ADVERTISEMENT

ಬಾಗೇಪಲ್ಲಿಯಲ್ಲಿ ಸಿಪಿಎಂ ರ‍್ಯಾಲಿ ಆರಂಭ; ಎಲ್ಲೆಡೆ ಹಾರಿವೆ ಕೆಂಬಾವುಟ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 7:30 IST
Last Updated 18 ಸೆಪ್ಟೆಂಬರ್ 2022, 7:30 IST
   

ಬಾಗೇಪಲ್ಲಿ:ಪಟ್ಟಣದಲ್ಲಿ ನಡೆಯಲಿರುವ ಸಿಪಿಎಂ ರಾಜಕೀಯ ಸಮಾವೇಶದ ಪ್ರಯುಕ್ತ ಹಮ್ಮಿಕೊಂಡಿರುವರ‍್ಯಾಲಿಗೆ ಅಪಾರ ಸಂಖ್ಯೆಯಲ್ಲಿ ಸಿಪಿಎಂ ಕಾರ್ಯಕರ್ತರು ಸೇರುತ್ತಿದ್ದಾರೆ.

ಗೂಳೂರು ವೃತ್ತದಿಂದ ಕೆಎಚ್‌ಬಿ ಕಾಲೊನಿವರೆಗೆರ‍್ಯಾಲಿ ನಡೆಯಲಿದೆ.ಪಟ್ಟಣದ ಎಲ್ಲಿ ನೋಡಿದರೂ ಕೆಂಬಾವುಟಗಳು ರಾರಾಜಿಸುತ್ತಿವೆ. ರಾಜ್ಯ ಮಟ್ಟದ ಈ ಸಮಾವೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ಸಾಧ್ಯತೆ ಇದೆ.

ಪ್ರಮುಖವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾಗಿಯಾಗುತ್ತಿದ್ದಾರೆ. ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯರಾದ ಎಂ.ಎ.ಬೇಬಿ, ಬಿ.ವಿ.ರಾಘವುಲು, ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್ ಪ್ರಮುಖ ಭಾಷಣಕಾರರಾಗಿದ್ದಾರೆ.

ADVERTISEMENT

ಮೆರವಣಿಗೆಯಲ್ಲಿ 500 ಮಂದಿ ತಮಟೆ ಕಲಾವಿದರು, 200 ನಾದಸ್ವರ, ಡೋಲುಗಳು, 500ಕ್ಕೂ ಹಚ್ಚು ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಕೆಂಪು ವಸ್ತ್ರಧಾರಿಗಳು ಕೆಂಬಾವುಟ ಹಿಡಿದು ಸಾಗುತ್ತಿದ್ದಾರೆ.

2023ರ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಕೆಯಾಗಿ ಸಿಪಿಎಂ ಈ ಸಮಾವೇಶ ಹಮ್ಮಿಕೊಂಡಿದೆ. ಸಮಾವೇಶದ ಹಿನ್ನೆಲೆಯಲ್ಲಿ ಈಗಾಗಲೇ ಸಿಪಿಎಂ ಪಕ್ಷವು ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲ್ಲೂಕಿನಲ್ಲಿ ಹಳ್ಳಿಗಳಲ್ಲಿ ಸಾಂಸ್ಕೃತಿಕ ಜಾಥಾ ನಡೆಸಿದೆ.

ಕೆಂಬಾವುಟದ ಕ್ಷೇತ್ರ ಬಾಗೇಪಲ್ಲಿ:ರಾಜ್ಯದಲ್ಲಿ 1980ರ ದಶಕದಿಂದ ಇಲ್ಲಿಯವರೆಗೂ ಸಿಪಿಎಂನ ಕೆಂಬಾವುಟ ಗಟ್ಟಿಯಾಗಿ ನೆಲೆಯೂರಿರುವ ವಿಧಾನಸಭಾ ಕ್ಷೇತ್ರ ಎನ್ನುವ ಹೆಗ್ಗರುತು ಬಾಗೇಪಲ್ಲಿಗೆ ಇದೆ.

1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ 2018ರ ವಿಧಾನಸಭೆ ಚುನಾವಣೆವರೆಗೆ ಒಟ್ಟು ಮೂರು ಬಾರಿ ಈ ಕ್ಷೇತ್ರದಲ್ಲಿ ಸಿಪಿಎಂ ಗೆಲುವು ಸಾಧಿಸಿದೆ. ಎ.ವಿ.ಅಪ್ಪಸ್ವಾಮಿರೆಡ್ಡಿ ಒಮ್ಮೆ ಮತ್ತು ಜಿ.ವಿ. ಶ್ರೀರಾಮರೆಡ್ಡಿ ಎರಡು ಬಾರಿ ಸಿಪಿಎಂನಿಂದ ಇಲ್ಲಿ ಶಾಸಕರಾಗಿದ್ದರು.

ಈ ಎಲ್ಲ ದೃಷ್ಟಿಯಿಂದ ರಾಜ್ಯದಲ್ಲಿ ಇಂದಿಗೂ ಸಿಪಿಎಂಗೆ ಭದ್ರವಾದ ನೆಲೆ ಇರುವುದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ. ಈ ದೃಷ್ಟಿಯಿಂದ ಸಿಪಿಎಂ ಮುಖಂಡರು ಮತ್ತೆ ಕೆಂಬಾವುಟಕ್ಕೆ ಬಲ ತುಂಬಲು ಸಮಾವೇಶ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.