ADVERTISEMENT

ತಾಯಿಯ ಬದಲು ಭ್ರೂಣಕ್ಕೆ ಮಹತ್ವ

ಸವಿತಾ ಹಾಲಪ್ಪನವರ ಸಾವಿನ ತನಿಖಾ ವರದಿಯಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಲಂಡನ್ (ಪಿಟಿಐ): ಭಾರತ ಮೂಲದ ದಂತ ವೈದ್ಯೆ ಸವಿತಾ ಹಾಲಪ್ಪನವರ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಆಸ್ಪತ್ರೆ ಸಿಬ್ಬಂದಿ ಬೆಳವಣಿಗೆ ಹೊಂದಿರದ ಭ್ರೂಣಕ್ಕೆ ಹೆಚ್ಚಿನ ಮಹತ್ವ ಕೊಡುವ ಬದಲು ಸವಿತಾ ಆರೋಗ್ಯದತ್ತ ಕಾಳಜಿ ವಹಿಸಿದ್ದರೆ ಅವರನ್ನು ಬದುಕಿಸಬಹುದಾಗಿತ್ತು ಎಂದು ತನಿಖಾವರದಿ ತಿಳಿಸಿದೆ.

ರಕ್ತದಲ್ಲಿ ನಂಜು ಏರಿದ್ದರೂ ಗರ್ಭಪಾತ ನಡೆಸಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಸವಿತಾ ಕಳೆದ ವರ್ಷ ಐರ್ಲೆಂಡ್‌ನಲ್ಲಿ ಸಾವನ್ನಪ್ಪ್ದ್ದಿದರು. ಈ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.
`ಸವಿತಾ ತೀವ್ರ ಅನಾರೋಗ್ಯ ಪೀಡಿತರಾಗಿದ್ದರೂ ಅದರತ್ತ ಗಮನ ನೀಡಲೇ ಇಲ್ಲ... ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದರೂ ಜೀವ ಉಳಿಸಲು ಯಾರೂ ಮುಂದಾಗಲಿಲ್ಲ' ಎಂದು ವರದಿಯಲ್ಲಿ ಹೇಳಲಾಗಿದೆ.

`ಭ್ರೂಣದ ಹೃದಯ ಬಡಿತ ನಿಲ್ಲುವವರೆಗೆ ಆಸ್ಪತ್ರೆ ಸಿಬ್ಬಂದಿ ತಾಯಿಯ ಕ್ಷೀಣಿಸುತ್ತಿರುವ ಆರೋಗ್ಯದ ಕುರಿತು ಮತ್ತು ಸೋಂಕು ನಿವಾರಣೆಯತ್ತ ನಿರ್ಲಕ್ಷ್ಯ ವಹಿಸಿದ್ದು ತನಿಖಾ ತಂಡಕ್ಕೆ ಮನವರಿಕೆಯಾಗಿದೆ' ಎಂದು ತನಿಖಾ ತಂಡದ ವರದಿಯನ್ನು ಉಲ್ಲೇಖಿಸಿ `ಐರಿಷ್ ಟೈಮ್ಸ' ವರದಿ ಮಾಡಿದೆ. ಗರ್ಭಪಾತಕ್ಕೆ ಸಂಬಂಧಿಸಿದಂತೆ ಐರ್ಲೆಂಡ್‌ನಲ್ಲಿ ಯೂರೋಪ್‌ನಲ್ಲೇ ಅತ್ಯಂತ ಕಟ್ಟುನಿಟ್ಟಿನ ಕಾನೂನುಜಾರಿಯಲ್ಲಿದೆ.

ತಮ್ಮ ನ್ಯಾಯವಾದಿ ಜೆರಾರ್ಡ್ ಒ' ಡೊನೆಲ್ ಅವರಿಗೆ ನೀಡಿದ ತನಿಖಾ ತಂಡದ ವರದಿಯ ಬಗ್ಗೆ ಸವಿತಾ ಪತಿ ಪ್ರವೀಣ್ ಹಾಲಪ್ಪನವರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

`ಸವಿತಾ ಆರೋಗ್ಯ ಅಪಾಯದಲ್ಲಿದ್ದಾಗಲೂ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ್ದರ ಕುರಿತು ವರದಿಯಲ್ಲಿ ಉತ್ತರ ನೀಡದೇ ಇರುವುದಕ್ಕೆ ಪ್ರವೀಣ್ ಅಸಮಾಧಾನಗೊಂಡಿದ್ದಾರೆ' ಎಂದು ನ್ಯಾಯವಾದಿ ಅವರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಜೆರಾರ್ಡ್ ಅವರು ಈ ವಾರದ ಅಂತ್ಯದಲ್ಲಿ ತನಿಖಾ ತಂಡದ ಮುಖ್ಯಸ್ಥರನ್ನು ಭೇಟಿ ಆಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.