
ಆರ್. ಅಶೋಕ
ಬೆಂಗಳೂರು: ‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಮನಸ್ಸಿಲ್ಲದಿದ್ದರೂ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಕುರ್ಚಿ ಗಿಟ್ಟಿಸಿಕೊಳ್ಳಲು ಸುದ್ದಿಗೋಷ್ಠಿ ನಡೆಸಿ ಮತ ಕಳವು ವಿಷಯ ಪ್ರಸ್ತಾಪಿಸಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಸೋಲಿನ ಮುಖಭಂಗ ಖಚಿತವಾಗುತ್ತಿದ್ದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಲವಂತವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಸುದ್ದಿಗೋಷ್ಠಿ ಮಾಡಿಸಿದ್ದಾರೆ. ಮತ ಕಳವಿನ ಮೆಗಾ ಧಾರಾವಾಹಿಯ ಮತ್ತೊಂದು ಸಂಚಿಕೆ ಬಿಡುಗಡೆ ಮಾಡಿಸಿದ್ದಾರೆ. ಆಟಂ ಬಾಂಬ್, ಹೈಡ್ರೋಜನ್ ಬಾಂಬ್ ಎಂದು ಹೇಳಿದ ಸುಳ್ಳನ್ನೇ ಮತ್ತೆ ಹೇಳಿ ಜನರ ಮುಂದೆ ಈಗಾಗಲೇ ನಗೆಪಾಟಲಿಗೆ ಒಳಗಾಗಿದ್ದಾರೆ’ ಎಂದು ಟೀಕಿಸಿದ್ದಾರೆ.
‘ರಾಹುಲ್ ಅವರು ಮಾಡುತ್ತಿರುವ ಆರೋಪದಲ್ಲಿ ಹುರುಳಿದ್ದರೆ ಚುನಾವಣಾ ಆಯೋಗ ಕೇಳಿದಂತೆ ಅಫಿಡವಿಟ್ ಏಕೆ ಸಲ್ಲಿಸುತ್ತಿಲ್ಲ? ಮೊಕದ್ದಮೆ ಏಕೆ ದಾಖಲಿಸುತ್ತಿಲ್ಲ? ಅವರ ಪ್ರತಿಯೊಂದು ಆರೋಪಕ್ಕೂ ಚುನಾವಣಾ ಆಯೋಗ ಸೂಕ್ತ ಉತ್ತರ ನೀಡಿದೆ. ಇಷ್ಟಾದರೂ ಸುಳ್ಳು ಹೇಳುತ್ತಿರುವ ರಾಹುಲ್ ಭಂಡತನವನ್ನು ಮೆಚ್ಚಲೇಬೇಕು’ ಎಂದಿದ್ದಾರೆ.
‘ಕಾಂಗ್ರೆಸ್ ಪಕ್ಷಕ್ಕೆ ಮತ ಕಳವು ಬಗ್ಗೆ ನಿಜವಾದ ಬದ್ಧತೆ ಇದ್ದರೆ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಕ್ರಮ ಕೈಗೊಂಡು, ಅವರನ್ನು ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.