ADVERTISEMENT

ನಾಟಕ ಅಕಾಡೆಮಿಗೆ ₹ 1 ಕೋಟಿ ಸಾಲದು

ಅನುದಾನ ಹಂಚಿಕೆ ವಿರುದ್ಧ ನಾಟಕ ಅಕಾಡೆಮಿ ಅಧ್ಯಕ್ಷ ಲೋಕೇಶ್‌ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 17:32 IST
Last Updated 6 ಫೆಬ್ರುವರಿ 2019, 17:32 IST

ಉಡುಪಿ: ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಬರೆಯುವವರ ಸಾಹಿತ್ಯ ಅಕಾಡೆಮಿಗೆ ₹ 1 ಕೋಟಿ ವಾರ್ಷಿಕ ಅನುದಾನ ಸಿಗುತ್ತದೆ. ಊರೂರು ಸುತ್ತಿ ರಾತ್ರಿ ಹಗಲು ಕೆಲಸ ಮಾಡುವ ನಾಟಕ ಅಕಾಡೆಮಿಗೂ ₹1 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಲೋಕೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

₹1 ಕೋಟಿಯಲ್ಲಿ ₹ 35 ಲಕ್ಷ ಸಿಬ್ಬಂದಿಯ ವೇತನಕ್ಕೆ ವ್ಯಯವಾಗುತ್ತದೆ. ಉಳಿದ ₹ 65 ಲಕ್ಷದಲ್ಲಿ ರಂಗಚಟುವಟಿಕೆಗಳನ್ನು ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಸರ್ಕಾರ ಅನುದಾನವನ್ನು ಹೆಚ್ಚಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಅನುದಾನ ಬಿಡುಗಡೆಗೂ ಮೊದಲೇ ಕ್ರಿಯಾಯೋಜನೆ ಸಲ್ಲಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಅದರಂತೆ 2 ವರ್ಷಗಳಿಂದ ಕ್ರಿಯಾಯೋಜನೆ ಸಲ್ಲಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ನಾಟಕ ಅಕಾಡೆಮಿಗೆ ಸ್ವಾಯತ್ತತೆ ನೀಡುವಂತೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದರ ಬಗ್ಗೆಯೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಅಕಾಡೆಮಿಗಳಿಗೆ ಅರ್ಹರ ನೇಮಕವಾಗುವ ಬದಲು,ಅನರ್ಹರ ನೇಮಕ ನಡೆಯುತ್ತಿದೆ. ಇದನ್ನು ನೋಡಿದರೆ ಅಕಾಡೆಮಿಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದೆನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೋಟ್ಯಂತರ ರೂಪಾಯಿ ಖರ್ಚುಮಾಡಿ 1000 ಮಂದಿ ಕುಳಿತುಕೊಳ್ಳುವ ಜಿಲ್ಲಾ ರಂಗಮಂದಿರಗಳನ್ನು ನಿರ್ಮಿಸುವ ಬದಲು 200 ಮಂದಿ ಸಾಮರ್ಥ್ಯದ ತಾಲ್ಲೂಕಿಗೊಂದು ರಂಗಮಂದಿರಗಳನ್ನು ನಿರ್ಮಾಣ ಮಾಡಿದರೆ ಸೂಕ್ತ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.