ADVERTISEMENT

ಎಸ್‌ಸಿಒ ಸದಸ್ಯತ್ವಕ್ಕೆ ಭಾರತ ಮನವಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 19:30 IST
Last Updated 7 ಜೂನ್ 2012, 19:30 IST
ಎಸ್‌ಸಿಒ ಸದಸ್ಯತ್ವಕ್ಕೆ ಭಾರತ ಮನವಿ
ಎಸ್‌ಸಿಒ ಸದಸ್ಯತ್ವಕ್ಕೆ ಭಾರತ ಮನವಿ   

ಬೀಜಿಂಗ್ (ಪಿಟಿಐ): ಚೀನಾ ಮತ್ತು ರಷ್ಯಾ ನೇತೃತ್ವದ ಶಾಂಘೈ ಸಹಕಾರ ಸಂಘಟನೆಯಲ್ಲಿ (ಎಸ್‌ಸಿಒ)ತನಗೆ ಪೂರ್ಣ ಸದಸ್ಯತ್ವ ನೀಡುವಂತೆ ಭಾರತ ಗುರುವಾರ ಒತ್ತಾಯಿಸಿದೆ.ಈ ಸಂಘಟನೆಯಲ್ಲಿ ಮಧ್ಯ ಏಷ್ಯಾ ದೇಶಗಳಾದ ಉಜ್ಬೇಕಿಸ್ತಾನ, ಕಜಕಿಸ್ತಾನ, ತಜಕಿಸ್ತಾನ ಹಾಗೂ ಕಿರ್ಜಿಸ್ತಾನ ಸದಸ್ಯ ದೇಶಗಳಾಗಿವೆ. ಆದರೆ ಭಾರತ, ಪಾಕಿಸ್ತಾನ ಹಾಗೂ ಮಂಗೋಲಿಯಾ ವೀಕ್ಷಕ ದೇಶಗಳಾಗಿವೆ.

`ಎಸ್‌ಸಿಒ~ ಸಭೆಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ  ಸಚಿವ ಎಸ್.ಎಂ. ಕೃಷ್ಣ, ಆಫ್ಘಾನಿಸ್ತಾನದಲ್ಲಿ ಭದ್ರತಾ ಕಾರ್ಯ ಹಾಗೂ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಮಹತ್ವದ ಪಾತ್ರವಿದೆ ಎಂದು ತಮಗೆ ಅನಿಸುತ್ತಿದೆ. ಎಸ್‌ಸಿಒದ ಎಲ್ಲ ಸಭೆಗಳಲ್ಲಿ ಭಾರತ ರಚನಾತ್ಮಕವಾಗಿ ಭಾಗಿಯಾಗಿದೆ.
 
ತನ್ಮೂಲಕ ಈ ಗುಂಪಿನ ಜತೆ ಸೇರಿಕೊಳ್ಳಲು ತನಗಿರುವ ಬದ್ಧತೆ ಪ್ರದರ್ಶಿಸಿದೆ ಎಂದು ಹೇಳಿದರು.
ಈ ಪ್ರದೇಶದ ಸುರಕ್ಷತೆ ಹಾಗೂ ಸಮೃದ್ಧಿಯ ದೃಷ್ಟಿಯಿಂದ `ಎಸ್‌ಸಿಒ~ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸಬಹುದಾಗಿದೆ ಎಂಬುದು ಭಾರತದ ನಂಬಿಕೆಯಾಗಿದೆ ಎಂದೂ ಅವರು ತಿಳಿಸಿದರು.

