ಬೆಂಗಳೂರು: 'ಗಲಭೆಗಳಲ್ಲಿ ಹಾನಿಗೀಡಾದ ಸಾರ್ವಜನಿಕ ಆಸ್ತಿಯ ಮೌಲ್ಯವನ್ನು ಗಲಭೆಕೋರರಿಂದಲೇ ವಸೂಲಿ ಮಾಡಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಕರ್ನಾಟಕ ಸರ್ಕಾರವೂ ಕಾರ್ಯನಿರ್ವಹಿಸಲಿದೆ' ಎಂದು ಗೃಹ ಸಚಿವ ಬಸವರಾಜಬೊಮ್ಮಾಯಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ ವೇಳೆ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿದವರನ್ನು ಸಿಸಿಟಿವಿ ಫೂಟೇಜ್ ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷಿಗಳ ಮೂಲಕ ಗುರುತಿಸಲಾಗುವುದು. ಅವರಿಂದಲೇ ನಷ್ಟವನ್ನು ವಸೂಲು ಮಾಡುತ್ತೇವೆ' ಎಂದು ಅವರು ಘೋಷಿಸಿದರು.
ಅಕ್ಷಮ್ಯ ಅಪರಾಧ
'ಯಾರೇ ಆಗಲಿ,ಸಾರ್ವಜನಿಕ ಆಸ್ತಿ ಹಾಳು ಮಾಡುವುದನ್ನು ಸಹಿಸಲು ಆಗುವುದಿಲ್ಲ.ಬೆಂಗಳೂರಿನಲ್ಲಿ ಆಗಿರುವ ಪೂರ್ವ ನಿಯೋಜಿತ ಗಲಭೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದರು.
'ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯೊದಗಿದ್ದರೆ ಪೊಲೀಸರಿಗೆ ದೂರು ನೀಡಬೇಕಿತ್ತು. ಅದು ಬಿಟ್ಟು ಹೀಗೆ ಕಾನೂನು ಕೈಗೆತ್ತಿಕೊಂಡು ಆಸ್ತಿಪಾಸ್ತಿ ಹಾಳು ಮಾಡುವುದು. ಮನೆಗಳಿಗೆ ಕಲ್ಲು ತೂರುವುದು ಅಕ್ಷಮ್ಯ. ಪೊಲೀಸರು ಕಠಿಣ ಕ್ರಮ ತಗೊಂಡಿದ್ದಾರೆ, ಗಲಭೆ ನಿಯಂತ್ರಿಸಿದ್ದಾರೆ. ಈ ಕುರಿತು ಗೃಹ ಸಚಿವಬೊಮ್ಮಾಯಿ ಅವರ ಜೊತೆಗೆಮಾತನಾಡಿದ್ದೇನೆ' ಎಂದು ಅವರು ಹೇಳಿದರು.
ಧೈರ್ಯ ತುಂಬಿದ ಸ್ವಾಮೀಜಿ
ಪುಲಕೇಶಿ ನಗರದಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ನಗರದಲ್ಲಿ ಭೇಟಿ ಮಾಡಿದಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಗಳ ಹಲವು ಸ್ವಾಮೀಜಿಗಳು ಧೈರ್ಯ ತುಂಬಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.