ADVERTISEMENT

ಅರೆನ್ಯಾಯಿಕ ಅಧಿಕಾರ ವಿಭಜನೆಗೆ ಶೀಘ್ರ ಆದೇಶ: ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 21:19 IST
Last Updated 31 ಅಕ್ಟೋಬರ್ 2022, 21:19 IST
ಆರ್‌. ಅಶೋಕ
ಆರ್‌. ಅಶೋಕ   

ಬೆಂಗಳೂರು: ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಅರೆನ್ಯಾಯಿಕ ಅಧಿಕಾರವನ್ನು ಅನ್ಯ ಅಧಿಕಾರಿ
ಗಳಿಗೂ ನೀಡಲು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಭೂ ಕಂದಾಯ ಕಾಯ್ದೆ ಪ್ರಕರಣಗಳ ವಿಚಾರಣೆ ಕೋವಿಡ್‌ ಕಾರಣದಿಂದ ದೀರ್ಘ ಕಾಲ ಸ್ಥಗಿತವಾಗಿತ್ತು. ಪ್ರಕರಣಗಳ ಸಂಖ್ಯೆಯೂ ಏರುತ್ತಲೇ ಇದೆ. ಸದ್ಯ 93,834 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ’ ಎಂದರು.

ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ 15,881, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ 62,100 ಮತ್ತು ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ 15,853 ಪ್ರಕರಣಗಳು ಬಾಕಿ ಇವೆ. ಜಿಲ್ಲಾಧಿಕಾರಿಗಳು, ಉಪ
ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳಿಗೆ ಕೆಲಸದ ಒತ್ತಡ ಇರುವುದರಿಂದ ಪ್ರಕರಣಗಳ ವಿಲೇ
ವಾರಿ ವಿಳಂಬವಾಗುತ್ತಿದೆ ಎಂದರು.

ADVERTISEMENT

ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಕೆಲವು ತಾಲ್ಲೂಕುಗಳ ಪ್ರಕರಣಗಳ ವಿಚಾರಣೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿನ ಕೆಲವು ತಾಲ್ಲೂಕುಗಳ ಪ್ರಕರಣಗಳನ್ನು ಸಮಾನ ದರ್ಜೆಯ ಕೆಎಎಸ್‌ ಅಧಿಕಾರಿಗಳಾಗಿರುವ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ನೀಡಲು ನಿರ್ಧರಿಸಲಾಗಿದೆ. ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿರುವ ಕೆಲವು ಹೋಬಳಿಗಳ ಪ್ರಕರಣಗಳ ವಿಚಾರಣೆ ಅಧಿಕಾರವನ್ನು ಉಪ ತಹಶೀಲ್ದಾರ್‌ಗಳಿಗೆ ನೀಡಲಾಗುವುದು. ಈ ಸಂಬಂಧ 20 ದಿನಗಳೊಳಗೆ ಆದೇಶ ಹೊರಬೀಳಲಿದೆ ಎಂದರು.

ಪ್ರತಿ ಅಧಿಕಾರಿಗೂ ಪ್ರಕರಣಗಳ ವಿಲೇವಾರಿಗೆ ಗುರಿ ನಿಗದಿಪಡಿಸಲಾಗುವುದು. ವಿಚಾರಣೆ ಪೂರ್ಣಗೊಳಿಸಿದ ಬಳಿಕ ಆದೇಶ ಪ್ರಕಟಿಸುವುದಕ್ಕೂ ಗಡುವು ನೀಡಲಾಗುವುದು ಎಂದು ಸಚಿವರು ತಿಳಿಸಿದರು.

60 ಸಾವಿರ ಹಕ್ಕುಪತ್ರ: ರಾಜ್ಯದಲ್ಲಿರುವ ಎಲ್ಲ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೊಂದು ಐತಿಹಾಸಿಕ ನಿರ್ಧಾರ. ಲಂಬಾಣಿ ತಾಂಡಾಗಳಲ್ಲಿ ಒಟ್ಟು 6 ಲಕ್ಷ ಕುಟುಂಬಗಳಿವೆ. ಎಲ್ಲರಿಗೂ ಹಂತ ಹಂತವಾಗಿ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ನವೆಂಬರ್‌ ಕೊನೆಯ ವಾರ ಯಾದಗಿರಿ ಜಿಲ್ಲೆಯಲ್ಲಿ ಲಂಬಾಣಿ ತಾಂಡಾ ಜನರ ಸಮಾವೇಶ ನಡೆಸ
ಲಾಗುವುದು. 60,000 ಕುಟುಂಬಗಳಿಗೆ ಅಲ್ಲಿ ಏಕಕಾಲದಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.