ADVERTISEMENT

Operation Sindoor: ಉಗ್ರರ ನೆಲೆ ‘ಸಿಂಧೂರ’ಕ್ಕೆ ತರಗೆಲೆ

​ಪ್ರಜಾವಾಣಿ ವಾರ್ತೆ
Published 8 ಮೇ 2025, 0:30 IST
Last Updated 8 ಮೇ 2025, 0:30 IST
<div class="paragraphs"><p>ಪಾಕಿಸ್ತಾನದ ಲಾಹೋರ್‌ದಿಂದ 30 ಕಿ.ಮೀ ದೂರದಲ್ಲಿರುವ ಮುರಿಡ್ಕೆಯಲ್ಲಿನ ಸರ್ಕಾರಿ ಆರೋಗ್ಯ ಮತ್ತು ಶೈಕ್ಷಣಿಕ ಕೇಂದ್ರದ ಹಾನಿ</p></div>

ಪಾಕಿಸ್ತಾನದ ಲಾಹೋರ್‌ದಿಂದ 30 ಕಿ.ಮೀ ದೂರದಲ್ಲಿರುವ ಮುರಿಡ್ಕೆಯಲ್ಲಿನ ಸರ್ಕಾರಿ ಆರೋಗ್ಯ ಮತ್ತು ಶೈಕ್ಷಣಿಕ ಕೇಂದ್ರದ ಹಾನಿ

   

ನವದೆಹಲಿ: ಪಹಲ್ಗಾಮ್‌ ಭೀಕರ ಹತ್ಯಾಕಾಂಡ ನಡೆದ ಎರಡು ವಾರಗಳಲ್ಲೇ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬುಧವಾರ ಮುಂಜಾನೆ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಒಂಬತ್ತು ನೆಲೆಗಳನ್ನು 25 ನಿಮಿಷಗಳಲ್ಲೇ ಧ್ವಂಸಗೊಳಿಸಿವೆ. ಕಾಶ್ಮೀರದಲ್ಲಿ ವಿಹಾರಕ್ಕೆ ಬಂದಿದ್ದ ನಾರಿಯರ ಸಿಂಧೂರ (ಕುಂಕುಮ) ಅಳಿಸಿದ್ದ ಉಗ್ರರ ವಿರುದ್ಧ ಭಾರತ ಕೈಗೊಂಡ ಪ್ರತೀಕಾರ ಇದಾಗಿದೆ. 

ಎರಡೂವರೆ ದಶಕಗಳಿಂದ ಭಾರತಕ್ಕೆ ತಲೆನೋವಾಗಿರುವ ಜಾಗತಿಕ ಉಗ್ರ ಮಸೂದ್‌ ಅಜರ್‌ನ ಕುಟುಂಬದ 10 ಸದಸ್ಯರು ಹಾಗೂ ನಾಲ್ವರು ಆಪ್ತರನ್ನು ಹತ್ಯೆಗೈಯುವ ಮೂಲಕ ದಾಳಿಯು ಯೋಜಿತ ಫಲಿತಾಂಶವನ್ನು ಪಡೆದಿದೆ. 14 ಮಂದಿ ಸತ್ತಿರುವು ದನ್ನು ಮಸೂದ್‌ ಅಜರ್‌ ಕೂಡ ಖಚಿತಪಡಿಸಿ
ದ್ದಾಗಿ ವರದಿಯಾಗಿದೆ. ಕ್ಷಿಪ್ರ ದಾಳಿಯಲ್ಲಿ 70ರಿಂದ 100 ಭಯೋತ್ಪಾದಕರನ್ನು ಕೊಂದು ಹಾಕಲಾಗಿದೆ.

