ADVERTISEMENT

ಫ್ರಾಂಕ್‌ಫರ್ಟ್‌ | ಕರ್ನಾಟಕ ಬಿಸಿನೆಸ್ ಡೇ: ಇಂಡೋ-ಜರ್ಮನ್ ಬಾಂಧವ್ಯಕ್ಕೆ ಹೊಸ ಆಯಾಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 6:14 IST
Last Updated 3 ಸೆಪ್ಟೆಂಬರ್ 2025, 6:14 IST
<div class="paragraphs"><p>ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು</p></div>

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು

   

ಫ್ರಾಂಕ್‌ಫರ್ಟ್ (ಜರ್ಮನಿ): ಕರ್ನಾಟಕ ಮತ್ತು ಜರ್ಮನಿ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ರೈನ್ ಮೇನ್ ಕನ್ನಡ ಸಂಘದ ಸಹಯೋಗದೊಂದಿಗೆ ಫ್ರಾಂಕ್‌ಫರ್ಟ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯ ನೇತೃತ್ವದಲ್ಲಿ ‘ಕರ್ನಾಟಕ ಬಿಸಿನೆಸ್ ಡೇ 2025’ ಎಂಬ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಫ್ರಾಂಕ್‌ಫರ್ಟ್‌ನಲ್ಲಿರುವ ಸಾಲ್‌ಬಾಸ್ ಝೆಂಟ್ರಮ್ ಆಮ್ ಬ್ಯೂಗೆಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಂಡೋ-ಜರ್ಮನ್ ಸಹಭಾಗಿತ್ವದಲ್ಲಿ ಆಸಕ್ತಿ ಹೊಂದಿರುವ ಅನೇಕ ಉದ್ಯಮಿಗಳು, ವೃತ್ತಿಪರರು ಪಾಲ್ಗೊಂಡಿದ್ದರು. ಅನೇಕ ಕಂಪನಿಗಳನ್ನು ಭಾಗವಹಿಸಿದ್ದವು. ಇದು ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಹೆಚ್ಚಿಸುವ ವೇದಿಕೆಯಾಯಿತು.

ADVERTISEMENT

ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಮುದಾಯದ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದ ರೈನ್ ಮೇನ್ ಕನ್ನಡ ಸಂಘವು ಈ ಬಾರಿ ಹೊಸ ಮತ್ತು ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸಿತು. ಇದು ಕೇವಲ ಕನ್ನಡ ಸಂಸ್ಕೃತಿಯನ್ನು ಮಾತ್ರವಲ್ಲದೆ, ರಾಜ್ಯದ ಆರ್ಥಿಕ ಪ್ರಗತಿಯನ್ನೂ ಸಹ ಬೆಂಬಲಿಸುವ ತನ್ನ ಬದ್ಧತೆಯನ್ನು ಪ್ರದರ್ಶಿಸಿತು. ಫ್ರಾಂಕ್‌ಫರ್ಟ್‌ನ ಭಾರತದ ಕಾನ್ಸುಲೇಟ್ ಜನರಲ್‌ ಬೆಂಬಲದೊಂದಿಗೆ ಅನೇಕರಿಗೆ ಹೊಸ ದೃಷ್ಟಿಕೋನ ನೀಡಿದ ಈ ಕಾರ್ಯಕ್ರಮವನ್ನು ಅತ್ಯಂತ ಸೂಕ್ಷ್ಮವಾಗಿ ಯೋಜಿಸಿ, ಯಶಸ್ವಿಯಾಗಿ ನಡೆಸಿತು.

