ರಿಪ್ಪನ್ಪೇಟೆ: ಮಧ್ಯ ಕಾಲದಲ್ಲಿ ಕಾಣೆಯಾಗಿದ್ದ ದಿಗಂಬರ ಮುನಿ ಪರಂಪರೆಯನ್ನು ಇಪ್ಪತ್ತನೇ ಶತಮಾನದಲ್ಲಿ ಪುನರುತ್ಥಾನಗೊಳಿಸುವ ಕಾರ್ಯ ಭಟ್ಟಾರಕ ಪೀಠದ ಹೆಗಲಿಗೆ ಬಿತ್ತು. ಆ ನಿಟ್ಟಿನಲ್ಲಿ ದಕ್ಷಿಣ ಭಾರತದ ಜೈನ ಧರ್ಮ ರಕ್ಷಣೆಯ ಹೊಣೆಯಲ್ಲಿ ಶ್ರವಣ ಬೆಳಗೊಳದ ಭಟ್ಟಾರಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಹುಬ್ಬಳ್ಳಿಯ ನಿವೃತ್ತ ಉಪನ್ಯಾಸಕ ಪ್ರೊ. ಜೀವಂಧರ ಕುಮಾರ ಹೋತಪೇಟಿ ಹೇಳಿದರು.
ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಹೊಂಬುಜ ಜೈನ ಮಠದಿಂದ ‘ಸಿದ್ಧಾಂತ ಕೀರ್ತಿ’ ಪ್ರಶಸ್ತಿ, ₹ 51,000 ನಗದು ಮತ್ತು ಅಂಗವಸ್ತ್ರ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
‘ಜೈನ ಧರ್ಮದ ದಿಗಂಬರ ಮುನಿ ಪರಂಪರೆಯ ತೀರ್ಥಂಕರರ ವಾಣಿಗಳನ್ನು ಪರಿಪಾಲನೆ ಮಾಡುವ ಶ್ರಾವಕರ ರಕ್ಷಣೆ, ನಿರ್ವಾಹಣೆ ಇಲ್ಲದೇ ಸೊರಗಿದ ಜಿನಾಲಯ ಜೀರ್ಣೋದ್ಧಾರ, ಪೂರ್ವ ಪರಂಪರೆಯ ಜೈನ ಗ್ರಂಥಗಳ ಮರು ಮುದ್ರಣಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ’ ಎಂದರು.
‘ಐದು ದಶಕಗಳಿಂದ ಚಾರುಕೀರ್ತಿ ಭಟ್ಟಾರಕರು ಜೈನ ಧರ್ಮ ಗ್ರಂಥಗಳ ರಚನೆಯಲ್ಲಿ ತೊಡಗಿದ ಸಾಹಿತ್ಯಾಸಕ್ತರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಶ್ಲಾಘಿಸಿದರು.
ಮಠದ ಪೀಠಾಧಿಕಾರಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಪೂರ್ವ ಪರಂಪರೆಯಂತೆ ಮಠದಲ್ಲಿ ದೇವ-ಗುರು-ಶಾಸ್ತ್ರಗಳಲ್ಲಿ ವಿಶೇಷ ನಿಷ್ಠೆ, ಜೈನಧರ್ಮ-ಸಂಸ್ಕೃತಿ- ಪರಂಪರೆ- ಚರಿತ್ರೆಗಳ ಅಧ್ಯಯನ- –ಆಧ್ಯಾಪನ ಕಾರ್ಯ ನಿರಂತರವಾಗಿ ಸಾಗಲಿ. ಪ್ರತಿಯೊಬ್ಬರು ಅಹಿಂಸಾ ಧರ್ಮ ಪರಿಪಾಲನೆ ಮಾಡುತ್ತ ಸತ್ ಚಿಂತನೆ ಮೈಗೂಡಿಸಿಕೊಳ್ಳಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.