ADVERTISEMENT

ಒಡಿಶಾದಲ್ಲಿ ಗಣಿಗಾರಿಕೆ ರದ್ದತಿಗೆ ಒತ್ತಾಯ

`ವೇದಾಂತ' ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ಲಂಡನ್ (ಪಿಟಿಐ): ಒಡಿಶಾದಲ್ಲಿನ ವಿವಾದಿತ ನಿಯಮ್‌ಗಿರಿ ಬಾಕ್ಸೈಟ್ ಗಣಿಗಾರಿಕೆಯನ್ನು ಭಾರತ ಸರ್ಕಾರ ನಿಲ್ಲಿಸಬೇಕೆಂದು ಒತ್ತಾಯಿಸಿ ಗುಂಪೊಂದು ಇಲ್ಲಿನ ಭಾರತೀಯ ಹೈ ಕಮೀಷನ್ ಕಚೇರಿ ಎದುರು ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು.ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಿಲ್ಡರ್‌ಗಳಂತೆ ವೇಷ ತೊಟ್ಟು ಹೈಕಮೀಷನ್ ಕಚೇರಿಯ ಪ್ರವೇಶ ದ್ವಾರದ ಎದುರು ಮಣ್ಣನ್ನು ಸುರಿದು ಕಚೇರಿ ಪ್ರವೇಶಿಸುವುದಕ್ಕೆ ಅಡ್ಡಿ ಪಡಿಸಿದರು.

ನಿಯಮ್‌ಗಿರಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನರು ಮತ್ತು ರೈತರು ವಾಸಿಸುತ್ತಿದ್ದಾರೆ. ಆದ್ದರಿಂದ ವಿವಾದಿತ ಬಾಕ್ಸೈಟ್ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಬೇಕು ಎಂದು  ಪ್ರತಿಭಟನಾಕಾರರು ಒತ್ತಾಯಿಸಿದರು.ಒಡಿಶಾ ಸರ್ಕಾರದ ಒಡೆತನದಲ್ಲಿರುವ ಒಡಿಶಾ ಮೈನಿಂಗ್ ಕಾರ್ಪೋರೇಷನ್ ವೇದಾಂತದ ಸಹಯೋಗದೊಂದಿಗೆ ಸೇರಿ ಅಕ್ರಮ ನಡೆಸುತ್ತಿದೆ, ಆದ ಕಾರಣ ಈ ಮೋಸದ ಜಾಲದಿಂದ ಒಡಿಶಾ ಮೈನಿಂಗ್ ಕಾರ್ಪೋರೇಷನ್ ಅನ್ನು ದೂರವಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪರಿಸರ ಮತ್ತು ಅರಣ್ಯ ಕಾಯ್ದೆಗಳನ್ನು ಉಲ್ಲಂಘಿಸಿದ್ದರಿಂದ ಅಂದಿನ ಪರಿಸರ ಖಾತೆ ಸಚಿವ ಜೈರಾಂ ರಮೇಶ್ ಅವರು ಆಗಸ್ಟ್ 2010ರಲ್ಲಿ ಈ ವಿವಾದಿತ ಯೋಜನೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ್ದರು. ಇದರ ವಿರುದ್ಧವಾಗಿ ಒಡಿಶಾ ಮೈನಿಂಗ್ ಕಾರ್ಪೋರೇಷನ್ ಕೋರ್ಟ್ ಮೋರೆ ಹೋಗಿತ್ತು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.ವೇದಾಂತದ ಉದ್ದೇಶಿತ ಗಣಿಗಾರಿಕೆ ಬಗೆಗಿನ ತೀರ್ಪನ್ನು ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಮುಂದಿನ ಜನವರಿವರೆಗೆ ಮುಂದೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.