ಆಫ್ಘಾನಿಸ್ತಾನದ ಸಮಸ್ಯೆ ಪ್ರಸ್ತುತ ಈ ಭಾಗದಲ್ಲಿ ನಾವು ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆ. ಈ ದೇಶ ಕೇವಲ ಮಧ್ಯ ಏಷ್ಯಾ ಅಥವಾ ದಕ್ಷಿಣ ಏಷ್ಯಾದ ನಡುವಿನ ಕೊಂಡಿಯಾಗಿಲ್ಲ. ಯುರೇಷ್ಯಾ ಹಾಗೂ ಮಧ್ಯಪ್ರಾಚ್ಯವನ್ನು ಜೋಡಿಸುವ ಕೊಂಡಿಯೂ ಆಗಿದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಆಫ್ಘಾನಿಸ್ತಾನ ಸನ್ನಿವೇಶದ ಕುರಿತು ಚರ್ಚಿಸಲು `ಎಸ್‌ಸಿಒ~ ಪ್ರಮುಖ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಭಾರತ ಬಹುಕಾಲದಿಂದ ಭಯೋತ್ಪಾದನಾ ದಾಳಿಗಳಿಗೆ ಗುರಿಯಾಗಿರುವುದರಿಂದ, `ಎಸ್‌ಸಿಒ~ ಸದಸ್ಯ ದೇಶಗಳಿಗೆ ಮೀಸಲಾಗಿರುವ `ಪ್ರಾದೇಶಿಕ ಭಯೋತ್ಪಾದನಾ ನಿಗ್ರಹ ಕೂಟ~ದ (ಆರ್‌ಎಟಿಎಸ್) ಜತೆ ಕೈಜೋಡಿಸಲು ಇಚ್ಛಿಸುತ್ತದೆ. ಈ ಭಾಗದಲ್ಲಿ ವ್ಯಾಪಕವಾಗಿರುವ ಮಾದಕ ವಸ್ತುಗಳ ಕಳ್ಳಸಾಗಣೆ ಹಾಗೂ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಗಮನ ನೀಡಬೇಕಿದ್ದು, ಒಂದಾಗಿ ಕೆಲಸ ಮಾಡುವ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದರು.

ಚೀನಾದ ನೆರವು
 ಶಾಂಘೈ ಸಹಕಾರ ಸಂಘಟನೆಯ ಸದಸ್ಯ ದೇಶಗಳಿಗೆ ಒಂದು ಸಾವಿರ ಕೋಟಿ ಅಮೆರಿಕನ್ ಡಾಲರ್‌ಗಳಷ್ಟು ನೆರವು ನೀಡುವುದಾಗಿ ಚೀನಾ ಪ್ರಕಟಿಸಿದೆ.ಗುರುವಾರ ಮುಕ್ತಾಯವಾದ `ಎಸ್‌ಸಿಒ~ ಸಭೆಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಹು ಜಿಂಟಾವೊ, `ಎಸ್‌ಸಿಒ~ ಸದಸ್ಯ ದೇಶಗಳ ಅಭಿವೃದ್ಧಿಗಾಗಿ ಈ ನೆರವು ನೀಡುವುದಾಗಿ ತಿಳಿಸಿದರು.

ಭಯೋತ್ಪಾದನಾ ನಿಗ್ರಹ ಕೇಂದ್ರ
`ಎಸ್‌ಸಿಒ~ ಸಭೆಯಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, `ಎಸ್‌ಸಿಒ~ ವ್ಯಾಪ್ತಿಯಲ್ಲಿ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪಿಸುವ ಸಲಹೆ ಮುಂದಿಟ್ಟರು. ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ ತಡೆ ಹಾಗೂ ಸಂಘಟಿತ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗತಿಕ ಕೇಂದ್ರ ಸ್ಥಾಪಿಸುವ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಇರಾನ್ ಅಧ್ಯಕ್ಷ ಮೊಹಮದ್ ಅಹಮದಿನೆಜಾದ್ ಜತೆ ಮಾತುಕತೆ ನಡೆಸಿದ ಪುಟಿನ್, ಇರಾನ್‌ನ ಪರಮಾಣು ಯೋಜನೆಗಳು ಶಾಂತಿಯುತವಾಗಿದ್ದಲ್ಲಿ ಅದನ್ನು ರಷ್ಯಾ ಬೆಂಬಲಿಸಲಿದೆ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.