ADVERTISEMENT

ತಮಿಳು ಪ್ರಾಂತ್ಯಕ್ಕೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST
ತಮಿಳು ಪ್ರಾಂತ್ಯಕ್ಕೆ ಅಧಿಕಾರ
ತಮಿಳು ಪ್ರಾಂತ್ಯಕ್ಕೆ ಅಧಿಕಾರ   

ಕೊಲಂಬೊ (ಪಿಟಿಐ): ಸಂವಿಧಾನಕ್ಕೆ 13ನೇ ತಿದ್ದುಪಡಿ ತಂದು ತಮಿಳು ಪ್ರಾಬಲ್ಯದ ಪ್ರಾಂತೀಯ ಮಂಡಳಿಗಳಿಗೆ ಅಧಿಕಾರ ನೀಡುವ ಮೂಲಕ, ಜನಾಂಗೀಯ ವಿವಾದ ಅಂತ್ಯಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಶ್ರೀಲಂಕಾ ಮಂಗಳವಾರ ಭಾರತಕ್ಕೆ ಭರವಸೆ ನೀಡಿದೆ.

ಸರ್ಕಾರ ಮತ್ತು ತಮಿಳು ರಾಷ್ಟ್ರೀಯ ಮೈತ್ರಿಕೂಟದ ನಡುವೆ ಶೀಘ್ರದಲ್ಲಿ ರಚನಾತ್ಮಕವಾದ ಮಾತುಕತೆ ನಡೆಯಲಿದೆ ಎಂಬ ವಿಶ್ವಾಸವನ್ನು ಭಾರತ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದೆ.

ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರೊಂದಿಗೆ ಸುಮಾರು 90 ನಿಮಿಷ ಮಾತುಕತೆ ನಡೆಸಿದ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಶ್ರೀಲಂಕಾ ತಮಿಳರ ಬಹುಕಾಲದ ಸಮಸ್ಯೆಗೆ ಶೀಘ್ರದಲ್ಲಿ ರಾಜಕೀಯ ಪರಿಹಾರ ಕಂಡುಕೊಳ್ಳುವಂತೆ ಕೋರಿದರು. 2009ರ ಮೇ ತಿಂಗಳಲ್ಲಿ ಕೊನೆಗೊಂಡ ಮೂರು ದಶಕಗಳ ಜನಾಂಗೀಯ ಹಿಂಸಾಚಾರದಿಂದ ನಿರ್ಗತಿಕರಾದ ತಮಿಳು ವಂಶಜರಿಗೆ ಪುನರ್ವಸತಿ ಕಲ್ಪಿಸುವ ಮಾತುಕತೆಗೆ ಸಭೆ ಒತ್ತು ನೀಡಿತು ಎಂದು ಮೂಲಗಳು ತಿಳಿಸಿವೆ.

1987ರ ಭಾರತ-ಶ್ರೀಲಂಕಾ ಒಪ್ಪಂದಕ್ಕೆ ತಿದ್ದುಪಡಿ ತಂದರೆ, ಜನಾಂಗೀಯ ಅಲ್ಪಸಂಖ್ಯಾತರಾದ ತಮಿಳರು ಹೆಚ್ಚಾಗಿ ನೆಲೆಸಿರುವ ಉತ್ತರ ಮತ್ತು ಪೂರ್ವ ಭಾಗದಲ್ಲಿನ ಪ್ರಾಂತೀಯ ಮಂಡಳಿಗಳು ಭೂ ಒಡೆತನ ಹಾಗೂ ಪೊಲೀಸ್ ಅಧಿಕಾರವನ್ನು ಪಡೆಯಲು ಸಾಧ್ಯವಾಗುತ್ತದೆ.

ನಾಲ್ಕು ಒಪ್ಪಂದ: ದ್ವಿಪಕ್ಷೀಯ ಸಹಕಾರ ಹಾಗೂ ವ್ಯಾಪಾರ ಸಂಬಂಧ ವೃದ್ಧಿ ದಿಸೆಯಲ್ಲಿ ಕೃಷ್ಣ ಮತ್ತು ಶ್ರೀಲಂಕಾದ ಅವರ ಸಹವರ್ತಿ ಜಿ.ಎಂ.ಪೆರಿಸ್ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದರು.