ADVERTISEMENT

ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದಶಕಗಳಿಂದ ನೆಲೆಯೂರಿ ಭಾರತದಲ್ಲಿ ಹಲವು
ದುಷ್ಕೃತ್ಯಗಳನ್ನು ನಡೆಸಿದ್ದ ಜೈಷ್‌–ಎ–ಮೊಹಮ್ಮದ್‌, ಲಷ್ಕರ್-ಎ-ತಯಬಾ ಸೇರಿದಂತೆ ಪ್ರಮುಖ ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆಯು ಭಾರಿ ತಂತ್ರಗಾರಿಕೆಯೊಂದಿಗೆ ನಿಖರ ಪ್ರಹಾರ ನಡೆಸಿದೆ. ಪಾಕಿಸ್ತಾನದ ನಾಲ್ಕು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಐದು ನೆಲೆಗಳನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಪಡೆಗಳು ಬೆಳಗಿನ ಜಾವ 1.05ರಿಂದ 1.30ರ ವರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿವೆ.

‘ದಾಳಿಗಳಲ್ಲಿ ಕನಿಷ್ಠ 26 ಜನರು ಮೃತಪಟ್ಟಿದ್ದಾರೆ ಮತ್ತು 46 ಜನರು ಗಾಯಗೊಂಡಿದ್ದಾರೆ’ ಎಂದು ಪಾಕಿಸ್ತಾನ ಸೇನೆ ಹೇಳಿದೆ. ‘ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡಿಲ್ಲ ಮತ್ತು ನಾಗರಿಕರಿಗೆ ಹಾನಿಯಾದ ವರದಿಗಳಿಲ್ಲ’ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಉರಿ ಭಯೋತ್ಪಾದಕ ದಾಳಿಯ ನಂತರದ ‘ನಿರ್ದಿಷ್ಟ ದಾಳಿ’ ಮತ್ತು ಪುಲ್ವಾಮಾ ಹತ್ಯೆಯ ನಂತರದ ಬಾಲಾಕೋಟ್ ವಾಯುದಾಳಿಯು ಪಾಕ್‌ ಆಕ್ರಮಿತ ಪ್ರದೇಶಗಳಿಗೆ ‘ಸೀಮಿತ’ವಾಗಿದ್ದರೆ, ಈ ಬಾರಿ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿರುವ ಬಹಾವಲ್ಪುರ್ ಮತ್ತು ಮುರೀದ್ಕೆಯಂತಹ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡಿ ನೆರೆ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನಿಸಿವೆ. ಈ ದಾಳಿಯ ಬಳಿಕ, ಗಡಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ಘಟಕಗಳು ಎರಡು ಡಜನ್ ಕ್ಷಿಪಣಿಗಳು ಮತ್ತು  ‘ಸ್ಮಾರ್ಟ್‌’ ಶಸ್ತ್ರಾಸ್ತ್ರ ಬಳಸಿ, ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ. ಒಳಗಿರುವ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿವೆ. ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಜೈಷ್‌–ಇ–ಮೊಹಮ್ಮದ್ ಸಂಘಟನೆಯ ಪ್ರಧಾನ ಕಚೇರಿಯನ್ನು ಹೊಡೆದುರುಳಿಸಿವೆ. ಭಾರತೀಯ ಸೇನೆಯು ಉಗ್ರರ ಏಳು ತಾಣಗಳನ್ನು ಚಿಂದಿ ಉಡಾಯಿಸಿದರೆ, ಬಹಾವಲ್ಪುರದಲ್ಲಿರುವ ಭಯೋತ್ಪಾದಕ ಶಿಬಿರ ಸೇರಿದಂತೆ ಉಳಿದ ಎರಡನ್ನು ಐಎಎಫ್ ತನ್ನ ದೀರ್ಘ ಗುರಿಯ ಶಸ್ತ್ರಾಸ್ತ್ರಗಳಿಂದ ಹೊಡೆದುರುಳಿಸಿತು ಎಂದು ಮೂಲಗಳು ತಿಳಿಸಿವೆ.

