ಶಿವಮೊಗ್ಗ: ಕರ್ನಾಟಕ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾದ ನಂತರ ಇದೇ ಮೊದಲ ಬಾರಿಗೆ ನೀಡಿದ 2017ನೇ ಸಾಲಿನ ಪ್ರತಿಷ್ಠಿತ 'ಪಾರ್ತಿಸುಬ್ಬ ಪ್ರಶಸ್ತಿ'ಗೆ ಬಲಿಪ ನಾರಾಯಣ ಭಾಗವತರು ಭಾಜನರಾದರು.
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರೊಂದಿಗೆ ಯಕ್ಷಗಾನ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಶಂಕರ ಭಾಗವತ, ಬರೆ ಕೇಶವ ಭಟ್, ಎಚ್. ಶ್ರೀಧರ ಹಂದೆ ಕೋಟ, ಎ.ಎಂ. ಶಿವಶಂಕರಯ್ಯ, ಕರಿಯಣ್ಣ ಅವರಿಗೆ 'ಗೌರವ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
'ಯಕ್ಷಸಿರಿ ವಾರ್ಷಿಕ ಪ್ರಶಸ್ತಿ'ಗೆ ಗಣನೀಯ ಸೇವೆ ಸಲ್ಲಿಸಿದ ಗಜಾನನ ಭಟ್ಟ ಹೊಸ್ತೋಟ, ಮೋಹನ್ ಶೆಟ್ಟಿಗಾರ್, ಪೂಕಳ ಲಕ್ಷ್ಮೀನಾರಾಯಣ ಭಟ್, ಜಮದಗ್ನಿ ಶೀನ ನಾಯ್ಕ, ಜಂಬೂರು ರಾಮಚಂದ್ರ ಶಾನುಭಾಗ್, ಮಹಾದೇವ ಈಶ್ವರ ಹೆಗಡೆ, ಎ.ಎಸ್.ಲಕ್ಷ್ಮಣಯ್ಯ, ವಿದ್ವಾನ್ ಹರಿದಾಸ ನೀವಣೆ ಗಣೇಶಭಟ್ಟ, ಎಲ್.ಶಂಕರಪ್ಪ, ಟಿ.ಎಸ್.ರವೀಂದ್ರ ಭಾಜನರಾದರು.
ಬಲಿಪ ನಾರಾಯಣ ಭಾಗವತರು ಹಾಗೂ ಡಾ.ಜಿ.ಎಸ್.ಭಟ್ಟ ಅವರಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಕೆ.ಎಸ್. ಈಶ್ವರಪ್ಪ, ‘ಯಕ್ಷಗಾನ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಕಲೆ ಉಳಿವು ಮತ್ತು ಬೆಳವಣಿಗೆಗೆ ಅಕಾಡೆಮಿಯ ಜತೆಗೆ ಕೈ ಜೋಡಿಸಲಿದ್ದೇನೆ. ಅಕಾಡೆಮಿಗೆ ಹೆಚ್ಚಿನ ಹಣ ದೊರಕಿಸಿಕೊಡಲು ಅಕಾಡೆಮಿಯ ಸದಸ್ಯರೊಂದಿಗೆ ಮುಖ್ಯಮಂತ್ರಿ ಬಳಿಗೆ ಹೋಗಲು ಸಿದ್ಧ’ ಎಂದರು.
ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಅಕಾಡೆಮಿ ಸದಸ್ಯ ಸಂಚಾಲಕ ಲಕ್ಷ್ಮೀನಾರಾಯಣ ಕಾಶಿ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.