ತಮಿಳು ನಿರ್ಗತಿಕರಿಗೆ 260 ದಶಲಕ್ಷ ಡಾಲರ್ ವೆಚ್ಚದಲ್ಲಿ 49,000 ಮನೆಗಳ ನಿರ್ಮಾಣ ಈ ಒಪ್ಪಂದದಲ್ಲಿ ಸೇರಿದೆ.

ಮಾತುಕತೆಗೆ ಸಿದ್ಧ: ಇದೇ ವೇಳೆ, ತಮಿಳು ರಾಷ್ಟ್ರೀಯ ಮೈತ್ರಿಕೂಟದ ಜತೆಗೆ ಮುರಿದು ಬಿದ್ದ ಮಾತುಕತೆಯನ್ನು ಪುನರಾರಂಭಿಸಲು ಸಿದ್ಧವಿರುವುದಾಗಿ ತಿಳಿಸಿದ ಶ್ರೀಲಂಕಾ ಸರ್ಕಾರ, ಸಂಸದೀಯ ಆಯ್ಕೆ ಸಮಿತಿಗೆ ತನ್ನ ಸದಸ್ಯರನ್ನು ನೇಮಿಸದೇ ಇರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮೈತ್ರಿಕೂಟಕ್ಕೆ ಮನವಿ ಮಾಡಿದೆ.

ಕೃಷ್ಣ ಅವರೊಂದಿಗೆ ನಡೆಸಿದ ಚರ್ಚೆಯ ವೇಳೆ ಈ ವಿಷಯ ಸ್ಪಷ್ಟಪಡಿಸಿದ ಪೆರಿಸ್, `ಮೈತ್ರಿಕೂಟದ ಜತೆ ಮಾತುಕತೆ ನಡೆಸಲು ಸರ್ಕಾರ ಬದ್ಧವಾಗಿದೆ. ಅಲ್ಲದೆ ಬಹುಸಂಖ್ಯಾತ ರಾಜಕೀಯ ಅಭಿಪ್ರಾಯವನ್ನು ಕಡೆಗಣಿಸಿದರೆ ಮಾತುಕತೆ ಎಂದೂ ಫಲಪ್ರದವಾಗದು~ ಎಂದು ಒತ್ತಿ ಹೇಳಿದರು.

ಶ್ರೀಲಂಕಾ ಜೈಲಿನಲ್ಲಿರುವ ಮೀನುಗಾರರ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೃಷ್ಣ, ಅದೊಂದು ಭಾವನಾತ್ಮಕವಾದ ಸಮಸ್ಯೆಯಾಗಿದ್ದು, ಜಾಗರೂಕತೆಯಿಂದ ಪರಿಹರಿಸಬೇಕಾಗಿದೆ ಎಂದು ಹೇಳಿದರು.

`ಮೀನುಗಾರರ ಮೇಲೆ ಎಂದೂ ಬಲಪ್ರಯೋಗ ನಡೆಸಬಾರದು, ಮಾನವೀಯ ರೀತಿಯಲ್ಲಿ ಅವರನ್ನು ನಡೆಸಿಕೊಳ್ಳಬೇಕು~ ಎಂದೂ ಅವರು ಮನವಿ ಮಾಡಿದರು. ಎಂದು ಮೂಲಗಳು ತಿಳಿಸಿವೆ.

13ನೇ ತಿದ್ದುಪಡಿ ಅನುಸಾರ ಪೊಲೀಸ್ ಮತ್ತು ಭೂ ಒಡೆತನದ ಅಧಿಕಾರವನ್ನು ಪ್ರಾಂತೀಯ ಮಂಡಳಿಗಳಿಗೆ ನೀಡಬೇಕೆಂದು ಮೈತ್ರಿಕೂಟ ಪಟ್ಟುಹಿಡಿದಿದ್ದ ಹಿನ್ನೆಲೆಯಲ್ಲಿ ಮಾತುಕತೆ ಮುರಿದು ಬಿದ್ದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.