ADVERTISEMENT

ಸಿಡಿ ಪ್ರಕರಣದ ಷಡ್ಯಂತ್ರ ಕುರಿತು ಬೆಚ್ಚಿ ಬೀಳಿಸುವ ಮಾಹಿತಿ ಸಿಕ್ಕಿದೆ: ಜಾರಕಿಹೊಳಿ

‘ಮಹಾನಾಯಕ’ನ ಹೆಸರು ಶೀಘ್ರವೇ ಬಹಿರಂಗ ಎಂದ ಶಾಸಕ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 10:11 IST
Last Updated 25 ಮಾರ್ಚ್ 2021, 10:11 IST
ಶಾಸಕ ರಮೇಶ ಜಾರಕಿಹೊಳಿ
ಶಾಸಕ ರಮೇಶ ಜಾರಕಿಹೊಳಿ   

ಬೆಂಗಳೂರು:‘ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆಸಿರುವ ‘ಮಹಾನಾಯಕ’ನ ಹೆಸರನ್ನು ಶೀಘ್ರವೇ ಬಹಿರಂಗಪಡಿಸಲಿದ್ದೇನೆ. ನಾನೂ ಕೂಡ ಸಾಕ್ಷ್ಯ ಸಂಗ್ರಹಿಸಿದ್ದು, ಆ ಕುರಿತ ಮಾಹಿತಿ ಕೇಳಿದರೆ ಶಾಕ್‌ ಆಗುತ್ತೀರ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ತಮ್ಮ ತಂದೆ ತಾಯಿಗೆ ರಕ್ಷಣೆ ನೀಡಬೇಕು ಮತ್ತು ಎಸ್‌ಐಟಿ ಯಾರ ಪರ ಕೆಲಸ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿ ಸಂತ್ರಸ್ತ ಮಹಿಳೆ ಬಿಡುಗಡೆ ಮಾಡಿರುವ ಎರಡನೇ ವಿಡಿಯೊ ಸಂದೇಶಕ್ಕೆ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.

‘ಇದು ಪಕ್ಕಾ ಷಡ್ಯಂತ್ರ. ನನ್ನ ವಿರುದ್ಧ ಇನ್ನು 10 ಸಿಡಿಗಳು ಬಂದರೂ ಹೆದರುವುದಿಲ್ಲ. ನಮ್ಮ ಬಳಿಯೂ ಬೆಚ್ಚಿ ಬೀಳಿಸುವ ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ಷಡ್ಯಂತ್ರ ರೂಪಿಸಿದ ‘ಮಹಾನಾಯಕ’ನ ಹೆಸರು ಬಹಿರಂಗಪಡಿಸುತ್ತೇನೆ’ ಎಂದರು.

ADVERTISEMENT

‘ನಾನು ಯಾವುದೇ ತಪ್ಪು ಮಾಡಿಲ್ಲ. ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಹಾಕುವವರೆಗೂ ಬಿಡುವುದಿಲ್ಲ. ನಿರ್ದೋಷಿಯಾಗಿ ಹೊರಬರುತ್ತೇನೆ. ಈ ವಿಷಯವಾಗಿ ಚರ್ಚೆ ಮಾಡುತ್ತಿರುವವರ ಮೇಲೂ ನಾಳೆ ಸಿಡಿ ಬರಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೂ ಸಾಕಷ್ಟು ಸಾಕ್ಷ್ಯವನ್ನು ಸಂಗ್ರಹಿಸಿದ್ದೇನೆ. ಅವೆಲ್ಲವೂ ನನ್ನ ಜೇಬಿನಲ್ಲೇ ಇವೆ. ಹೆಚ್ಚು ಮಾತನಾಡಬೇಡಿ ಎಂದು ವಕೀಲರು ಹೇಳಿದ್ದಾರೆ. ಹೀಗಾಗಿ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಿಲ್ಲ’ ಎಂದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಗೌರವ ಇತ್ತು. ಆದರೆ ನನ್ನ ವಿರುದ್ಧವೇ ಅತ್ಯಾಚಾರ ಪ್ರಕರಣ ದಾಖಲಿಸಿ ಎಂದು ಹೇಳಿದ್ದಾರೆ. ಅವರ ಮೇಲಿದ್ದ ಗೌರವ ಹೋಯಿತು’ ಎಂದೂ ಅವರು ರಮೇಶ ಜಾರಕಿಹೊಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.