ADVERTISEMENT

ದಾರಿಯುದ್ದಕ್ಕೂ 'ಕ್ಷಮಿಸಿ' ಎನ್ನುತ್ತಿದ್ದ ಸಿದ್ದಾರ್ಥ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 10:51 IST
Last Updated 30 ಜುಲೈ 2019, 10:51 IST
   

ಮಂಗಳೂರು: ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದ ಸಿದ್ದಾರ್ಥ ರಸ್ತೆ ಮಾರ್ಗವಾಗಿಯೇ ಮಂಗಳೂರು ತಲುಪಿದ್ದರು. ದಾರಿಯುದ್ದಕ್ಕೂ ಸ್ನೇಹಿತರಿಗೆ ಕರೆ‌ ಮಾಡುತ್ತಿದ್ದ ಅವರು 'ಐ ಅ್ಯಮ್ ಸಾರಿ' ಎಂದಷ್ಟೇ ಹೇಳಿ ಕರೆ ಕಟ್ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ದಾರಿಯುದ್ದಕ್ಕೂ ಹಲವರಿಗೆ ಕರೆ ಮಾಡಿದ್ದ ಸಿದ್ದಾರ್ಥ ಕ್ಷಮಿಸಿ ಎಂದು ಹೇಳಿದ್ದಾರೆ. ಬೇರೆ ಏನನ್ನೂ ಮಾತನಾಡುತ್ತಿರಲಿಲ್ಲ ಎಂಬ ಮಾಹಿತಿಯನ್ನು ಅವರ ಜೊತೆಗಿದ್ದ ಚಾಲಕ ಪೊಲೀಸರ ಬಳಿ ಹಂಚಿಕೊಂಡಿದ್ದಾನೆ ಎಂದು ಗೊತ್ತಾಗಿದೆ.

ಚಾಲಕನ ದೂರಿನಲ್ಲೇನಿದೆ?
ಸಿದ್ದಾರ್ಥ ಅವರ ಸೂಚನೆಯಂತೆ ಸೋಮವಾರ ಮಧ್ಯಾಹ್ನ 12.30ರಲ್ಲಿ ಸಕಲೇಶಪುರಕ್ಕೆ ಕಾರಿನಲ್ಲಿ ಹೊರಟೆವು. ಸಕಲೇಶಪುರ ಸಮೀಪಿಸುತ್ತಿದ್ದಂತೆ ಮಂಗಳೂರಿಗೆ ತೆರಳಲು ಸೂಚಿಸಿದರು. ಮಂಗಳೂರು ಸರ್ಕಲ್‌ ಬಿಟ್ಟು ಮುಂದೆ ಹೋದ ನಂತರ ದೊಡ್ಡ ಸೇತುವೆ ಸಿಕ್ಕಿತು. ಅದರ ಬಳಿಗೆ ಬಂದಾಗ ಕಾರಿನಿಂದ ಇಳಿದ ಅವರು, ಸೇತುವೆಯ ಕೊನೆಗೆ ಹೋಗಿ ನಿಲ್ಲುವಂತೆಯೂ, ತಾವು ನಡೆದುಕೊಂಡು ಬರುವುದಾಗಿ ತಿಳಿಸಿದರು. ನಂತರ ನಡೆದುಕೊಂಡು ಬಂದ ಅವರು, ಕಾರಿನ ಒಳಗೇ ಇರುವಂತೆ ನನಗೆ ತಿಳಿಸಿ, ಮರಳಿ ಹಿಂದಕ್ಕೆ ಹೋದರು. ನಂತರ ರಾತ್ರಿ 8 ಗಂಟೆ ಆದರೂ ಅವರು ಕಾಣಲಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದೆ. ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದರಿಂದ, ಪುತ್ರ ಅಮಾರ್ತ್ಯ ಹೆಗ್ಡೆ ಅವರಿಗೆ ತಿಳಿಸಿದೆ. ನಂತರ ಅಮಾರ್ತ್ಯ ಸಲಹೆ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ADVERTISEMENT

ಕುಟುಂಬಕ್ಕೂ ಮಾಹಿತಿ ಇರಲಿಲ್ಲ
ಸಿದ್ದಾರ್ಥ ಅವರು ಮಂಗಳೂರಿಗೆ ಬರುತ್ತಿರುವ ಮಾಹಿತಿಯನ್ನು ಕುಟುಂಬದವರ ಜೊತೆಯೂ ಹಂಚಿಕೊಂಡಿರಲಿಲ್ಲ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.