ADVERTISEMENT

ಇಂದು ವಿಶ್ವ ರಕ್ತದಾನ ದಿನ | ರಕ್ತದಾನಕ್ಕೆ ಪರೀಕ್ಷೆಗಳೇ ಅಡ್ಡಿ

ಕಾಯುವಿಕೆಯಿಂದ ಮುಕ್ತಿ ನೀಡಿ–ರಕ್ತದಾನಿಗಳ ಕೋರಿಕೆ

ಗುರು ಪಿ.ಎಸ್‌
Published 14 ಜೂನ್ 2020, 8:06 IST
Last Updated 14 ಜೂನ್ 2020, 8:06 IST
   

ಬೆಂಗಳೂರು: ಲಾಕ್‌ಡೌನ್‌ ಸಡಿಲಗೊಂಡ ನಂತರ ಬಹಳಷ್ಟು ಜನ ರಕ್ತದಾನ ಮಾಡಲು ಮುಂದೆ ಬರುತ್ತಿದ್ದಾರೆ. ಆದರೆ, ರಕ್ತ ಪಡೆಯುವುದಕ್ಕೆ ಗಂಟೆಗಟ್ಟಲೆ ಕಾಯಿಸಲಾಗುತ್ತಿದೆ ಎಂಬುದು ಸ್ವಯಂಪ್ರೇರಿತ ರಕ್ತದಾನಿಗಳ ಅಳಲು.

‘ನಮಗೆ ಉತ್ತೇಜನ ನೀಡದಿದ್ದರೂ ಅಡ್ಡಿ ಇಲ್ಲ. ಬೇರೆಯವರ ಜೀವ ಉಳಿಸಲು ನೆರವಾಗುವ ನಮ್ಮಂಥವರಿಗೆ ಕಾಯುವಿಕೆಯ ಶಿಕ್ಷೆಯಿಂದ ಮುಕ್ತಿ ನೀಡಿ’ ಎಂಬುದು ರಕ್ತದಾನಿಗಳ ಬೇಡಿಕೆ.

‘ಹತ್ತು ವರ್ಷಗಳಲ್ಲಿ 118 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತ ನೀಡಲು ಹೋದಾಗ ಇತ್ತೀಚೆಗೆ ನಾಲ್ಕೈದು ತಾಸು ಕಾಯಿಸುತ್ತಾರೆ. ಪ್ರಮಾಣಪತ್ರವನ್ನೂ ಕೊಡುವುದಿಲ್ಲ. ಹಣಕ್ಕಿಂತಪ್ರಮಾಣಪತ್ರ ನೀಡಿದರೆ ಆತ್ಮತೃಪ್ತಿ ಇರುತ್ತದೆ’ ಎನ್ನುತ್ತಾರೆ ವಿನೋದ್‌ಕುಮಾರ್.

ADVERTISEMENT

‘ಎಚ್‌ಐವಿ, ಹೆಪಟೈಟಿಸ್‌ ಎಲ್ಲ ಪರೀಕ್ಷೆ ನಂತರ ರಕ್ತ ಪಡೆಯುತ್ತಾರೆ. ಕಿದ್ವಾಯಿ, ರಾಜಾಜಿನಗರ ಇಎಸ್‌ಐ, ಸಪ್ತಗಿರಿ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ರಕ್ತ ಪಡೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಈವರೆಗೆ 89 ಬಾರಿ ರಕ್ತದಾನ ಮಾಡಿದ್ದೇನೆ. ಕೆಲವು ರಕ್ತನಿಧಿಗಳಲ್ಲಿ ಇಂಥ ಸಮಯಕ್ಕೇ ಬನ್ನಿ ಎನ್ನುತ್ತಾರೆ. ಹೋದ ಬಳಿಕ ಕಾಯಿಸುತ್ತಾರೆ. ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿದರೆ ಮಾತ್ರ ಪ್ರಮಾಣಪತ್ರ ಕೊಡುತ್ತೇವೆ, ರೋಗಿಗಳ ಮೂಲಕ ಬಂದರೆ ಕೊಡುವುದಿಲ್ಲ ಎಂದು ಕೆಲವರು ಹೇಳುತ್ತಾರೆ’ ಎಂದು ಪ್ರಭು ಜಯಕುಮಾರ್‌ ತಿಳಿಸಿದರು.

‘ನಾನು ರಕ್ತದಾನ ಮಾಡಿದ ಫೋಟೊ, ಪ್ರಮಾಣಪತ್ರವನ್ನು ಫೇಸ್‌ಬುಕ್‌ನಲ್ಲಿ, ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಳ್ಳುತ್ತಿರುತ್ತೇನೆ. ಇದನ್ನು ನೋಡಿ ಪ್ರೇರೇಪಿತರಾಗಿ 10 ಯುವಕರು ರಕ್ತದಾನ ಮಾಡಲು ಮುಂದೆ ಬಂದರು. ಹಾವೇರಿಯಲ್ಲಿ ಗರ್ಭಿಣಿಯೊಬ್ಬರಿಗೆ ‘ಎ’ ನೆಗೆಟಿವ್‌ ಗುಂಪಿನ ರಕ್ತ ಬೇಕಾಗಿತ್ತು. ನನ್ನ ಸಂಪರ್ಕ ಬಂದಿದ್ದ ಯುವಕರೊಬ್ಬರು ಆ ರಕ್ತ ನೀಡಿದರು’ ಎಂದು ಹೇಳಿದರು.