ಪಹಲ್ಗಾಮ್‌ ಹೇಯ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದರ ಜತೆಗೆ, ಪಾಕಿಸ್ತಾನ ಮತ್ತು ಅದರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ನೆಲೆಗೊಂಡಿರುವ ಭಯೋತ್ಪಾದಕ ಸಂಘಟನೆಗಳು ದೇಶದಲ್ಲಿ ಇನ್ನಷ್ಟು ಇಂತಹ ದಾಳಿಗಳನ್ನು ಯೋಜಿಸುವ ಸಾಧ್ಯತೆಯ ಬಗ್ಗೆ ಗುಪ್ತಚರ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ‘ಸಿಂಧೂರ’ ಕಾರ್ಯಾಚರಣೆಯನ್ನು ನಡೆಸಿದೆ. 

‘ನಿಖರ ಗುರಿಯೊಂದಿಗೆ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಾಸ್ತ್ರ ಬಳಸಿಕೊಂಡು ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಕಾರ್ಯಾಚರಣೆ ಮುಗಿಸಲಾಗಿದೆ. ಒಂದು ನಿರ್ದಿಷ್ಟ ಕಟ್ಟಡ ಅಥವಾ ಕಟ್ಟಡಗಳ ಗುಂಪನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಲಾಗಿದೆ’ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಭಯೋತ್ಪಾದಕರ ದಾಳಿಯ ನಂತರ ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ಅಮಾಯಕರ ಹತ್ಯೆ ಮಾಡಿರುವ ಉಗ್ರರನ್ನು ಹುಡುಕಿ, ಹುಡುಕಿ ಶಿಕ್ಷಿಸಲಾಗುವುದು. ಅವರ ಕಲ್ಪನೆಗೂ ಮೀರಿದಂತಹ ಶಿಕ್ಷೆ ನೀಡಲಾಗುವುದು’ ಎಂದು ಶಪಥ ಮಾಡಿದ್ದರು. ಸೇನೆಯ ಹಿರಿಯ ಅಧಿಕಾರಿಗಳ ಜತೆಗೆ ಕಳೆದ ವಾರ ಉನ್ನತ ಮಟ್ಟದ ಸಭೆ ನಡೆಸಿದ್ದ ಮೋದಿ ಅವರು, ಪಾಕಿಸ್ತಾನ ಪ್ರೇರಿತ ಉಗ್ರರ ದಮನಕ್ಕೆ ದಾಳಿಯ ಮಾದರಿ, ಗುರಿ ಹಾಗೂ ಸಮಯ ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಕಾರ್ಯಾಚರಣೆಯ ಪೂರ್ಣ ಸ್ವಾತಂತ್ರ್ಯ ಇದೆ’ ಎಂದು ಹೇಳಿದ್ದರು. ಅದಾದ ಒಂದು ವಾರದಲ್ಲೇ ಸೇನೆಯು ಪಾಕ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ಪ್ರತೀಕಾರದ ದಾಳಿ ನಡೆಸಿದೆ.

‘ಇಪ್ಪತೈದು ಮುಗ್ಧ ಭಾರತೀಯರನ್ನು ಮತ್ತು ಒಬ್ಬ ನೇಪಾಳಿ ಪ್ರಜೆಯ‌ನ್ನು ಬರ್ಬರವಾಗಿ ಕೊಂದ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ’ ಎಂದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ‘ನಮ್ಮ ಈ ನಡೆ ನಿರ್ದಿಷ್ಟ, ವಿವೇಚನಾಭರಿತವಾಗಿದೆ ಮತ್ತು ಉದ್ವಿಗ್ನತೆ ಹೆಚ್ಚಿಸುವ ಉದ್ದೇಶ ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಭಾರತವು ಈ ದಾಳಿಗಳನ್ನು ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಮಾಡಿಲ್ಲ. ದಾಳಿಯ ನೆಲೆಗಳ ಆಯ್ಕೆ ಮತ್ತು ವಿಧಾನದಲ್ಲಿ ಸಂಯಮ ವಹಿಸಲಾಗಿದೆ’ ಎಂದು ಅವರು ತಿಳಿಸಿದರು. 

