ಶೋಭಾ ಕರಂದ್ಲಾಜೆ
ಬೀದರ್: ‘ಮತ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ನಗರದ ಗುಂಪಾ ಸಿದ್ದಾರೂಢ ಸ್ವಾಮಿ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಜೀವನ ಆಧರಿಸಿದ ಪ್ರದರ್ಶನ ಹಾಗೂ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದೆ. ಹಾಗಿದ್ದರೆ ಮತ ಕಳ್ಳತನದಿಂದ ಗೆದ್ದಿದೆಯಾ? ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ನಮ್ಮ ದೇಶದೊಳಗೆ ಆಂತರಿಕ ಕಲಹ ಹೆಚ್ಚಿಸಲು ಈ ಕೆಲಸ ಮಾಡಲಾಗುತ್ತಿದೆ. ಚುನಾವಣಾ ಆಯೋಗ, ವಾಣಿಜ್ಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ಇತರೆ ಸಂಸ್ಥೆಗಳ ಮೇಲಿಂದ ವಿಶ್ವಾಸ ಹೋಗುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ. ಜಾರ್ಜ್ ಸರೋಜ್ ಮಾಡುತ್ತಿರುವ ಕೆಲಸ ರಾಹುಲ್ ಗಾಂಧಿ ನಮ್ಮ ದೇಶದಲ್ಲಿ ಮಾಡುತ್ತಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಆಳಂದನಲ್ಲಿ ಗೆದ್ದವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲಿ ಇಂದಿಗೂ ಮನೆ ಸಂಖ್ಯೆ ಸೊನ್ನೆ ಇದೆ. ಮತದಾರರ ಪಟ್ಟಿಯಲ್ಲೂ ಹಾಗೆಯೇ ಇದೆ. ಮನೆ ನಂಬರ್ ಸರಿಯಾಗಿ ಹಾಕುವುದಿಲ್ಲ. ರಾಹುಲ್ ಗಾಂಧಿಯವರು ಮಹದೇವಪುರ ಕ್ಷೇತ್ರದ ಬಗ್ಗೆ ಹೇಳಿದ್ದಾರೆ. ಮನೆ ಸಂಖ್ಯೆ ಎಲ್ಲಿ ಸರಿಯಾಗಿ ಫೀಡ್ ಆಗುವುದಿಲ್ಲವೋ ಅಲ್ಲಿ ಝೀರೋ ಹಾಕುತ್ತಾರೆ. ಇದನ್ನು ರಾಹುಲ್ ಗಾಂಧಿ ಅವರು ಅರ್ಥ ಮಾಡಿಕೊಂಡಿಲ್ಲ ಎಂದರೆ ಏನು ಹೇಳುವುದು. ಮಾಲೂರಿನ ಕಾಂಗ್ರೆಸ್ ಶಾಸಕನನ್ನು ಯಾಕೆ ನ್ಯಾಯಾಲಯ ಅಸಿಂಧು ಮಾಡಿದೆ ಎನ್ನುವುದರ ಬಗ್ಗೆ ರಾಹುಲ್ ಗಾಂಧಿ ಉತ್ತರಿಸಬೇಕು. ಮಾಲೂರಿನಲ್ಲಿ ಮತ ಕಳ್ಳತನ ಮಾಡಿ ಗೆದ್ದಿರುವುದು ಕಾಂಗ್ರೆಸ್ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.