ದುಬೈ: ಇಸ್ಲಾಂ ಧರ್ಮದ ವಿರುದ್ಧ ಟ್ವೀಟ್ ಮಾಡಿದ ಭಾರತ ಮೂಲದ ಬಾಣಸಿಗರೊಬ್ಬರು ವಿವಾದದಲ್ಲಿ ಸಿಲುಕಿದ್ದಾರೆ.
ಜೆಡಬ್ಲ್ಯೂ ಮ್ಯಾರಿಯಟ್ ಮ್ಯಾರ್ಕ್ವಿಸ್ ಹೋಟೆಲ್ನ ಮುಖ್ಯ ಬಾಣಸಿಗರಾಗಿರುವ ಅತುಲ್ ಕೊಚ್ಚಾರ್ ಅವರು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಟೀಕಿಸಿ ಪೋಸ್ಟ್ ಮಾಡಿದ್ದ ಟ್ವೀಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅತುಲ್ ಅವರನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಪ್ರಿಯಾಂಕಾ ಚೋಪ್ರಾ ಅವರು ನಟಿಸುತ್ತಿರುವ ಅಮೆರಿಕದ ಟೆಲಿವಿಷನ್ ಷೋ ‘ಕ್ವಾಂಟಿಕೊ’ದಲ್ಲಿ ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸಲಾಗಿದೆ ಎಂದು ಟೀಕೆಗಳು ವ್ಯಕ್ತವಾಗಿದ್ದವು.
ಬಳಿಕ ಅತುಲ್ ಸಹ ಪ್ರಿಯಾಂಕಾ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಟೀಕೆಗಳು ವ್ಯಕ್ತವಾದ ಬಳಿಕ ಸೋಮವಾರ ಈ ಟ್ವೀಟ್ ತೆಗೆದುಹಾಕಿ ಕ್ಷಮೆಯಾಚಿಸಿದ್ದಾರೆ.
’ನನ್ನ ಟ್ವೀಟ್ಗೆ ಸಮರ್ಥನೆ ಇಲ್ಲ. ಇಸ್ಲಾಂ 1400 ವರ್ಷಗಳ ಹಿಂದೆ ಸ್ಥಾಪನೆಯಾಗಿತ್ತು ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಪ್ರಾಮಾಣಿಕತೆಯಿಂದ ಕ್ಷಮೆಯಾಚಿಸುತ್ತೇನೆ. ನನಗೆ ಇಸ್ಲಾಂ ಧರ್ಮದಿಂದ ಹೆದರಿಕೆ ಇಲ್ಲ. ನನ್ನ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.