ವಾಸುದೇವನ್ಗೆ ‘ಎಚ್ಚರಿಕೆ, ಕ್ಷಮೆ’ ಸಂಭವ
ನವದೆಹಲಿ, ಸೆ. 11– ಹಿರಿಯ ಐಎಎಸ್ ಅಧಿಕಾರಿ ಜೆ. ವಾಸುದೇವನ್ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ನಿದ್ದೆಗೆಟ್ಟು ಕುಳಿತಿರುವ ಈ ಸಂದರ್ಭದಲ್ಲಿ ‘ವಾಸುದೇವನ್ ಅವರಿಗೆ ಎಚ್ಚರಿಕೆ ನೀಡಿ ಕ್ಷಮಿಸುವಂತೆ’ ರಾಷ್ಟ್ರಪತಿಯವರಿಗೆ ಸಲಹೆ ಮಾಡುವ ವಿಷಯವನ್ನು ಕೇಂದ್ರ ಗೃಹ ಮತ್ತು ಕಾನೂನು ಸಚಿವಾಲಯ ಪರಿಶೀಲಿಸುತ್ತಿರುವುದಾಗಿ ಗೊತ್ತಾಗಿದೆ.
ನ್ಯಾಯಾಲಯ ನಿಂದನೆಗಾಗಿ ವಾಸುದೇವನ್ ಅವರಿಗೆ ಸುಪ್ರೀಂ ಕೋರ್ಟ್ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ವಾಸುದೇವನ್ ಅವರಿಗೆ ಕ್ಷಮಾದಾನ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಈಗಾಗಲೇ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರ ಮೊರೆ ಹೋಗಿದ್ದಾರೆ.
ಪ್ರಧಾನಿ ನರಸಿಂಹರಾವ್ ಹತ್ಯೆಗೆ ಎಲ್ಟಿಟಿಇ ಸಂಚು ಬಯಲು
ಕೊಲಂಬೊ, ಸೆ. 11 (ಎಪಿ)– ಪ್ರತ್ಯೇಕತಾವಾದಿ ತಮಿಳು ಉಗ್ರಗಾಮಿಗಳು (ಎಲ್ಟಿಟಿಇ) ಭಾರತದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರನ್ನು ಹತ್ಯೆ ಮಾಡಲು ರೂಪಿಸಿದ್ದ ಸಂಚನ್ನು ಶ್ರೀಲಂಕಾದ ಪೊಲೀಸರು ಬಯಲಿಗೆಳೆದಿದ್ದಾರೆ.
ಶ್ರೀಲಂಕಾದ ಅಧ್ಯಕ್ಷೆ ಚಂದ್ರಿಕಾ ಕುಮಾರ ತುಂಗ ಅವರ ಹತ್ಯೆಗೆ ಸಂಚು ಮಾಡಿದ್ದನೆನ್ನಲಾದ ಶಂಕಿತ ತಮಿಳು ಉಗ್ರಗಾಮಿಯೊಬ್ಬನನ್ನು ಲಂಕಾ ಪೊಲೀಸರು ಪ್ರಶ್ನಿಸುವ ಸಂರ್ಭದಲ್ಲಿ ಈ ಗುಟ್ಟು ಬಯಲಾಯಿತು ಎಂದು ಡಿಜಿಪಿ ಎಚ್.ಎಂ.ಜಿ.ಬಿ. ಕೋಟಕಾಡೆನಿಯ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.