ADVERTISEMENT

ಕತಾರ್‌ನಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಕತಾರ್: ಇಲ್ಲಿನ ಕರ್ನಾಟಕ ಮುಸ್ಲಿಂ ಸಾಂಸ್ಕ್ರತಿಕ ಸಂಘವು ಆಲ್ಮಿನ್ ಅಕಾಡೆಮಿ ಭವನದಲ್ಲಿ 58ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿತು.

ರಾಜ್ಯೋತ್ಸವದ ಅಂಗವಾಗಿ ಪವಾಡ ರಹಸ್ಯ ಬಯಲು, ವಿವಿಧ ಸ್ಪರ್ಧೆಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡಿಗರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಕತಾರ್‌ನ ಕರ್ನಾಟಕದ ಮುಸ್ಲಿಂ ಸಂಘ 25 ವರ್ಷ ಪೂರೈಸಿದ ಬೆಳ್ಳಿ ಹಬ್ಬ ಸಂಭ್ರಮದ ನೆನಪಿಗಾಗಿ ಹೊರತಂದಿರುವ ‘ಪ್ರಗತಿ’ ವಿಶೇಷ ಸ್ಮರಣ ಸಂಚಿಕೆಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಸದಸ್ಯ ಎ.ಎನ್.ಮಹೇಶ್ ಬಿಡುಗಡೆ ಮಾಡಿದರು.

ವಿದೇಶದಲ್ಲಿರುವ ಕರ್ನಾಟಕದ ಸಂಘಟನೆಗಳು, ಕನ್ನಡ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿವೆ.     ಭಾಷೆ, ನಾಡು, ನುಡಿಯ ಬಗ್ಗೆ ನಿಮಗಿರುವ ವಿಶೇಷ ಕಾಳಜಿ ತೋರಿಸುತ್ತದೆ ಎಂದು ಅವರು ಶ್ಲಾಘಿಸಿದರು.
ರಾಜ್ಯೋತ್ಸವವೆಂದರೆ ಕೇವಲ ಹಾಡು, ನೃತ್ಯಗಳಿಗೆ ಸೀಮಿತವಾಗದೆ ವಿದೇಶಿ ನೆಲದಲ್ಲಿ ವೈಚಾರಿಕ ಪ್ರಜ್ಞೆ ಬಿಂಬಿಸುವ ಪವಾಡ ರಹಸ್ಯ ಬಯಲು  ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಕತಾರ್‌ನ ಕರ್ನಾಟಕ ಬಂಟ್ಸ್ ಸಂಘ ಅಧ್ಯಕ್ಷ ರವಿಶೆಟ್ಟಿ ಮಾತನಾಡಿ, ಕತಾರ್‌ನಲ್ಲಿ ನಾವೆಲ್ಲರೂ ಪರಸ್ಪರ ಸಹೋದರತ್ವದಿಂದ ಬಾಳ್ವೆ ಮಾಡುತ್ತಿದ್ದೇವೆ. ಇಂತಹ ಕಾರ್ಯಕ್ರಮಗಳು ನಮ್ಮ ಬಾಂಧವ್ಯ ವೃದ್ಧಿಸುತ್ತದೆ ಎಂದರು.

ಕರ್ನಾಟಕ ಮುಸ್ಲಿಂ ಸಾಂಸ್ಕ್ರತಿಕ ಸಂಘದ ಅಧ್ಯಕ್ಷ ನಿಯಾಜ್ ಅಹಮದ್ ಮಾತನಾಡಿ, ‘ನಮ್ಮ ಮಾತೃ ಭಾಷೆ ಉರ್ದುವಾದರೂ ಕನ್ನಡ ನೆಲ, ಜಲ ನನ್ನ ಉಸಿರು’ ಎಂದರು.

ಕತಾರ್‌ನಲ್ಲಿರುವ  ದೈಜಿ ವರ್ಲ್ಡ್ ಸುದ್ದಿ ನಿರ್ವಾಹಕ ಅಲೆಕ್ಸ್ ಕ್ಯಾಸ್ಟಲಿನೋ ಮತ್ತು ಸಂಘದ ಅಧ್ಯಕ್ಷ ನಿಯಾಜ್‌ ಅಹಮದ್‌ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ನುಡಿಗೆ ಸಂಬಂಧಿಸಿದ ರಸಪ್ರಶ್ನೆ ಸ್ಪಧೆಯಲ್ಲಿ ವಿಜೇತರಾದ ಕರ್ನಾಟಕದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಮೂಢನಂಬಿಕೆ ವಿರೋಧವಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಹುಲಿಕಲ್ ನಟರಾಜ್ ನಡೆಸಿಕೊಟ್ಟ  ಪವಾಡ ರಹಸ್ಯ  ಬಯಲು ಕಾರ್ಯಕ್ರಮ ಜನಮನ ಸೆಳೆಯಿತು.

ಕರ್ನಾಟಕ ಮುಸ್ಲಿಂ ಸಾಂಸ್ಕ್ರತಿಕ ಸಂಘ  ಕತಾರ್‌ನ ಕಾರ್ಯದರ್ಶಿ ಇಬ್ರಿಯಾಜ್ ಖಾನ್, ಮಾಜಿ ಅಧ್ಯಕ್ಷ ಸಯೀದ್ ಅಸಾದ್, ತುಳು ಕೂಟದ ಅಧ್ಯಕ್ಷ ಸೀತಾರಾಮ್ ಶೆಟ್ಟಿ, ಮಂಗಳೂರು ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸುನೀಲ್ ಡಿ ಸೋಜಾ, ರಾಮಚಂದ್ರ ಶೆಟ್ಟಿ, ಇಬ್ರಾಹಿಂ ಬೇರಿ, ಅರುಣ್, ಶ್ರೀಮತಿ ಅರುಣ್ ಹಾಜರಿದ್ದರು.

ಕರ್ನಾಟಕ ಮುಸ್ಲಿಂ ಸಾಂಸ್ಕ್ರತಿಕ ಸಂಘದ ಅಧ್ಯಕ್ಷ ನಿಯಾಜ್ ಅಹಮದ್ ಸ್ವಾಗತಿಸಿ, ಜಾವಿದ್ ಅಲಿ ಖಾನ್ ನಿರೂಪಿಸಿ, ಸಯೀದ್ ಅಸಾದಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.