ಚಪ್ಪಲಿ
ಶಹಾಪುರ (ಯಾದಗಿರಿ ಜಿಲ್ಲೆ): ಗ್ರಾಮಸಭೆಗೆ ತೆರಳುತ್ತಿದ್ದ ಪಿಡಿಒ ಮೇಲೆ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಇನ್ನೊಬ್ಬರು ಸೇರಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ, ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಶನಿವಾರ ತಾಲ್ಲೂಕಿನ ದೋರನಹಳ್ಳಿಯಲ್ಲಿ ಆರೋಪಿಸಲಾಗಿದೆ.
ದೋರನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ದೇವರಾಜ ರಂಗಪ್ಪ ಚಲವಾದಿ ಹಲ್ಲೆಗೆ ಒಳಗಾದವರು. ಸದಸ್ಯೆ ತಾಯಮ್ಮ ಶ್ರೀಕಾಂತ ತೆಗನೂರ ಹಾಗೂ ಆಕೆಯ ತಮ್ಮ ಮಂಜುನಾಥ ಬಸಪ್ಪ ಅನ್ವರ ಹಲ್ಲೆ ಮಾಡಿದವರು.
ಮನೆ ಹಂಚಿಕೆ ಬಗ್ಗೆ ಗ್ರಾಮಸಭೆ ಇರುವ ಕಾರಣ ಶನಿವಾರ ಪಿಡಿಒ ಹಾಗೂ ಪಂಪ್ ಅಪರೇಟರ್ ಭೀಮರಾಯ ಕಂಬಾರ ಅವರೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಅದೇ ಸಮಯಕ್ಕೆ ಸದಸ್ಯೆ ತಾಯಮ್ಮ ಹಾಗೂ ಮಂಜುನಾಥ ಬಂದಿದ್ದಾರೆ. ತಾಯಮ್ಮ ಕಣ್ಣಿಗೆ ಖಾರದ ಪುಡಿ ಎರಚಿ, ಚಪ್ಪಲಿ ತೆಗೆದುಕೊಂಡು ಮುಖಕ್ಕೆ ಬೆನ್ನಿಗೆ ಹೊಡೆದು ಗಾಯಗೊಳಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪಿಡಿಒ ದೂರಿನಲ್ಲಿ ತಿಳಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಪಿಡಿಒ ದೇವರಾಜ ಹಾಗೂ ಇತರ ಏಳು ಜನ ಸೇರಿಕೊಂಡು ತಮಗೆ ಜಾತಿನಿಂದನೆ ಹಾಗೂ ಅಪಮಾನ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ತಾಯಮ್ಮ ತೆಗನೂರ ಶಹಾಪುರ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ. ಅಧ್ಯಕ್ಷೆ ಚಂದ್ರಾವತಿ ದೊರೆ, ಉಪಾಧ್ಯಕ್ಷ ಈರಣ್ಣ ಕಸನ್, ಆರಿಫ್ ಮಠ, ಮಹಾಂತಗೌಡ ನಂದಿಕೋಲ, ವಿಜಯಕುಮಾರ ಮಲಗೊಂಡ, ಸಿದ್ದಣ್ಣ ದೇಸಾಯಿ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.