ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಬಿಎಲ್ಎ– ಎ1 ರಾಜ್ಯ ಮಟ್ಟದ ಕಾರ್ಯಗಾರ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಅವರನ್ನು ಗೌರವಿಸಿದರು.
ಬೆಂಗಳೂರು: ವಿದೇಶೀಯರು ಒಳನುಸುಳಿ ಭಾರತೀಯ ನಾಗರಿಕರ ರೀತಿಯಲ್ಲಿ ಮತದಾನ ಮಾಡುವುದಕ್ಕೆ ಅವಕಾಶ ಸಿಕ್ಕಿದರೆ ಅವರಿಂದ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಬರುತ್ತದೆ ಎಂದು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಬಿಎಲ್ಎ–ಎ1 ರಾಜ್ಯ ಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್ಐಆರ್) ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಬಿಹಾರದಲ್ಲಿ ಪರಿಶೀಲನೆ ಮುಗಿದಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕದಲ್ಲೂ ಇದು ನಡೆಯಲಿದೆ ಎಂದರು.
ಮತದಾರರಾಗಲು ಪೌರತ್ವ ಪಡೆಯುವುದು ಅನಿವಾರ್ಯ. 2004ರವರೆಗೆ ನಿರಂತರವಾಗಿ ಎಸ್ಐಆರ್ ನಡೆಯುತ್ತಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಅದನ್ನು ರದ್ದು ಮಾಡಿದ್ದರು. ಮತ್ತೆ ಅದನ್ನು ಆರಂಭಿಸಿರುವುದು ಧನಾತ್ಮಕ ಮತ್ತು ಸಾರ್ಥಕ ಕ್ರಮ ಎಂದು ಪಾಠಕ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ, ನೀತಿ, ಜನರ ಜೊತೆಗಿನ ಸಂವಾದದ ಆಧಾರದಲ್ಲಿ ಪಕ್ಷಗಳು ಗೆಲುವು ಸಾಧಿಸುತ್ತವೆ. ಇದಕ್ಕಾಗಿ ಮತದಾರರ ಪಟ್ಟಿಯ ಶುದ್ಧೀಕರಣ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.
‘ಬಿಹಾರದಲ್ಲಿ ಹೊಸ ಮತದಾರರ ಪಟ್ಟಿ ಹೊರಬಿದ್ದಿದೆ. ಮೃತರು, ಸ್ಥಳದಲ್ಲಿ ಇಲ್ಲದವರನ್ನು ಕೈಬಿಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ನಕಲಿ ಮತದಾರರಿಗೆ ಅವಕಾಶ ಇರುವುದಿಲ್ಲ ಎಂಬ ವಿಶ್ವಾಸ ನಮಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.