ADVERTISEMENT

ಬಸವಣ್ಣನವರ ಹೊಸ ಪಠ್ಯ ಬರೆಯಿಸಿ: ಸಿಎಂಗೆ ಸಾಣೇಹಳ್ಳಿ ಶ್ರೀ ಪತ್ರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 17:26 IST
Last Updated 21 ಜೂನ್ 2022, 17:26 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಬೆಂಗಳೂರು: ‘ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಕುರಿತ ಹಿಂದಿನ ಎಲ್ಲ ಸಮಿತಿಗಳ ಪಠ್ಯವನ್ನು ಕೈಬಿಟ್ಟು ಹೊಸದಾಗಿ ಬರೆಸಿ ವಿದ್ಯಾರ್ಥಿಗಳಿಗೆ ಕೊಡುವುದು ಉತ್ತಮ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ‘ಈ ನೆಲೆಯಲ್ಲೇ ಎರಡು ಪಠ್ಯಗಳನ್ನು ಕಳುಹಿಸಿದ್ದು, ಅವುಗಳನ್ನು ಗಮನಿಸಿ ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಶಾಲೆ ಆರಂಭವಾಗಿ ತಿಂಗಳಾದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳೇ ದೊರೆಯುತ್ತಿಲ್ಲ’ ಎಂದಿದ್ದಾರೆ.

ಪತ್ರದಲ್ಲಿ ಏನಿದೆ: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿಯವರು ಹೊರತಂದಿರುವ 9ನೇ ತರಗತಿಯ ‘ಸಮಾಜ ವಿಜ್ಞಾನ ಭಾಗ 1’ ಪಠ್ಯದಲ್ಲಿ ಬಸವಣ್ಣನವರ ಬಗೆಗಿನ ಪಾಠದಲ್ಲಿ ಸಾಕಷ್ಟು ದೋಷಗಳಿವೆ. ಇವರಿಗಿಂತ ಹಿಂದೆ ಪ್ರೊ. ಬರಗೂರು ರಾಮಚಂದ್ರಪ್ಪನವರು ಮತ್ತು ಪ್ರೊ. ಜಿ.ಎಸ್. ಮುಡಂಬಡಿತ್ತಾಯ ಅವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದರು. ಮುಡಂಬಡಿತ್ತಾಯ ಅವರ ಅಧ್ಯಕ್ಷತೆಯ ಪಠ್ಯ ರಚನಾ ಸಮಿತಿಯವರು ಬಸವೇಶ್ವರ ಎನ್ನುವ ಪಾಠದಲ್ಲಿ ಇತಿಹಾಸಕ್ಕೆ ಪೂರಕವಲ್ಲದ ಬಸವ ತತ್ವಕ್ಕೆ ಅಪಚಾರ ಮಾಡುವ ವಿಷಯಗಳನ್ನೇ ಸೇರಿಸಿದ್ದರು. ಬರಗೂರು ರಾಮಚಂದ್ರಪ್ಪನವರ ಸಮಿತಿಯವರು ಈ ಪಠ್ಯದಲ್ಲಿ ಸಾಕಷ್ಟು ಪರಿಷ್ಕಾರ ಮಾಡಿದ್ದರು. ಅವರ ಪಠ್ಯದಲ್ಲೂ ‘ವೀರಶೈವ ಸಿದ್ಧಾಂತವನ್ನು ಪ್ರಚುರಪಡಿಸಿದರು’; ‘ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು’ ಎನ್ನುವ ದೋಷಗಳಿವೆ. ಆದುದರಿಂದ ಹಿಂದಿನ ಪಠ್ಯಗಳನ್ನು ಬಿಟ್ಟು ಹೊಸದಾಗಿ ಬರೆಸಿ ವಿದ್ಯಾರ್ಥಿಗಳಿಗೆ ಕೊಡುವುದು ಉತ್ತಮ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.