು ಆರಿಸ
ಲಾಗಿದ್ದು, ಪಾಠ ಪ್ರವಚನಗಳ ಅಧ್ಯಯನದಲ್ಲಿ ತೊಡಗಿದ್ದಾರೆ. ಉತ್ತರಾಧಿಕಾರಿ ಹೆಸರನ್ನು ಸದ್ಯ ಘೋಷಿಸುವುದಿಲ್ಲ’ ಎಂದು ಹೇಳಿದರು.

ಶೀರೂರು ಮಠದ ಕನಕ ಮಾಲ್‌ನ ಆಸ್ತಿ ವಿವಾದ ಕೂಡ ಬಗೆಹರಿಯುವ ಹಂತಕ್ಕೆ ಬಂದಿದ್ದು, ಮುಂಬೈನ ಉದ್ಯಮಿಯೊಬ್ಬರು
ಮಠದ ಜಂಟಿ ಸಹಯೋಗದಲ್ಲಿ ಮಾಲ್‌ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ.
ನೆಲಮಹಡಿ ಹಾಗೂ 8 ಮಹಡಿಗಳ ಪೈಕಿ ಮೇಲಿನ ನಾಲ್ಕು ಮಹಡಿಗಳನ್ನು ಮಠಕ್ಕೆ ಬಿಟ್ಟುಕೊಡಲಿದ್ದಾರೆ. ಜತೆಗೆ, ಮಾಲ್‌ ನಿರ್ಮಾಣಕ್ಕೆ ಶೀರೂರು ಮಠ ಬ್ಯಾಂಕ್‌ನಲ್ಲಿ ಮಾಡಿದ್ದ ಸಾಲವನ್ನು ಏಕಗಂಟಿನಲ್ಲಿ (₹ 10.75 ಕೋಟಿ) ತೀರಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ADVERTISEMENT

ಶೀರೂರು ಮಠದ ಲಕ್ಷ್ಮೀವರ ತೀರ್ಥರು ನಿಧನರಾದ ನಂತರ ಆದಾಯ ತೆರಿಗೆ ಇಲಾಖೆ ₹ 17.34 ಕೋಟಿ ತೆರಿಗೆ ಬಾಕಿ ಪಾವತಿಸುವಂತೆ ನೋಟಿಸ್‌ ನೀಡಿತ್ತು. ಈ ಸಂಬಂಧ ಮಠದಿಂದ ಕಾನೂನು ಹೋರಾಟ ನಡೆದಿದ್ದು, ಶೀಘ್ರ ಇತ್ಯರ್ಥವಾಗುವ ನಿರೀಕ್ಷೆ ಇದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.