ಉಗ್ರರ ವಿರುದ್ಧ ಪಾಕಿಸ್ತಾನ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಕಾರಣ ಏಪ್ರಿಲ್‌ 22ರ ದುಷ್ಕೃತ್ಯದ ಅಪರಾಧಿಗಳನ್ನು ಶಿಕ್ಷಿಸಲು ಹಾಗೂ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಸರ್ಕಾರವು ದಾಳಿ ನಡೆಸಲು ನಿರ್ಧರಿಸಿತು ಎಂದು ಅವರು ಹೇಳಿದರು. 

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳು, ಸಂಘಟಕರು, ಹಣಕಾಸು ಒದಗಿಸಿದವರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡುವ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹೇಳಿಕೆಗೆ ಅನುಗುಣವಾಗಿ ಭಾರತದ ಕ್ರಮಗಳು ಇವೆ ಎಂದು ಮಿಸ್ರಿ ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ‘ಸಿಂಧೂರ’ ಕಾರ್ಯಾಚರಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿದರು ಎಂದು ಸೇನೆಯ ಮೂಲಗಳು ತಿಳಿಸಿವೆ. ಕಾರ್ಯಾಚರಣೆಯ ನಂತರ, ಅವರು ಕೇಂದ್ರ ಸಚಿವ ಸಂಪುಟದ ಸಭೆ ನಡೆಸಿದರು ಮತ್ತು ಯಶಸ್ವಿ ದಾಳಿಗಳಿಗಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು.

ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಚಿವ ಸಂಪುಟ ಸಮಿತಿ ಸಭೆಯು ಸಶಸ್ತ್ರ ಪಡೆಗಳ ಪ್ರತೀಕಾರದ ದಾಳಿಯ ನಂತರದ ಪರಿಸ್ಥಿತಿಯನ್ನು ಪರಿಶೀಲಿಸಿತು.

---

ಪಾಕಿಸ್ತಾನವು ಉಗ್ರರಿಗೆ ಸುರಕ್ಷಿತ ಅಡಗುತಾಣವಾಗಿದೆ. ನಿಷೇಧಿತ ಅಂತರರಾಷ್ಟ್ರೀಯ ಭಯೋತ್ಪಾದಕರು ಈ ದೇಶದಲ್ಲಿ ಸುರಕ್ಷಿತರಾಗಿ ನೆಲೆಯೂರಿದ್ದಾರೆ. ಪಾಕಿಸ್ತಾನವು ಜಗತ್ತನ್ನು ಮತ್ತು ಅಂತರರಾಷ್ಟ್ರೀಯ ವೇದಿಕೆಗಳನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡಿದೆ. ಭಾರತದ ಮೇಲೆ ಇನ್ನಷ್ಟು ದಾಳಿಗಳನ್ನು ನಡೆಸಲು ಉಗ್ರರು ಯೋಜಿಸಿರುವ ಬಗ್ಗೆ ಗುಪ್ತಚರ ಇಲಾಖೆಗಳು ವರದಿ ನೀಡಿದ್ದವು. ಹೀಗಾಗಿ ಉಗ್ರರನ್ನು ದಂಡಿಸಲಾಗಿದೆ. 

-ವಿಕ್ರಂ ಮಿಸ್ರಿ ವಿದೇಶಾಂಗ ಕಾರ್ಯದರ್ಶಿ

---

ವಿವರ ನೀಡುವಾಗ ವಿಭಿನ್ನ ಹೆಜ್ಜೆ

ನವದೆಹಲಿ: ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸಲು ಕೇಂದ್ರ ಸರ್ಕಾರ ಆಯ್ಕೆ ಮಾಡಿಕೊಂಡಿದ್ದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ,  ಭಾರತೀಯ ಸೇನೆಯ ಕರ್ನಲ್‌ ಸೋಫಿಯಾ ಖುರೇಷಿ ಮತ್ತು ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್ ವ್ಯೋಮಿಕಾ ಸಿಂಗ್‌ ಅವರನ್ನು.

