ನ್ಯೂಯಾರ್ಕ್ (ಪಿಟಿಐ): ಇತ್ತ ಭಾರತ ಸರ್ಕಾರ ಉನ್ನತ ಮಟ್ಟದ ಪ್ರಯತ್ನಗಳನ್ನು ನಡೆಸಿದರೂ ಕೂಡ ಅತ್ತ ಸಾಮೂಹಿಕ ವೀಸಾ ವಂಚನೆ ಆರೋಪಕ್ಕೆ ಸಿಲುಕಿರುವ ‘ಟ್ರೈವ್ಯಾಲಿ’ ವಿಶ್ವವಿದ್ಯಾಲಯದ ಸುಮಾರು ಒಂದು ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಇನ್ನೂ ಅತಂತ್ರವಾಗಿಯೇ ಇದೆ. ವೀಸಾ ವಂಚನೆಗೆ ಸಂಬಂಧಿಸಿದಂತೆ ಮುಚ್ಚಲಾಗಿರುವ ಟ್ರೈವ್ಯಾಲಿ ವಿವಿಯ ಅನೇಕ ವಿದ್ಯಾರ್ಥಿಗಳು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ನ ಕಾನ್ಸುಲ್ ಜನರಲ್ ಸುಷ್ಮಿತಾ ಗಂಗೂಲಿ ಮಾತನಾಡಿ, “ಈ ಪ್ರಕರಣ 2ರಿಂದ 3 ತಿಂಗಳ ಒಳಗೆ ಬಗೆ ಹರಿಯುವಂತೆ ಕಾಣುತ್ತಿಲ್ಲ. ಇದು ಖಂಡಿತವಾಗಿಯೂ ಸುಮಾರು ಏಳೆಂಟು ತಿಂಗಳ ಸಮಯ ತೆಗೆದುಕೊಳ್ಳಬಹುದು” ಎಂದಿದ್ದಾರೆ.ಈ ಬಗ್ಗೆ ಸರ್ಕಾರದ ಸಹಾಯ ಹಸ್ತ ನೀಡುವಂತೆ ಕೋರಿ ಸುಮಾರು 30 ಮಂದಿ ವಿದ್ಯಾರ್ಥಿಗಳು ಈಗಾಗಲೇ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೃಷ್ಣ “ಮೊದಲು ಈ ವಿದ್ಯಾರ್ಥಿಗಳ ಹಿತರಕ್ಷಣೆ ಕಾಯುವಂತೆ ಹಾಗೂ ನಂತರ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಮೆರಿಕ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ನಡೆದಿದೆ” ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.