ಕಾರ್ಯಕ್ರಮವು ನಾಡಗೀತೆಯ ಗಾಯನ ಮತ್ತು ಭರತನಾಟ್ಯ ನೃತ್ಯದೊಂದಿಗೆ ಪ್ರಾರಂಭವಾಯಿತು. ಕರ್ನಾಟಕ ಸರ್ಕಾರದ ಸಚಿವರಾದ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಮತ್ತು ಡಾ. ಸುಧಾಕರ ಮಾಲಪಲ್ಲಿ ಚೌಡಾ ರೆಡ್ಡಿ, ಭಾರತದ ಕಾನ್ಸುಲ್ ಜನರಲ್ ಬಿ. ಎಸ್. ಮುಬಾರಕ್, ಡಾ. ದಿನೇಶ್ ಕುಮಾರ್, ವೇದ ಕುಮಾರಸ್ವಾಮಿ, ರಿಯಾಜ್ ಶಿರ್ಸಂಗಿ ಮತ್ತು ವಿಶ್ವನಾಥ್ ಬಾಲೇಕಾಯಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಾರತದ ಕಾನ್ಸುಲ್ ಜನರಲ್ ಬಿ. ಎಸ್. ಮುಬಾರಕ್ ಅವರು ಸ್ವಾಗತ ಭಾಷಣ ಮಾಡಿದರು. ಕರ್ನಾಟಕದ ಸಚಿವರಾದ ಡಾ. ಸುಧಾಕರ ಮಾಲಪಲ್ಲಿ ಚೌಡಾ ರೆಡ್ಡಿ ಮತ್ತು ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಕರ್ನಾಟಕ ಮತ್ತು ಜರ್ಮನಿ ನಡುವಿನ ಸಹಯೋಗ ಹಾಗೂ ಆವಿಷ್ಕಾರವನ್ನು ಪ್ರೋತ್ಸಾಹಿಸುವ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು.

‘ಕರ್ನಾಟಕ-ಜರ್ಮನಿ ವ್ಯಾಪಾರ ಸಮನ್ವಯವನ್ನು ಉತ್ತೇಜಿಸುವುದು, ತಂತ್ರಜ್ಞಾನ ಮತ್ತು ಕೈಗಾರಿಕಾ ಸಹಯೋಗವನ್ನು ಬಲಪಡಿಸುವುದು’ ಎಂಬ ಶೀರ್ಷಿಕೆಯಡಿ ಮೊದಲ ಚರ್ಚೆಯನ್ನು ಎನ್‌ಆರ್‌ಡಬ್ಲ್ಯೂ-ಗ್ಲೋಬಲ್ ಬಿಸಿನೆಸ್ ಇಂಡಿಯಾದ ಮುಖ್ಯ ಪ್ರತಿನಿಧಿ ಶ್ರೀಮತಿ ಅಂಬಿಕಾ ಬನೋತ್ರಾ ಅವರು ನಡೆಸಿಕೊಟ್ಟರು.

ಈ ಚರ್ಚೆಯಲ್ಲಿ ತಜ್ಞರಾದ ಅಕ್ಷಯ್ ರಾವ್, ಡಾ. ಉಮೇಶ್, ಫೆಲಿಕ್ಸ್ ವೀಗ್, ಮಿಥುನ್ ಕುಮಾರ್ ಮತ್ತು ಸ್ಟೆಫನಿ ಬೀರೇಸ್ ಭಾಗವಹಿಸಿದ್ದರು. ಡಿಜಿಟಲ್ ಹಬ್‌ಗಳಿಗಾಗಿ ಟೆಕ್ ಕಂಪನಿಗಳು ಕರ್ನಾಟಕವನ್ನು ಏಕೆ ಆಯ್ಕೆ ಮಾಡುತ್ತಿವೆ, ಹಸಿರು ಹೂಡಿಕೆಗಳು ಮತ್ತು ಸ್ಮಾರ್ಟ್ ಉತ್ಪಾದನೆಯ ಹೆಚ್ಚಳ, ಮತ್ತು ಮುಂದಿನ ದಶಕವನ್ನು ರೂಪಿಸುವಲ್ಲಿ ಇಂಡೋ-ಜರ್ಮನ್ ಆವಿಷ್ಕಾರದ ಪಾತ್ರಗಳ ಬಗ್ಗೆ ಚರ್ಚೆಗಳು ನಡೆದವು.

