ADVERTISEMENT

ಮತ್ತೊಬ್ಬ ಅಭ್ಯರ್ಥಿ ಬಂಧನ; ದಿವ್ಯಾ ಬಂಧನಕ್ಕೆ ವಾರಂಟ್‌

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ವಾರದೊಳಗೆ ಶರಣಾಗಲು ಆರೋಪಿಗಳಿಗೆ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 19:12 IST
Last Updated 26 ಏಪ್ರಿಲ್ 2022, 19:12 IST
ದಿವ್ಯಾ ಹಾಗರಗಿ
ದಿವ್ಯಾ ಹಾಗರಗಿ   

ಕಲಬುರಗಿ:ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಏತನ್ಮಧ್ಯೆ, ಈ ಪ್ರಕರಣದ ಆರೋಪಿಯಾಗಿರುವ ಇಲ್ಲಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಸೇರಿದಂತೆ ಆರು ಜನರ ವಿರುದ್ಧ ಇಲ್ಲಿಯ ನ್ಯಾಯಾಲಯ ಬಂಧನ ವಾರಂಟ್‌ ಹೊರಡಿಸಿದೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ನರಿಬೋಳ ಗ್ರಾಮದ ಎನ್.ವಿ. ಸುನೀಲಕುಮಾರ ಬಂಧಿತರು. ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಅವರು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣ ಬಳಸಿ ಪಾಸಾದ ಆರೋಪ ಇವರ ಮೇಲಿದೆ. ಹಗರಣದಲ್ಲಿ ಈಗಾಗಲೇ ಬಂಧಿತರಾದ ರುದ್ರಗೌಡ ಡಿ. ಪಾಟೀಲ ಮುಖಾಂತರವೇ ಅವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆ, ಓಎಂಆರ್‌ ಶೀಟ್‌ ಮರುಪರಿಶೀಲನೆಗೆ ಹಾಜರಾಗಲು ಸುನೀಲಕುಮಾರಗೆ ಬುಲಾವ್ ಬಂದಿತ್ತು. ಸೋಮವಾರ ಬೆಂಗಳೂರಿನ ಸಿಐಡಿ ಕಚೇರಿಗೆ ತೆರಳಿದ್ದರು. ಪರಿಶೀಲನೆ ವೇಳೆ ಅಕ್ರಮ ನಡೆದ ಸಂದೇಹ ಬಂದಿದ್ದು, ಆರೋಪಿಯನ್ನು ಅಧಿಕಾರಿಗಳು ಸ್ಥಳ
ದಲ್ಲೇ ವಶಕ್ಕೆ ಪಡೆದರು. ಮಂಗಳವಾರ ಅವರನ್ನು ಕಲಬುರಗಿಗೆ ಕರೆತಂದರು.

ADVERTISEMENT

‘ಆರೋಪಿಯು ರುದ್ರಗೌಡ ಡಿ. ಪಾಟೀಲಗೆ ₹ 40 ಲಕ್ಷ ಹಣ ನೀಡಿದ್ದ ಎಂಬ ಸಂಶಯ ಇದ್ದು, ವಿಚಾರಣೆ ನಡೆದಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಶರಣಾಗಲು ಗಡುವು:ದಿವ್ಯಾ ಹಾಗರಗಿ, ನೀರಾವರಿ ಇಲಾಖೆಯ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ ಮೇಳಕುಂದಿ, ರವೀಂದ್ರ ಮೇಳಕುಂದಿ, ಜ್ಞಾನಜ್ಯೋತಿ ಶಾಲೆಯ ಪ್ರಾಚಾರ್ಯ ಕಾಶಿನಾಥ, ಶಿಕ್ಷಕಿಯರಾದ ಅರ್ಚನಾ ಹಾಗೂ ಶಾಂತಿಬಾಯಿ ಅವರ ವಿರುದ್ಧಇಲ್ಲಿನ ಮೂರನೇ ಜೆಎಂಎಫ್‌ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಶ್ರೀವಾಸ್ತವ ಅವರು ಬಂಧನ ವಾರಂಟ್‌ ಜಾರಿಗೊಳಿಸಿದ್ದಾರೆ. ವಾರದೊಳಗೆ ಸಿಐಡಿ ಪೊಲೀಸರ ಎದುರು ಶರಣಾಗಬೇಕು ಎಂದೂ ಆರೋಪಿಗಳಿಗೆ ಸೂಚಿಸಿದ್ದಾರೆ.

ಎರಡು ವಾರಗಳಿಂದ ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿ ಹಾಗೂ ಇತರ ಆರೋಪಿಗಳನ್ನು ಬಂಧಿಸಲು ಸಿಐಡಿಗೆ ಸಾಧ್ಯವಾಗಿಲ್ಲ. ಹೀಗಾಗಿ ನ್ಯಾಯಾಲಯದ ವಾರಂಟ್‌ ಪಡೆದಿದ್ದು, ಒಂದೊಮ್ಮೆ
ಶರಣಾಗದಿದ್ದರೆ ಆರೋಪಿಗಳ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.