‘30 ವರ್ಷಗಳಲ್ಲಿ 174 ಬಾರಿ ನಾನು ರಕ್ತದಾನ ಮಾಡಿದ್ದರೂ ಮರಳಿ ಒಬ್ಬರೂ ಧನ್ಯವಾದ ಹೇಳಿಲ್ಲ. ಆದರೆ, ನಾವು ಆರೋಗ್ಯವಂತರಾಗಿದ್ದರೆ ಮಾತ್ರ ರಕ್ತದಾನ ಮಾಡಲು ಸಾಧ್ಯ. ನನ್ನ ಆರೋಗ್ಯವೇ ನನಗೆ ನಿಜವಾದ ಸರ್ಟಿಫಿಕೇಟ್. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಹೃದಯಾಘಾತ, ಪಾರ್ಶ್ವವಾಯು ಸಂಭವಿಸುವ ಅಪಾಯ ಶೇ 75ರಷ್ಟು ಕಡಿಮೆ’ ಎನ್ನುತ್ತಾರೆ ಚಂದ್ರಕಾಂತ ಆಚಾರ್ಯ.

‘ಎಲ್ಲರನ್ನೂ ಕಾಯಿಸುವುದು ಅನವಶ್ಯಕ’
‘ಪ್ಲೇಟ್ಲೆಟ್‌ಗಳನ್ನು ಸಂಗ್ರಹಿಸುವಾಗ ಸಮಯ ಹಿಡಿಯುತ್ತದೆ. ಪ್ಲೇಟ್ಲೆಟ್‌ ಸಂಗ್ರಹಿಸುವ ಒಂದು ಕಿಟ್‌ಗೆ ₹7 ಸಾವಿರ ಖರ್ಚಾಗುತ್ತದೆ. ರಕ್ತ ನೀಡಿದ ಯಾವುದೇ ವ್ಯಕ್ತಿಗೆ ಎಚ್‌ಐವಿ ಅಥವಾ ಹೆಪಟೈಟಿಸ್‌ ಇದ್ದರೆ ಆ ಕಿಟ್‌ ವ್ಯರ್ಥ. ಹೀಗಾಗಿ, ಕೆಲವರು ಪರೀಕ್ಷೆ ನಂತರವೇ ರಕ್ತ ಸಂಗ್ರಹಿಸುತ್ತಾರೆ’ ಎಂದು ಬೆಂಗಳೂರು ಮಣಿಪಾಲ ಆಸ್ಪತ್ರೆಯ ರಕ್ತನಿಧಿ ಮುಖ್ಯಸ್ಥ ಡಾ.ಸಿ. ಶಿವರಾಮ್ ತಿಳಿಸಿದರು.

‘ನೂರಾರು ದಾನಿಗಳಲ್ಲಿ ಒಬ್ಬರಿಗೋ ಇಬ್ಬರಿಗೋ ಎಚ್‌ಐವಿ ಇರಬಹುದು. ಹಾಗೆಂದು ಎಲ್ಲರಿಗೂ ಪರೀಕ್ಷೆ ಮಾಡಬೇಕಾಗಿಲ್ಲ. ಮೊದಲು ಎಲ್ಲರಿಂದ ರಕ್ತಸಂಗ್ರಹಿಸಬೇಕು. ಎಚ್‌ಐವಿ, ಹೆಪಟೈಟಿಸ್‌ ಇದ್ದವರನ್ನು ಮಾತ್ರ ಕರೆದು, ಮುಂದೆ ರಕ್ತದಾನ ಮಾಡಬೇಡಿ ಎಂದು ಹೇಳಿ ಕಳುಹಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಪ್ಲೇಟ್ಲೆಟ್‌ಗಳನ್ನು ಸಂಗ್ರಹಿಸುವಾಗ ಸಮಯ ಹಿಡಿಯುತ್ತದೆ. ಪ್ಲೇಟ್ಲೆಟ್‌ ಸಂಗ್ರಹಿಸುವ ಒಂದು ಕಿಟ್‌ಗೆ ₹7 ಸಾವಿರ ಖರ್ಚಾಗುತ್ತದೆ. ರಕ್ತ ನೀಡಿದ ಯಾವುದೇ ವ್ಯಕ್ತಿಗೆ ಎಚ್‌ಐವಿ ಅಥವಾ ಹೆಪಟೈಟಿಸ್‌ ಇದ್ದರೆ ಆ ಕಿಟ್‌ ವ್ಯರ್ಥ. ಹೀಗಾಗಿ, ಕೆಲವರು ಪರೀಕ್ಷೆ ನಂತರವೇ ರಕ್ತ ಸಂಗ್ರಹಿಸುತ್ತಾರೆ’ ಎಂದು ಬೆಂಗಳೂರು ಮಣಿಪಾಲ ಆಸ್ಪತ್ರೆಯ ರಕ್ತನಿಧಿ ಮುಖ್ಯಸ್ಥ ಡಾ.ಸಿ. ಶಿವರಾಮ್ ತಿಳಿಸಿದರು.

‘ನೂರಾರು ದಾನಿಗಳಲ್ಲಿ ಒಬ್ಬರಿಗೋ ಇಬ್ಬರಿಗೋ ಎಚ್‌ಐವಿ ಇರಬಹುದು. ಹಾಗೆಂದು ಎಲ್ಲರಿಗೂ ಪರೀಕ್ಷೆ ಮಾಡಬೇಕಾಗಿಲ್ಲ. ಮೊದಲು ಎಲ್ಲರಿಂದ ರಕ್ತಸಂಗ್ರಹಿಸಬೇಕು. ಎಚ್‌ಐವಿ, ಹೆಪಟೈಟಿಸ್‌ ಇದ್ದವರನ್ನು ಮಾತ್ರ ಕರೆದು, ಮುಂದೆ ರಕ್ತದಾನ ಮಾಡಬೇಡಿ ಎಂದು ಹೇಳಿ ಕಳುಹಿಸಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.