ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ರಾರಾವಿಯಲ್ಲಿ ಯಲ್ಲಮ್ಮನಹಳ್ಳ ಉಕ್ಕಿ ಹರಿಯುತ್ತಿದೆ (ಎಡ ಚಿತ್ರ). ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿಯ ಮಾವಿನ ತೋಪಿನಲ್ಲಿ ಮಳೆ ನೀರು ನಿಂತಿದೆ
ಕಲಬುರಗಿ/ಹುಬ್ಬಳ್ಳಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಬಿರುಸಿನ ಮಳೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಬಿಸಿಲ ಧಗೆ ಕಡಿಮೆಯಾಗಿದೆ.
ಬೀದರ್ ನಗರವೂ ಸೇರಿದಂತೆ ತಾಲ್ಲೂಕಿನ ಹಲವೆಡೆ ಭಾನುವಾರ ಮಧ್ಯಾಹ್ನ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾಯಚೂರು ನಗರ, ಮಸ್ಕಿ, ಹಟ್ಟಿ ಚಿನ್ನದಗಣಿ, ಸಿಂಧನೂರು, ಸಿರವಾರ, ದೇವದುರ್ಗ, ಲಿಂಗಸುಗೂರು, ಮಾನ್ವಿ ತಾಲ್ಲೂಕಿನಲ್ಲಿ ಮಳೆಯಾಗಿದೆ. ಮಸ್ಕಿ ತಾಲ್ಲೂಕಿನಲ್ಲಿ 6.7 ಸೆಂ.ಮೀ. ಮಳೆಯಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಭಾರಿ ಮಳೆ, ಗಾಳಿಗೆ ಮಾವಿನ ಮರಗಳಲ್ಲಿನ ಮಾವಿನಕಾಯಿ ಉದುರಿ ಬಿದ್ದಿದೆ.
ಬಳ್ಳಾರಿ ಜಿಲ್ಲೆಯ ಗೊಲ್ಲನಾಗೇನಹಳ್ಳಿಯಲ್ಲಿ ಐದು ಕುರಿಗಳು ಮೃತಪಟ್ಟಿವೆ. ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕಿನಾದ್ಯಂತ 7.82 ಸೆಂ.ಮೀ ಮಳೆಯಾಗಿದೆ. ರಭಸದ ಗಾಳಿಗೆ ಹಲವೆಡೆ ಮರಗಳ ಕೊಂಬೆಗಳು ಮುರಿದು ಬಿದ್ದಿವೆ. ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ಬಹುತೇಕ ಕಡೆ ವಿದ್ಯುತ್ ಪೂರೈಕೆ ಕಡಿತಗೊಂಡಿತು.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ರಾರಾವಿಯಲ್ಲಿ ಯಲ್ಲಮ್ಮನಹಳ್ಳ ಉಕ್ಕಿ ಹರಿಯುತ್ತಿದ್ದು, ಕುರುವಳ್ಳಿ, ರಾಂಪುರ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಲ್ಲಿ 3.87ಸೆಂ.ಮೀ ಮಳೆಯಾಗಿದೆ. ಹರಪನಹಳ್ಳಿ ತಾಲ್ಲೂಕಿನ ಚೆನ್ನಹಳ್ಳಿ ತಾಂಡದಲ್ಲಿ ವಿದ್ಯುತ್ ತಂತಿ ತಗುಲಿ ಎತ್ತು ಮೃತಪಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಕುಮಟಾ ಮತ್ತು ಮುಂಡಗೋಡದಲ್ಲಿ ಉತ್ತಮ ಮಳೆಯಾಯಿತು.
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು, ಖಾನಾಪುರ, ಗೋಕಾಕದಲ್ಲಿ ಮತ್ತು ಬಾಗಲಕೋಟೆ ಜಿಲ್ಲೆ ಬಾದಾಮಿ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ರಭಸದ ಮಳೆ ಸುರಿಯಿತು.
ಮಾವಿನ ತೋಟದಲ್ಲಿ ನಿಂತ ಮಳೆ ನೀರು
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿವಿಧೆಡೆ ಭಾನುವಾರ ಮಧ್ಯಾಹ್ನ ಗುಡುಗು, ಮಿಂಚು ಸಹಿತ ಜೋರು ಮಳೆ ಸುರಿಯಿತು. ದಟ್ಟವಾದ ಮೋಡ ಆವರಿಸಿ ಮಧ್ಯಾಹ್ನ ಕತ್ತಲು ಕವಿಯಿತು. ಅದರ ಬೆನ್ನಲ್ಲೇ ಮಳೆ ಸುರಿಯಲು ಆರಂಭವಾಯಿತು. ಕೋಲಾರ ಜಿಲ್ಲೆಯಲ್ಲಿ ಸತತ ಐದು ದಿನಗಳಿಂದ ಬಿಟ್ಟಬಿಟ್ಟು ಮಳೆ ಸುರಿಯುತ್ತಲೇ ಇದೆ.
ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಸೆಂ.ಮೀ. ಮಳೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಾದ್ಯಂತ ಹದ ಮಳೆಯಾಯಿತು. ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಚಿತ್ರಾವತಿ ನದಿಯಲ್ಲಿ ನೀರು ಹರಿಯುತ್ತಿದೆ. ರಾಜಕಾಲುವೆ ಒತ್ತುವರಿಯಾದ ಕಾರಣ ಮಳೆ ನೀರು ಪಕ್ಕದ ಮಾವಿನ ತೋಪಿಗೆ ನುಗ್ಗಿದೆ. ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ ಗ್ರಾಮದ ಇಡೀ ಮಾವಿನ ತೋಪಿನಲ್ಲಿ ನೀರು ನಿಂತಿದೆ.
ಕೊಯ್ಲಿಗೆ ಬಂದಿದ್ದ ಮಾವು ಕಟಾವು ಮಾಡದಿದ್ದರಿಂದ, ಮರದಲ್ಲಿಯೇ ಕೊಳೆಯುವ ಆತಂಕ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.