‌‘ಮಾರುಕಟ್ಟೆ ಪ್ರವೇಶ ಮತ್ತು ಅನುಸರಣೆ: ಇಂಡೋ-ಜರ್ಮನ್ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಅರಿತುಕೊಳ್ಳುವುದು’ ಎಂಬ ವಿಷಯದ ಮೇಲೆ ಇನ್ನೊಂದು ಚರ್ಚೆ ಕೇಂದ್ರೀಕೃತವಾಗಿತ್ತು. ಕರ್ನಾಟಕ-ಜರ್ಮನಿ ಸಹಭಾಗಿತ್ವವನ್ನು ಬಲಪಡಿಸುವ ಅವಕಾಶಗಳ ಬಗ್ಗೆ ಕೇಂದ್ರೀಕೃತವಾಗಿದ್ದ ಈ ಚರ್ಚೆಯನ್ನು ಅಲೈಯನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ಕಮ್ಯುನಿಕೇಶನ್ಸ್ ಮತ್ತು ಚೇಂಜ್ ಮ್ಯಾನೇಜ್ಮೆಂಟ್ ವೃತ್ತಿಪರರಾದ ವಿಜಯಾ ಚಿಪ್ಪಡಿ ಅವರು ನಡೆಸಿಕೊಟ್ಟರು.

ನಿರ್ಮಲ್ ರಾಮನ್ ಕೆ. ವಿರಾಜ್ ಬೇಕಲ್, ಸೋಮಗೌಡ ಪಾಟೀಲ್, ಮಹೇಶ್ ಸತ್ಯಮ್ಮನವರ್ ಮತ್ತು ಇಂಗೊ ಸ್ಮಿಟ್ಜ್ ಮುಂತಾದ ತಜ್ಞರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ವ್ಯಾಪಾರ ಮಾಡುವ ಪ್ರಾಯೋಗಿಕ ಅಂಶಗಳು ಮತ್ತು ಜರ್ಮನ್ ಸಹಯೋಗದ ಮೂಲಕ ಭಾರತೀಯ ಸ್ಟಾರ್ಟ್‌ಅಪ್‌ಗಳು ಹೇಗೆ ಯಶಸ್ವಿಯಾಗುತ್ತಿವೆ ಎಂಬುದರ ಕುರಿತು ಅಮೂಲ್ಯವಾದ ಒಳನೋಟಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಯಶಸ್ವಿ ಉದ್ಯಮಿಗಳ ಕಥೆಗಳಿಗೂ ಪ್ರತ್ಯೇಕ ವಿಭಾಗವಿತ್ತು. ಆಗೆಂಕ್ಲಾರ್ ಸಂಸ್ಥಾಪಕ ರಾಹುಲ್ ಲೆಂಗೆಡೆ ಮತ್ತು ಅವರ ಸಹ-ಸಂಸ್ಥಾಪಕ ವಿನ್‌ಫ್ರೀಡ್ ಕಾರ್ಬ್ ತಮ್ಮ ಪ್ರಯಾಣದ ಬಗ್ಗೆ ಮಾಹಿತಿ ಹಂಚಿಕೊಂಡರು. ಸಕ್ಸಿನೋವಾ ಟೆಕ್ನಾಲಜೀಸ್ ಮತ್ತು ನಾವಿನ್ಯಾ ಸೊಲ್ಯೂಷನ್ಸ್‌ನ ಸಹ-ಸಂಸ್ಥಾಪಕ ಮತ್ತು ಮುಖ್ಯ ವ್ಯವಹಾರ ಅಧಿಕಾರಿಯಾಗಿರುವ ಮಹೇಶ್ ಸತ್ಯಮ್ಮನವರ್ ಮತ್ತು ಕರ್ನಾಟಕ ಕಾಯರ್ ಹಾಗೂ ಮತ್ತೊಂದು ಸಾಫ್ಟ್‌ವೇರ್ ಸ್ಟಾರ್ಟ್‌ಅಪ್‌ನ ಸಂಸ್ಥಾಪಕರಾದ ನಿಶ್ಚಲ್ ಅವರು ತಮ್ಮ ಯಶಸ್ಸಿನ ಕಥೆಗಳನ್ನು ಬಿಚ್ಚಿಟ್ಟರು.