ಮಹತ್ವದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಜಗತ್ತಿಗೆ ಮಾಹಿತಿ ನೀಡುವ ಹೊಣೆಯನ್ನು ಸರ್ಕಾರ ಈ ಮೂವರಿಗೆ ವಹಿಸಿದ್ದು ಒಂದು ಅಸಾಂಪ್ರದಾಯಿಕ ನಡೆ. ಈ ಹೊಣೆಯನ್ನು ಇವರಿಗೆ ವಹಿಸಿದ್ದರ ಹಿಂದೆಯೂ ಒಂದು ಸಂದೇಶ ರವಾನಿಸುವ ಉದ್ದೇಶ ಇದ್ದಂತಿದೆ.

ಪತ್ರಿಕಾಗೋಷ್ಠಿಯಲ್ಲಿ ಮೊದಲು ವಿವರ ನೀಡಿದವರು ಮಿಸ್ರಿ. ಅವರು ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದರು. ಅವರು 1989ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದವರು. ಕಾಶ್ಮೀರದಲ್ಲಿ ದಶಕಗಳಿಂದ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಿಂದ ತೀವ್ರ ನೋವು ಉಂಡವರಲ್ಲಿ ಅಲ್ಲಿನ ಪಂಡಿತ ಸಮುದಾಯದವರೂ ಪ್ರಮುಖವಾಗಿ ಸೇರಿದ್ದಾರೆ.

ಪಹಲ್ಗಾಮ್‌ ದಾಳಿಯಲ್ಲಿ ಉಗ್ರರು ಪತಿ, ತಂದೆ, ಪುತ್ರರನ್ನು ಕೊಂದು; ಬದುಕುಳಿದ ಪತ್ನಿ, ಮಗಳು, ತಾಯಂದಿರು ತೀವ್ರ ಆಘಾತಕ್ಕೆ ಒಳಗಾಗುವಂತೆ ಮಾಡಿದ್ದರು. ಅಂತಹ ಹೇಯ ಕೃತ್ಯಕ್ಕೆ ಪ್ರತೀಕಾರವಾಗಿ ನಡೆದ ದಾಳಿಯ ಕುರಿತ ಮಾಹಿತಿಯನ್ನು ಸಶಸ್ತ್ರ ಪಡೆಗಳ ಮಹಿಳಾ ಅಧಿಕಾರಿಗಳ ಮೂಲಕ ಜಗತ್ತಿಗೆ ನೀಡಲಾಯಿತು.

ಕರ್ನಲ್‌ ಸೋಫಿಯಾ ಅವರು ಯೋಧರ ತ್ಯಾಗ, ಬಲಿದಾನ ಕುರಿತ ಕಥೆಗಳನ್ನು ಚಿಕ್ಕ ವಯಸ್ಸಿನಿಂದಲೇ ಕೇಳುತ್ತ ಬೆಳೆದವರು. ಅವರ ಅಜ್ಜ ಯೋಧರಾಗಿ ಕರ್ತವ್ಯ ನಿರ್ವಹಿಸಿದ್ದರು. ಸೋಫಿಯಾ ಅಥವಾ ಅವರ ಸಹೋದರಿ ಸೇನೆಯನ್ನು ಸೇರಬೇಕು ಎಂಬುದು ಅವರ ಅಮ್ಮನ ಆಸೆ. ‘ದೇಶವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ನನ್ನ ತಾತ ಹೇಳುತ್ತಿದ್ದರು’ ಎಂದು ಸೋಫಿಯಾ ಹಿಂದೊಮ್ಮೆ
ನೆನಪಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.