ADVERTISEMENT

ನಾಡಗೀತೆ: ಸಮಯ, ಧಾಟಿ ನಿಗದಿಗೆ ವೈ.ಕೆ. ಮುದ್ದುಕೃಷ್ಣ ಆಗ್ರಹ

ಪರಿಷ್ಕರಿಸಿ ಸಿ.ಡಿ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಕೆ; ವೈ.ಕೆ. ಮುದ್ದುಕೃಷ್ಣ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 21:51 IST
Last Updated 8 ಸೆಪ್ಟೆಂಬರ್ 2021, 21:51 IST
ವೈ.ಕೆ. ಮುದ್ದುಕೃಷ್ಣ
ವೈ.ಕೆ. ಮುದ್ದುಕೃಷ್ಣ   

ಬೆಂಗಳೂರು: ‘ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ...’ ಹಾಡುವ ಅವಧಿಯನ್ನು 2 ನಿಮಿಷ 20 ಸೆಕೆಂಡಿಗೆ ಹಾಡಲು ಅನುಕೂಲವಾಗುವಂತೆ ಪರಿಷ್ಕರಿಸಿ, ಸಿ.ಡಿ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರವು ಈಗಲಾದರೂ ಧಾಟಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಬೇಕು’ ಎಂದುಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷವೈ.ಕೆ. ಮುದ್ದುಕೃಷ್ಣ ಆಗ್ರಹಿಸಿದ್ದಾರೆ.

‘ನಾಡಗೀತೆಯ ಧಾಟಿಗೆ ಸಂಬಂಧಿಸಿದಂತೆ 17 ವರ್ಷಗಳಿಂದ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಚನ್ನವೀರ ಕಣವಿ ಅಧ್ಯಕ್ಷತೆಯ ಸಮಿತಿ 2014ರಲ್ಲಿಯೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿತ್ತು. ನಾನು ಕೂಡ ಆ ಸಮಿತಿಯ ಸದಸ್ಯನಾಗಿದ್ದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಕೋರಿಕೆ ಮೇರೆಗೆ ನಾಡಗೀತೆಯ ಪೂರ್ಣ ಪಠ್ಯಕ್ಕೆ ಲಭ್ಯವಿರುವ ಸಂಯೋಜನೆಯನ್ನು ಪರಿಷ್ಕರಿಸಿ, ಇಡೀ ಗೀತೆಯನ್ನು 2 ನಿಮಿಷ 20 ಸೆಕೆಂಡ್‌ಗಳಲ್ಲಿ ಹಾಡುವಂತೆ ಸಿದ್ಧಪಡಿಸಿಕೊಡಲಾಗಿತ್ತು.ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕಲಾವಿದರ ದತ್ತಾಂಶ ಬ್ಯಾಂಕ್ ಬಗ್ಗೆ ಯೋಜನೆ ರೂಪಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಮುಂದಾಗಿರುವುದು ಸ್ವಾಗತಾರ್ಹ. ಆದರೆ, 90ರ ದಶಕದಲ್ಲಿ ಇಲಾಖೆಯ ನಿರ್ದೇಶಕನಾಗಿದ್ದಾಗ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿನ ಸಾಹಿತಿಗಳ ಹಾಗೂ ವಿವಿಧ ಕಲಾ
ಪ್ರಕಾರಗಳ ಕಲಾವಿದರ ಮಾಹಿತಿಗಳನ್ನು ಸಂಗ್ರಹಿಸಿ, ಇಲಾಖೆಯಲ್ಲಿ ದಾಖಲು ಮಾಡಿಸಿದ್ದೆ.ಕನ್ನಡಭವನ ನಿರ್ಮಾಣದ ನಂತರ ಅಲ್ಲಿಗೆ ಬರುವ ಕಲಾಸಕ್ತರ ಅನುಕೂಲಕ್ಕಾಗಿ ದೃಶ್ಯ ವಿಭಾಗ ತೆರೆದು, ಪರದೆ ಮತ್ತು ಪ್ರೊಜೆಕ್ಟರ್ ಮೂಲಕ ಸಂಸ್ಕೃತಿಗೆ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮಗಳು ಮತ್ತು ಉತ್ಸವಗಳ ಚಿತ್ರಗಳನ್ನು ಹಾಗೂ ಕಿರು ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಆ ವಿಭಾಗವನ್ನುಮುಚ್ಚಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಧ್ವನಿ ವಿಭಾಗ ಸ್ಥಗಿತ: ‘ಸಂಗೀತ ಪ್ರಕಾರಗಳ ಒಂದು ಸಾವಿರ ಧ್ವನಿ ಸುರುಳಿಗಳನ್ನು ಸಂಗ್ರಹಿಸಿ, ಸಾರ್ವಜನಿಕರಿಗೆ ಕೇಳಲು ವ್ಯವಸ್ಥೆ ಮಾಡಲಾಗಿತ್ತು.ಈ ವಿಭಾಗವೂ ಈಗ ಮುಚ್ಚಿದೆ. ‘ವ್ಯಕ್ತಿ ಶ್ರೀ’ ಮತ್ತು ‘ಕಲಾಶ್ರೀ’ ಶೀರ್ಷಿಕೆಗಳಡಿ ನಾಡಿನ ವಿವಿಧ ಕಲಾಪ್ರಕಾರಗಳ ಅಪರೂಪದ ಕಲಾವಿದರು ಮತ್ತು ಕಲಾಪ್ರಕಾರಗಳಿಗೆ ಸಂಬಂಧಿಸಿದ 5ರಿಂದ 8 ನಿಮಿಷಗಳ ಸಾಕ್ಷ್ಯಚಿತ್ರಗಳನ್ನು ಮಾಹಿತಿ ಕೇಂದ್ರದಲ್ಲಿ ವೀಕ್ಷಣೆಗೆ ಇಡಲಾಗಿತ್ತು. ಎಲ್ಲ ವಿಭಾಗಗಳನ್ನೂ ಮುಚ್ಚಿ, ಕಚೇರಿಯಾಗಿ ಪರಿವರ್ತಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.