ಕರ್ನಾಟಕದಿಂದ ಆಗಮಿಸಿದ್ದ ವ್ಯಾಪಾರ ನಿಯೋಗವು ಜರ್ಮನಿಯ ಪಾಲುದಾರರೊಂದಿಗೆ ಸಂವಹನ ನಡೆಸಿ, ಜರ್ಮನ್ ಕಂಪನಿಗಳು ಮತ್ತು ರಾಜ್ಯದ ನಡುವೆ ಈಗಾಗಲೇ ಇರುವ ಬಲವಾದ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಈಗಾಗಲೇ ಅನೇಕ ಜರ್ಮನ್ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಗ್ಲೋಬಲ್ ಕೇಪಬಿಲಿಟಿ ಸೆಂಟರ್‌ಗಳನ್ನು ಹೊಂದಿದ್ದು, ಈ ಕಾರ್ಯಕ್ರಮವು ಈ ಪ್ರವೃತ್ತಿಗೆ ಮತ್ತಷ್ಟು ಉತ್ತೇಜನ ನೀಡಿತು.

ರೈನ್ ಮೇನ್ ಕನ್ನಡ ಸಂಘವು ಎಲ್ಲಾ ಮುಖ್ಯ ಭಾಷಣಕಾರರು, ಪ್ಯಾನಲಿಸ್ಟ್‌ಗಳು ಮತ್ತು ಯಶಸ್ಸಿನ ಕಥೆಗಳ ಪ್ರಸ್ತುತಕರ್ತರನ್ನು ಸನ್ಮಾನಿಸಿ, ಅವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿತು. ಡಾ. ನವ್ಯ ಗುಬ್ಬಿ ಸತೀಶ್ಚಂದ್ರ ಮತ್ತು ವರುಣ್ ಚಾಯಪತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮವು ಭಾರತದ ಕಾನ್ಸುಲ್ ಜನರಲ್ ಬಿ. ಎಸ್. ಮುಬಾರಕ್ ಅವರ ಸಮಾರೋಪ ಭಾಷಣ, ಆರ್‌ಎಮ್‌ಕೆಎಸ್ ಸದಸ್ಯ ಅಕ್ಷಯ್ ಕಬಾಡಿ ಅವರಿಂದ ವಂದನಾರ್ಪಣೆ ಮತ್ತು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

ಕಾರ್ಯಕ್ರಮದ ನಿರ್ದೇಶಕರಾದ ರಿಯಾಜ್ ಶಿರ್ಸಿಂಗಿ, ಆರ್‌ಎಮ್‌ಕೆಎಸ್ ಅಧ್ಯಕ್ಷರಾದ ವೇದಮೂರ್ತಿ, ಮತ್ತು ಎಲ್ಲಾ ಕೋರ್ ಮತ್ತು ಎಕ್ಸ್‌ಕೋ ಸಮಿತಿ ಹಾಗೂ ಸ್ವಯಂಸೇವಕರ ಸಹಕಾರದಿಂದ ಕಾರ್ಯಕ್ರಮ ಅರ್ಥಪೂರ್ಣಗೊಂಡಿತು.

ವರದಿ:

– ನವ್ಯಾ ಗುಬ್ಬಿ ಸತೀಶ್ಚಂದ್ರ

ಪ್ರಾಧ್ಯಾಪಕರು, ಬರ್ಲಿನ್ ಸ್ಕೂಲ್ ಆಫ್ ಬ್ಯುಸಿನೆಸ್ ಆ್ಯಂಡ್ ಇನ್ನೋವೇಶನ್, ಬರ್ಲಿನ್–ಜರ್ಮನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.