ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೃದಯ ಕಲ್ಲಾಗಿದೆ: ದೇವನೂರ ಮಹಾದೇವ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 20:23 IST
Last Updated 13 ಮಾರ್ಚ್ 2022, 20:23 IST
ದೇವನೂರ ಮಹಾದೇವ
ದೇವನೂರ ಮಹಾದೇವ   

ಮೈಸೂರು: ‘ಬಸವರಾಜ ಬೊಮ್ಮಾಯಿ ಅವರು ಹೃದಯವಂತರು, ಮೃದು ವ್ಯಕ್ತಿತ್ವವುಳ್ಳವರು. ಆದರೆ, ಮುಖ್ಯಮಂತ್ರಿ ಆದ ಮೇಲೆ ಅವರ ಹೃದಯ ಕಲ್ಲಿನಷ್ಟೇ ಕಠಿಣವಾಗಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಟೀಕಿಸಿದರು.

‘ರಾಜ್ಯ ಸರ್ಕಾರ 3 ಕೃಷಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ಜನಾಂದೋಲನ ಮಹಾಮೈತ್ರಿ ಹಮ್ಮಿಕೊಂಡಿರುವ ಜನಜಾಗೃತಿ ಜಾಥಾದಲ್ಲಿ ಅವರು ಭಾನುವಾರ ಮಾತನಾಡಿದರು.

‘ಬಸವರಾಜ ಬೊಮ್ಮಾಯಿ ಅವರಲ್ಲಿ ಆದ ಪರಿವರ್ತನೆ ಅತ್ಯಂತ ಕೆಟ್ಟದ್ದು. ಕೇಂದ್ರ ಕಾನೂನು ತಂದಂತೆ ಇಲ್ಲೂ ತಂದಿದ್ದಾರೆ. ಈ ಕಾನೂನುಗಳನ್ನು ತರಲು ₹ 50 ಸಾವಿರ ಕೋಟಿವರೆಗೆ ಅವ್ಯವಹಾರ ನಡೆದಿದೆ ಎಂಬ ಸುದ್ದಿ ಇದೆ. ಈ ಕುರಿತು ಸಿ.ಎಂ ಪರಿಶೀಲಿಸಬೇಕು. ಅವರಲ್ಲಿ ಮನುಷ್ಯತ್ವ ಇದ್ದರೆ ಈ ಕಾನೂನುಗಳನ್ನು ಈಗಲಾದರೂ ವಾಪಸು ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳಲು ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಹಲವರು ಮೃತರಾದಾಗ ಮೇಘಾಲಯ ರಾಜ್ಯಪಾಲರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಕುರಿತು ಗಮನಹರಿಸಲು ಕೋರಿದರು. ಆಗ ಮೋದಿ, ‘ಅವರು ನಮಗಾಗಿ ಸತ್ತರೇ’ ಎಂದು ಪ್ರಶ್ನಿಸಿದರು. ಇದು ನಿಜಕ್ಕೂ ನಿರ್ದಯ ಹಾಗೂ ಕಠೋರವಾದದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತನ್ನ ಪ್ರಜೆಗಳನ್ನು ತನ್ನ ಮಕ್ಕಳು ಎಂದು ಹೇಳಿಕೊಳ್ಳಲಾಗದವರಿಗೆ ಈ ದೇಶದ ಪ್ರಧಾನಿಯಾಗಲು ಯೋಗ್ಯತೆ ಇದೆಯೇ’ ಎಂದು ಪ್ರಶ್ನಿಸಿದ ಅವರು, ‘ಅವರ ಹೃದಯದಲ್ಲಿ ಹೃದಯ ಇಲ್ಲ ಕೇವಲ ಕಲ್ಲಿದೆ ಅನಿಸುತ್ತೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದಲ್ಲೂ ಆಳ್ವಿಕೆ ಮಾಡುತ್ತಿರುವವರು ತಾವು ಮೋದಿ ತುಂಡು ಎಂದು ಭಾವಿಸಿ ಅವರಂತೆ ನಿರ್ದಯೆಯಿಂದ ನಡೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.