ADVERTISEMENT

‘ತಾಲಿಬಾನ್‌ಗೆ ಕೊನೆ ಅವಕಾಶ’

ಏಜೆನ್ಸೀಸ್
Published 6 ಜೂನ್ 2017, 19:04 IST
Last Updated 6 ಜೂನ್ 2017, 19:04 IST
ಅಶ್ರಫ್ ಘನಿ
ಅಶ್ರಫ್ ಘನಿ   

ಕಾಬೂಲ್ (ಎಎಫ್‌ಪಿ): ‘ಶಾಂತಿಗೆ ಒಪ್ಪಿಕೊಳ್ಳಿ ಇಲ್ಲವೇ ತೀಕ್ಷ್ಣ ಪರಿಣಾಮಎದುರಿಸಲು ಸಿದ್ಧರಾಗಿ’ ಎಂದು ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ತಾಲಿಬಾನ್‌ಗೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.

ಮಂಗಳವಾರ ಇಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಘನಿ ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ ಶುಕ್ರವಾರ ರಾಜಧಾನಿಯಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪ ತಾಳಿ ನಾಲ್ವರು ಮೃತಪಟ್ಟಿದ್ದರು. ಈ ಘಟನೆಗಳಿಂದ ಎಚ್ಚೆತ್ತ ಆಫ್ಘನ್ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದೆ.

ADVERTISEMENT

ಶಸ್ತ್ರಸಜ್ಜಿತ ಗಸ್ತು ವಾಹನಗಳು ಇಡೀ ರಾಜಧಾನಿಯನ್ನು ಸುತ್ತುತ್ತಿವೆ. ಯುದ್ಧವಿಮಾನಗಳೂ ಸನ್ನದ್ಧ ಸ್ಥಿತಿಯಲ್ಲಿವೆ.

ಸಮ್ಮೇಳನದಲ್ಲಿ 25 ದೇಶಗಳು ಭಾಗವಹಿಸಿದ್ದವು. ಶಾಂತಿ ಸ್ಥಾಪನೆ ಧ್ಯೇಯ ಹೊಂದಿದ್ದ ‘ಕಾಬೂಲ್ ಪ್ರಕ್ರಿಯೆ’ ವಿಷಯದ ಮೇಲೆ ಚರ್ಚೆ ನಡೆಯಿತು. ಆಫ್ಘಾನಿಸ್ತಾನದಲ್ಲಿ ಭದ್ರತೆಯ ಅಗತ್ಯತೆ ಬಗ್ಗೆ  ಘನಿ ಅವರು ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದರು.
ಕಠಿಣ ಎಚ್ಚರಿಕೆ ಬಗ್ಗೆ ತಾಲಿಬಾನ್‌ನಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ರಾಯಭಾರ ಕಚೇರಿ ಮೇಲೆ ದಾಳಿ

ಕಾಬೂಲ್‌/ ನವದೆಹಲಿ (ಪಿಟಿಐ):  ಆಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯ ಮೇಲೆ ಮಂಗಳವಾರ ರಾಕೆಟ್‌ ದಾಳಿ ನಡೆದಿದ್ದು ಪ್ರಾಣಹಾನಿ ಸಂಭವಿಸಿಲ್ಲ.

ರಾಯಭಾರಿ ಮನ್‌ಪ್ರೀತ್‌ ವೋರಾ ಅವರ ನಿವಾಸದ ಸಮೀಪ ಇರುವ ಕಚೇರಿಯ ವಾಲಿಬಾಲ್‌ ಕ್ರೀಡಾಂಗಣದಲ್ಲಿ ಬೆಳಿಗ್ಗೆ 11.15 ಸುಮಾರಿಗೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ವಿದೇಶಿಯರು ಸೇರಿದಂತೆ ಗಣ್ಯ ವ್ಯಕ್ತಿಗಳು ವಾಸವಾಗಿದ್ದಾರೆ.

ಕೆಲ ದಿನಗಳ ಹಿಂದೆ ಟ್ರಕ್‌ಬಾಂಬ್‌ ಸ್ಫೋಟಿಸಿ 150ಕ್ಕೂ ಅಧಿಕ ಜನರು ಮೃತಪಟ್ಟಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಭಾರಿ ಬಂದೋಬಸ್ತ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.