ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶುಕ್ರವಾರ, 8–9–1995

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 14:57 IST
Last Updated 7 ಸೆಪ್ಟೆಂಬರ್ 2020, 14:57 IST
   

ಎನ್‌ಟಿಆರ್‌ ಬೆಂಬಲಿತ 28 ಶಾಸಕರ ಅಮಾನತು

ಹೈದರಾಬಾದ್‌, ಸೆ. 7 (ಪಿಟಿಐ, ಯುಎನ್‌ಐ)– ಆಂಧ್ರಪ್ರದೇಶ ವಿಧಾನಸಭೆಯ ಕಲಾಪಗಳಿಗೆ ಅಡ್ಡಿ ಉಂಟು ಮಾಡಿದ ಆರೋಪದ ಮೇಲೆ, ಪದಚ್ಯುತ ಮುಖ್ಯಮಂತ್ರಿ ಎನ್‌.ಟಿ. ರಾಮರಾವ್‌ ಅವರ ಬೆಂಬಲಿಗರಾದ 28 ಶಾಸಕರನ್ನು ಸ್ವೀಕರ್‌ ವೈ. ರಾಮಕೃಷ್ಣುಡು ಅವರು ಅಮಾನತುಗೊಳಿಸಿದ ನಂತರ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಇಂದು ವಿಶ್ವಾಸಮತ ಪಡೆದರು.

ವಿಧಾನಸಭೆಯ ಒಟ್ಟು 294 ಸದಸ್ಯರ ಪೈಕಿ 227 ಮಂದಿ ನಿರ್ಣಯದ ಪರವಾಗಿ ಮತ ಚಲಾಯಿಸಿದರು. ನಿರ್ಣಯದ ವಿರುದ್ಧವಾಗಿ ಯಾರೊಬ್ಬರೂ ಮತ ಹಾಕಲಿಲ್ಲ. ಒಟ್ಟು 34 ಸದಸ್ಯರನ್ನು ಹೊಂದಿರುವ ಎಡಪಕ್ಷಗಳು ಕೂಡಾ ವಿಶ್ವಾಸಮತದ ಪರವಾಗಿ ಮತ ಚಲಾಯಿಸಿವೆ. ಕಾಂಗ್ರೆಸ್‌ (ಐ), ಬಿಜೆಪಿ, ಎಂಬಿಟಿ ಶಾಸಕರು ಹಾಗೂ ಪಕ್ಷೇತರ ಸದಸ್ಯರೊಬ್ಬರು ತಟಸ್ಥವಾಗಿ ಉಳಿದರು.

ADVERTISEMENT

ಅನಧಿಕೃತ ಕಟ್ಟಡ ಸಕ್ರಮ ಜಂಟಿ ಸಮಿತಿ ಪರಿಶೀಲನೆಗೆ

ಬೆಂಗಳೂರು, ಸೆ. 7– ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ನಗರ ಪ್ರದೇಶಗಳಲ್ಲಿರುವ ಅನಧಿಕೃತ ನಿರ್ಮಾಣಗಳನ್ನು ಸಕ್ರಮ
ಗೊಳಿಸುವ ತಿದ್ದುಪಡಿ ವಿಧೇಯಕವನ್ನು ವಿಧಾನ ಮಂಡಲದ ಜಂಟಿ ಸಲಹಾ ಸಮಿತಿಯ ಪರಿಶೀಲನೆಗೆ ವಹಿಸಲು ಒಪ್ಪಿಕೊಂಡಿತು.

ಈ ತಿದ್ದು‍ಪಡಿ ವಿಧೇಯಕದ ಉದ್ದೇಶದ ಬಗ್ಗೆಯೇ ವಿಧಾನಸಭೆಯಲ್ಲಿ ಇಂದು ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು, ವಿಧೇಯಕದಲ್ಲಿರುವ ಲೋಪದೋಷಗಳನ್ನು ಎತ್ತಿ ತೋರಿದರಲ್ಲದೆ ವಿಧೇಯಕವನ್ನು ಜಂಟಿ ಸಲಹಾ ಸಮಿತಿಗೆ ಒಪ್ಪಿಸುವಂತೆ ತಾವು ಮಾಡಿದ ಸಲಹೆಗೆ ಸರ್ಕಾರ ಸಮ್ಮತಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.