ಕೊಟ್ಟಿಗೆಹಾರ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಬಾಳೆಹೊನ್ನೂರಿನ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪ್ರೇಮ್ ಕುಮಾರ್ ಹೇಳಿದರು.
ಬಣಕಲ್ನ ನಜರೆತ್ ಶಾಲೆಯಲ್ಲಿ ನಡೆದ ಬೆಳ್ಳಿ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕೂಡ ಅವರ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹ ನೀಡಬೇಕಿದೆ. ಅಡೆತಡೆಗಳನ್ನು ಮೀರಿ ಬೆಳೆಯಲು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ನೀಡುವ ಮಾರ್ಗದರ್ಶನ ಅತ್ಯಂತ ನಿರ್ಣಾಯಕವಾಗಿದೆ. ಸ್ಮರ್ಧಾತ್ಮಕ ಯುಗದಲ್ಲಿ ಮಕ್ಕಳು ಜ್ಞಾನವಂತರಾಗಿ ಬದುಕಿ ರೂಪಿಸಿಕೊಳ್ಳಲು ಆದ್ಯತೆಯನ್ನು ನೀಡಬೇಕಾಗಿದೆ’ ಎಂದರು.
ಚಿತ್ರನಟ ಹಾಗೂ ನಿರ್ದೇಶಕ ರವಿತೇಜ ಮಾತನಾಡಿ, ‘ಪೋಷಕರು ಮಕ್ಕಳಿಗೆ ಓದಿನ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ. ಆ ಕ್ಷೇತ್ರದಲ್ಲಿಯೂ ಕೂಡ ಬದುಕು ರೂಪಿಸಿಕೊಳ್ಳಲು ಈಗ ವಿಪುಲ ಅವಕಾಶಗಳಿವೆ. ಪೋಷಕರ ಹೆಸರು ತಂದುಕೊಡುವಂತಹ ಸಾಧನೆಗಳನ್ನು ಮಾಡಲು ಮಕ್ಕಳಲ್ಲಿ ಸ್ಫೂರ್ತಿ ತುಂಬಬೇಕಿದೆ’ ಎಂದರು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯ ಗಣ್ಯರು ಬೆಳ್ಳಿ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.ಬೆಳ್ಳಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಬಿಷಪ್ ಡಾ.ಟಿ.ಅಂತೋನಿ ಸ್ವಾಮಿ ಅವರು ಇತರ ಧರ್ಮಗುರುಗಳೊಂದಿಗೆ ದಿವ್ಯ ಬಲಿಪೂಜೆ ಅರ್ಪಿಸಿದರು.
ಬಣಕಲ್ ಚರ್ಚ್ನ ಧರ್ಮಗುರುಗಳಾದ ಫಾದರ್ ಪ್ರೇಮ್ ಲಾರೆನ್ಸ್ ಡಿಸೋಜ, ಪ್ರಾಂಶುಪಾಲೆ ಹಿಲ್ಡಾ ಲೋಬೊ, ನಿಕಟಪೂರ್ವ ಪ್ರಾಂಶುಪಾಲೆ ಸಿಸ್ಟರ್ ಜಯರಾಣಿ, ಬ್ಲ್ಯಾಂಚ್ ಕೊರೆಯ, ಸಿಸ್ಟರ್ ದೀಪ್ತಿ, ಸಿಸ್ಟರ್ ಮೇರಿ ಮಾರ್ಗರೇಟ್, ಸಿಸ್ಟರ್ ನಿರ್ಮಲ, ಸಿಸ್ಟರ್ ಎಲಿಜಬೆತ್ ಲೋಬೊ, ಸಿಸ್ಟರ್ ವಿಮಲರಾಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.