ADVERTISEMENT

ಅರ್ಕಾವತಿ ಆರ್ತನಾದಕ್ಕೆ ಯಾರು ಕಾರಣ: ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 19:30 IST
Last Updated 23 ಜನವರಿ 2022, 19:30 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಐದು ವರ್ಷ ಮುಖ್ಯಮಂತ್ರಿಯಾಗಿದ್ದರೂ ಯಾವುದೇ ಕಮಿಷನ್‌ ಪಡೆದಿಲ್ಲ, ನಾನು ಶುದ್ಧಹಸ್ತ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಈಗಲೂ ಕೇಳಿಸುತ್ತಿರುವ ಅರ್ಕಾವತಿ ಆರ್ತನಾದಕ್ಕೆ ಯಾರು ಕಾರಣ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಭಾನುವಾರವೂ ಸರಣಿ ಟ್ವೀಟ್‌ ಮೂಲಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ‘ಅರ್ಕಾವತಿಯ ಸತ್ಯದ ಕತೆ ಬಿಚ್ಚಿಟ್ಟರೆ ಸಿದ್ಧಹಸ್ತರು ಮುಖವನ್ನು ಎಲ್ಲಿಟ್ಟುಕೊಳ್ಳುತ್ತಾರೆ? ದೇವರಾಜ ಅರಸು ನಂತರ ನಾನೇ ಐದು ವರ್ಷ ಮುಖ್ಯಮಂತ್ರಿ ಆಗಿದ್ದವನು ಎಂದು ಹೇಳಿಕೊಳ್ಳುವ ಅವರ ಪಾಡು ಏನಾಗಬಹುದು? ಐದು ವರ್ಷದ ಮುಖ್ಯಮಂತ್ರಿಯ ಪ್ರಭಾವಳಿಯ ಕತೆ ಏನು’ ಎಂದು ಕೇಳಿದ್ದಾರೆ.

‘ಸ್ವಯಂಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ ನಮ್ಮ ಪಕ್ಷ ಮತ್ತು ನಮ್ಮ ಕುರಿತು ಲಘುವಾಗಿ ಮಾತನಾಡಿದ್ದಕ್ಕೆ ಉತ್ತರ ಕೊಟ್ಟಿದ್ದೇನೆ. ಆಡಿದ ಮಾತನ್ನು ದಕ್ಕಿಸಿಕೊಳ್ಳುವ ಯೋಗ್ಯತೆ ಅವರಿಗಿಲ್ಲ. ಪ್ರಜಾಪ್ರಭುತ್ವದಲ್ಲಿ ಒಂದು ಜಿಲ್ಲೆಯಿಂದ ಪಕ್ಷವೊಂದನ್ನು ಓಡಿಸಿ ಎನ್ನುವುದು ಯಾವ ಸಂಸ್ಕೃತಿ’ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ADVERTISEMENT

‘ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಎಂದು ಹೇಳುವ ಸಿದ್ದರಾಮಯ್ಯ, ಪದೇ ಪದೇ ನಮ್ಮ ಬಗ್ಗೆಯೇ ಮಾತನಾಡುತ್ತಾರೆ. ಇದನ್ನು ನೋಡಿದರೆ ಯಾರ ಬಗ್ಗೆ ಯಾರಿಗೆ ಭಯ ಇದೆ ಎನ್ನುವುದು ಗೊತ್ತಾಗುತ್ತದೆ. ನಾನು, ನನ್ನ ತಂದೆ, ಅಣ್ಣ ಚುನಾವಣೆಯಲ್ಲಿ ಸೋತಿರುವುದು ನಿಜ. ನಾವು ಅಧೀರರಾಗಿಲ್ಲ, ಸೋತಿದ್ದಕ್ಕೆ ಕಣ್ಣೀರು ಹಾಕಿಲ್ಲ. ಸಿದ್ಧಹಸ್ತರ ಕಣ್ಣೀರ ಕೋಡಿ ಕಂಡಿರುವ ದೇವೇಗೌಡರು ಇನ್ನೂ ನಮ್ಮ ಜತೆ ಇದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.