ADVERTISEMENT

ಯೋಗೇಶ್ವರ್ ಮಂಡ್ಯದಿಂದ ಗೆದ್ದಿದ್ದಾರಾ? ಜಿಲ್ಲಾ ಉಸ್ತುವಾರಿ ನಾನೇ: ನಾರಾಯಣ ಗೌಡ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:39 IST
Last Updated 25 ಜನವರಿ 2021, 19:39 IST
ಕೆ.ಸಿ. ನಾರಾಯಣಗೌಡ
ಕೆ.ಸಿ. ನಾರಾಯಣಗೌಡ   

ಬೆಂಗಳೂರು: ‘ಮಂಡ್ಯದಿಂದ ಗೆದ್ದು ಬಂದಿರುವುದು ನಾನು. ಮಂಡ್ಯ ಜಿಲ್ಲಾ ಉಸ್ತುವಾರಿ ನಾನೇ. ಯಾವುದೇ ಕಾರಣಕ್ಕೂ ಉಸ್ತುವಾರಿ ಬದಲಾಯಿಸುವುದಿಲ್ಲ. ಮುಖ್ಯಮಂತ್ರಿ ಕೂಡ ಜಿಲ್ಲಾ ಉಸ್ತುವಾರಿ ಬದಲಾಯಿಸಿ, ಬೇರೆ ಯಾರಿಗೂ ನೀಡುವುದಿಲ್ಲ’ ಎಂದು ಯುವಜನ ಸೇವೆ, ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಹೇಳಿದರು.

ಮಂಡ್ಯ ಉಸ್ತುವಾರಿಯನ್ನು ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ನೀಡುವ ಸಾಧ್ಯತೆ ಇದೆಯೆಂಬ ವದಂತಿಗೆ ಪ್ರತಿಕ್ರಿಯಿಸಿದ ಅವರು, ‘ಅವರೇನು ಮಂಡ್ಯದಿಂದ ಗೆದ್ದು ಬಂದಿದ್ದಾರಾ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಮಂಡ್ಯಕ್ಕೆ ನನ್ನ ಹಾಗೂ ಮುಖ್ಯಮಂತ್ರಿಯ ಅನುಮತಿ ಇಲ್ಲದೆ ಉಸ್ತುವಾರಿಯಾಗಿ ಯೋಗೇಶ್ವರ್ ಹೇಗೆ ಬರುತ್ತಾರೆ. ಯೋಗೇಶ್ವರ್ ಬೇಕಿದ್ದರೆ ಮಂಡ್ಯಕ್ಕೆ ಬರಲಿ, ಒಳ್ಳೆಯ ಊಟ ಮಾಡಿಕೊಂಡು ಹೋಗಲಿ. ಅವರ ಇಲಾಖೆಗೆ ಸಂಬಂಧಿಸಿದಂತೆ ಕೆಲಸ ಇದ್ದರೆ ಅದನ್ನು ಮಾಡಿಕೊಂಡು ಹೋಗಲಿ. ಆದರೆ, ಅವರಿಗೆಲ್ಲ ಮಂಡ್ಯ ಉಸ್ತುವಾರಿ ಕೊಡುವ ಮಾತೇ ಇಲ್ಲ’ ಎಂದು ಖಡಕ್ ಆಗಿ ಹೇಳಿದರು.

ADVERTISEMENT

ಒಗ್ಗಟ್ಟಾಗಿದ್ದೇವೆ: ‘ನಮ್ಮ ಮಧ್ಯೆ (ಬಿಜೆಪಿ ಸೇರಿದ ಶಾಸಕರ ಗುಂಪು) ಯಾವುದೇ ಬಿರುಕು, ಅಸಮಾಧಾನ ಇಲ್ಲ. ಬೇಕಿದ್ದರೆ ನಮ್ಮ ತಂಡದ ಎಲ್ಲ 17 ಮಂದಿಯೂ ಶೀಘ್ರದಲ್ಲೇ ನನ್ನ ನೇತೃತ್ವದಲ್ಲೇ ಹೋಟೆಲ್‌ನಲ್ಲಿ ಸಭೆ ಸೇರುತ್ತೇವೆ. ಆ ಮೂಲಕ, ಒಗ್ಗಟ್ಟು ಇದೆ ಎಂಬುದನ್ನು ತೋರಿಸುತ್ತೇವೆ’ ಎಂದರು.

‘ಎಚ್. ವಿಶ್ವನಾಥ್ ಒಬ್ಬಂಟಿ ಅಲ್ಲ. ಕೋರ್ಟ್ ಪ್ರಕರಣದ ಕಾರಣಕ್ಕೆ ಅವರು ಮಂತ್ರಿ ಆಗಿಲ್ಲ. ಆ ಪ್ರಕರಣ ಬಗೆಹರಿದ ಬಳಿಕ ಅವರು ಕೂಡಾ ಮಂತ್ರಿ ಆಗುತ್ತಾರೆ. ನಾವೆಲ್ಲರೂ ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದಿದ್ದೇವೆ. ಒಟ್ಟಾಗಿಯೇ ಇದ್ದೇವೆ’ ಎಂದು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.